ನವದೆಹಲಿ: ಹಳ್ಳಿಯೊಂದರ ಮೇಲೆ ಲಾಕ್ಡೌನ್ ಪರಿಣಾಮ ಕುರಿತು ವರದಿ ಮಾಡಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಪತ್ರಕರ್ತೆ ವಿರುದ್ಧ ಎಫ್ಐಆರ್ ದಾಖಲಿಸಿರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ಹೇಳಿದ್ದಾರೆ.
ಪತ್ರಕರ್ತೆ ವಿರುದ್ಧ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಸತ್ಯ ಮುಚ್ಚಿಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸ್ಕ್ರಾಲ್ ಡಾಟ್ ಇನ್ನ ಕಾರ್ಯ ನಿರ್ವಾಹಕ ಸಂಪಾದಕಿ ಸುಪ್ರಿಯಾ ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ. ಲಾಕ್ಡೌನ್ನಿಂದಾಗಿ ಹಳ್ಳಿಯೊಂದರ ಮೇಲೆ ಆದ ಪರಿಣಾಮ ಕುರಿತು ಇವರು ತಮ್ಮ ವರದಿಯಲ್ಲಿ ತಪ್ಪಾಗಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಸತ್ಯ ತಿಳಿದಾಗ ತಪ್ಪನ್ನು ಸರಿಪಡಿಸಲು ಸಾಧ್ಯವಿದೆ. ಆದರೆ ಉತ್ತರಪ್ರದೇಶ ಸರ್ಕಾರ ಪತ್ರಕರ್ತರು, ನಿವೃತ್ತ ಅಧಿಕಾರಿಗಳು ಮತ್ತು ವಿರೋಧ ಪಕ್ಷಗಳ ನಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಇದು ನಾಚಿಕೆಗೇಡು ಎಂದು ಪ್ರಿಯಾಂಕಾ ಹೇಳಿದ್ದಾರೆ.
ವಾರಾಣಸಿ ಕ್ಷೇತ್ರದಲ್ಲಿ ಬರುವ ದೊಮರಿ ಹಳ್ಳಿಯ ನಿವಾಸಿ ಮಾಲಾದೇವಿ ಅವರು ನೀಡಿದ ದೂರಿದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪ್ರಧಾನಿ ಮೋದಿ ಅವರು ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಮನೆಗೆಲಸ ಮಾಡುವ ಮಾಲಾದೇವಿ ಅಗತ್ಯ ಆಹಾರ ಪದಾರ್ಥಗಳ ಕೊರತೆ ಎದುರಿಸುತ್ತಿದ್ದಾರೆ. ಅವರ ಬಳಿ ಪಡಿತರ ಚೀಟಿ ಇಲ್ಲ. ಅವರ ಹೇಳಿಕೆಯನ್ನು ತಿರುಚಿ ವರದಿ ಮಾಡಲಾಗಿದೆ ಎಂದು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆಯಡಿ ಪ್ರಕರಣ ದಾಖಲಾಗಿದೆ.