ಬೆಂಗಳೂರು: ಎಸ್ಎಸ್ಎಲ್ಸಿಯಲ್ಲಿ ಶೇ 97.28ರಷ್ಟು ಅಂಕ ಗಳಿಸಿದ್ದಕ್ಕೆ ‘ಪ್ರಜಾವಾಣಿ’ಯಿಂದ ವಿದ್ಯಾರ್ಥಿ ವೇತನ ಪಡೆದಿದ್ದ ವಿದ್ಯಾರ್ಥಿಯೊಬ್ಬರು, ಪಿಯುಸಿಯಲ್ಲಿಯೂ ಶೇ 97.66ರಷ್ಟು ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಉತ್ತರ ಜಿಲ್ಲೆ ಅರಿಷಿಣಗುಂಟೆಯ ಬಿಜಿಎಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಸ್. ಚಂದ್ರಶೇಖರ್ ವಿಜ್ಞಾನ ವಿಭಾಗದಲ್ಲಿ 586 ಅಂಕಗಳನ್ನು ಗಳಿಸಿದ್ದಾರೆ. ಗಣಿತ, ಭೌತವಿಜ್ಞಾನ, ರಾಸಾಯನಿಕ ವಿಜ್ಞಾನದಲ್ಲಿ ತಲಾ 99 ಅಂಕ ಪಡೆದಿದ್ದಾರೆ.
‘ಅಪ್ಪ–ಅಮ್ಮ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ. ಮನೆಯಲ್ಲಿ ಬಡತನವಿದೆ. ಎಸ್ಎಸ್ಎಲ್ಸಿ ನಂತರ ‘ಪ್ರಜಾವಾಣಿ’ಯಿಂದ ಸಿಕ್ಕ ನೆರವಿನಿಂದ ಪುಸ್ತಕಗಳನ್ನು ಖರೀದಿಸಿದ್ದೆ. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬ ಹಂಬಲವಿದೆ. ಯಾರಾದರೂ ಆರ್ಥಿಕ ನೆರವು ನೀಡಿದರೆ ಸಹಾಯವಾಗುತ್ತದೆ’ ಎಂದು ಚಂದ್ರಶೇಖರ್ ಮನವಿ ಮಾಡಿದರು.
ಹಾಸನ ಜಿಲ್ಲೆ ಶ್ರವಣಬೆಳಗೊಳದ ಕುಂಭೇನಹಳ್ಳಿಯವರಾದ ಚಂದ್ರಶೇಖರ್ ಸದ್ಯ ಊರಿನಲ್ಲಿಯೇ ಕೃಷಿ ಕೆಲಸ ಮಾಡುತ್ತಿದ್ದಾರೆ.