ಗುವಾಹಟಿ: ಕೊರೊನಾ ವೈರಸ್ ಸೋಂಕು ಇದೀಗ ಸಮುದಾಯಕ್ಕೂ ಹರಡಿದ್ದು ಗುವಾಹಟಿಯಜನರು ಜಾಗೃತರಾಗಿರಬೇಕು ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ್ ಬಿಸ್ವಾಸ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ಕಳೆದ 10 ದಿನಗಳಲ್ಲಿ ಅಸ್ಸಾಂ ರಾಜ್ಯದಲ್ಲಿ 4500ಕ್ಕೂ ಹೆಚ್ಚುಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೂ 11 ಸಾವಿರ ಕೊರೊನಾ ಸೋಂಕಿತರ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೋವಿಡ್–19 ಪರೀಕ್ಷೆಯನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಆ್ಯಂಟಿಜೆನ್ ಮಾದರಿಯ ಪರೀಕ್ಷೆಯಲ್ಲಿ ಕೇವಲ ಒಂದು ಗಂಟೆಯಲ್ಲೇ ಫಲಿತಾಂಶ ಬರಲಿದೆ. ಈ ಮೊದಲು ಆರ್ಟಿ–ಪಿಸಿಆರ್ ಮಾದರಿಯ ಪರೀಕ್ಷೆ ನಡೆಸಲಾಗುತ್ತಿತ್ತು. ಇದರ ವರದಿ ಬರಲು 3 ರಿಂದ 4 ದಿನಗಳು ಬೇಕಾಗುತ್ತಿತ್ತು ಎಂದು ಸಚಿವರು ಮಾಹಿತಿ ನೀಡಿದರು.
ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ಒಂದೇ ದಿನ 770 ಪ್ರಕರಣಗಳು ಪತ್ತೆಯಾದರೇ, ರಾಜ್ಯದಲ್ಲಿ 1200 ಪ್ರಕರಣಗಳು ದಾಖಲಾಗಿವೆ. ಇದು ತುಂಬಾ ಆತಂಕಕಾರಿಯಾಗಿದ್ದು ಸೋಂಕು ಸಮುದಾಯಕ್ಕೆ ಹರಡಿದ್ದು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
ಗುವಾಹಟಿಯಲ್ಲಿ 14 ದಿನಗಳ ಕಠಿಣ ಲಾಕ್ಡೌನ್ ಹೇರಲಾಗಿದ್ದು, ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ದಿನಸಿ ಅಂಗಡಿಗಳು ಮಾತ್ರ ತೆರದಿರುತ್ತವೆ. ಜನರು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಹೆಚ್ಚು ಹೆಚ್ಚು ಕೋವಿಡ್–19 ಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ. ನಾವು ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಬಿಸ್ವಾಸ್ ಶರ್ಮಾ ಹೇಳಿದ್ದಾರೆ.