ರಾಂಚಿ: ಕೋವಿಡ್–19 ಸೋಂಕಿತ ಸಚಿವರೊಬ್ಬರನ್ನು ಈಚೆಗೆ ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮನೆಯಲ್ಲೇ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಯವರು ಇತ್ತೀಚೆಗೆ ಸಚಿವ ಮಿಥಿಲೇಶ್ ಠಾಕೂರ್ ಅವರನ್ನು ಭೇಟಿಯಾಗಿದ್ದರು. ಅವರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಪ್ರತ್ಯೇಕ ವಾಸ ಮಾಡುತ್ತಿರುವ ಸೊರೇನ್ ಅವರು, ಮುಖ್ಯಮಂತ್ರಿಗಳ ಕಚೇರಿ ಉದ್ಯೋಗಿಗಳೂ ಮನೆಯಲ್ಲೇ ಪ್ರತ್ಯೇಕ ವಾಸ ಮಾಡುವಂತೆ ಸೂಚಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಠಾಕೂರ್ ಅವರು ಶೀಘ್ರ ಗುಣಮುಖರಾಗಲಿ ಎಂದು ಸೊರೇನ್ ಹಾರೈಸಿದ್ದಾರೆ. ಸೊರೇನ್ ಅವರ ಗಂಟಲ ದ್ರವದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್ನಲ್ಲಿ ಮಂಗಳವಾರ ರಾತ್ರಿವರೆಗಿನ ಲೆಕ್ಕಾಚಾರದ ಪ್ರಕಾರ 3,018 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 22 ಮಂದಿ ಮೃತಪಟ್ಟಿದ್ದು, ಸದ್ಯ 892 ಸಕ್ರಿಯ ಪ್ರಕರಣಗಳಿವೆ.