ಅಹಮದಾಬಾದ್: ಮುಂಬೈ– ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ ವಿರುದ್ಧದ ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಗುಜರಾತ್ನ ರೈತ ನಾಯಕ ಜಯೇಶ್ ಪಟೇಲ್ ಸೋಮವಾರ ಬಿಜೆಪಿಗೆ ಸೇರಿದರು.
‘ಸಂತ್ರಸ್ತ ರೈತರು ಎಂದಿಗೂ ಅಭಿವೃದ್ಧಿಗೆ ವಿರೋಧಿಗಳಾಗಿರಲಿಲ್ಲ. ಅಲ್ಲದೆ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರ್ಕಾರದೊಂದಿಗಿನ ಮಾತುಕತೆಯೇ ಉತ್ತಮ ಮಾರ್ಗವಾಗಿದೆ ಎಂದು ನನಗೆ ಅರಿವಾಗಿದೆ,’ ಎಂದು ಜಯೇಶ್ ಪಟೇಲ್ ಹೇಳಿದ್ದಾರೆ.
ಗಾಂಧಿನಗರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಜಯೇಶ್ ಪಟೇಲ್ ಅವರನ್ನು ರಾಜ್ಯ ಘಟಕದ ಮುಖ್ಯಸ್ಥ ಸಿ ಆರ್ ಪಾಟೀಲ್ ಮತ್ತು ಸಚಿವ ಗಣಪತ್ ವಾಸವ ಪಕ್ಷಕ್ಕೆ ಬರಮಾಡಿಕೊಂಡರು.
ಸೂರತ್ ಮೂಲದ ಪಟೇಲ್ ದಕ್ಷಿಣ ಗುಜರಾತ್ನ ಸಹಕಾರಿ ಕ್ಷೇತ್ರದಲ್ಲಿ ಹೆಸರಾಂತ ವ್ಯಕ್ತಿ. ಅಲ್ಲದೆ, ದಕ್ಷಿಣ ಗುಜರಾತ್ನ ರೈತ ನಾಯಕರೂ ಹೌದು.
ಮುಂಬೈ–ಅಹಮದಾಬಾದ್ ಸಂಪರ್ಕಿಸುವ ಗುರಿ ಬುಲೆಟ್ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುವ ಭೂಮಿಗೆ ಉತ್ತಮ ಪರಿಹಾರ ನೀಡುವಂತೆ ಒತ್ತಾಯಿಸಿ ಸೂರತ್, ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ರೈತರು ಪಟೇಲ್ ಅವರ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳನ್ನು ನಡೆಸಿದ್ದಾರೆ.
ದಕ್ಷಿಣ ಗುಜರಾತ್ನ ರೈತರೇ ನನ್ನನ್ನು ಬಿಜೆಪಿ ಸೇರುವಂತೆ ಹೇಳಿದ್ದಾರೆ. ಬಿಜೆಪಿ ಸೇರಿದರೆ ನನ್ನಿಂದ ಹೆಚ್ಚಿನ ಸೇವೇ ಸಿಗಲಿದೆ ಎಂದು ರೈತರು ಹೇಳಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.
ಮುಂಬೈ–ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಯು ಒಟ್ಟು 508.17 ಕಿ.ಮೀ ಉದ್ದದ ಮಾರ್ಗವಾಗಿದೆ. ಈ ಯೋಜನೆಯು ಮಹಾರಾಷ್ಟ್ರದಲ್ಲಿ 155.76 ಕಿ.ಮೀ, ಗುಜರಾತ್ನಲ್ಲಿ 348.04 ಕಿ.ಮೀ, ದಾದ್ರಾ ಮತ್ತು ನಗರ ಹವೇಲಿಯಲ್ಲಿ 4.3 ಕಿ.ಮೀ ಮಾರ್ಗ ಹೊಂದಿದೆ.