ನವದೆಹಲಿ: ಭವಿಷ್ಯದಲ್ಲಿ ಜಿಡಿಪಿ ಎಂಬ ಪರಿಕಲ್ಪನೆಯೇ ಇರುವುದಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ದೇಶದ ಜಿಡಿಪಿ ನೆಲಕಚ್ಚಿರುವ ವಿಚಾರವಾಗಿ ಸೋಮವಾರ ಸಂಸತ್ನಲ್ಲಿ ಮಾತನಾಡಿರುವ ಅವರು, ‘ಭವಿಷ್ಯದಲ್ಲಿ ಜಿಡಿಪಿ ಅಪ್ರಸ್ತುತವಾಗಲಿದೆ. ಜಿಡಿಪಿಗಿಂತ ಜನರು ಸಂತೋಷವಾಗಿರುವುದು ಮುಖ್ಯ,’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
‘1934ರಲ್ಲಿ ಜಿಡಿಪಿ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಅದಕ್ಕಿಂತ ಮೊದಲು ಜಿಡಿಪಿಯೇ ಇರಲಿಲ್ಲ. ಆ ಕಾರಣ, ಜಿಡಿಪಿಯನ್ನು ಬೈಬಲ್, ರಾಮಾಯಣ ಅಥವಾ ಮಹಾಭಾರತದ ರೀತಿ ಪರಿಗಣಿಸಬಾರದು. ಆರ್ಥಿಕ ಸೂಚಕವಾಗಿ ಜಿಡಿಪಿಯನ್ನು ಬಳಸುವುದರಿಂದ ಯಾವುದೇ ಉಪಯೋಗವಿಲ್ಲ,’ ಎಂದಿದ್ದಾರೆ.
Nishikant Dubey, BJP MP in Lok Sabha: GDP 1934 mein aaya issey pehle koi GDP nahi tha...... Keval GDP ko Bible, Ramayan ya Mahabharat maan lena satya nahi hai aur future mein GDP ka koi bahot zyada upyog bhi nahi hoga. pic.twitter.com/MVF4j07KF9
ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ಶೇ.4.5ಕ್ಕೆ ಇಳಿದಿದೆ. ಕಳೆದ ಆರು ವರ್ಷಗಳಲ್ಲಿ ಅತೀ ಕಡಿಮೆ ಜಿಡಿಪಿ ಇದಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಜಿಡಿಪಿ ನೆಲಕಚ್ಚಲು ಕಾರಣವೆಂದು ವಿರೋಧ ಪಕ್ಷಗಳು ಮತ್ತು ಆರ್ಥಿಕ ತಜ್ಞರು ಆರೋಪಿಸಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಸಂಸದರೊಬ್ಬರು ನೀಡಿದ ಹೇಳಿಕೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.