ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ದಿವಸ್ ಬೇಡ ಎಂಬ ಕೂಗು ಯಾಕೆ? 

Last Updated 14 ಸೆಪ್ಟೆಂಬರ್ 2019, 3:58 IST
ಅಕ್ಷರ ಗಾತ್ರ

ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಹಿಂದಿ ದಿವಸ್ ಆಚರಣೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆಗೆ ಸಿದ್ಧತೆ ನಡೆಸುತ್ತಿದಂತೆ ಕರ್ನಾಟಕದಲ್ಲಿ ಹಿಂದಿ ದಿವಸ್ ಬೇಡ ಎಂಬ ಕೂಗು ಎದ್ದಿದೆ. ಈ ಕೂಗುನಿನ್ನೆ ಮೊನ್ನೆಯದಲ್ಲ. ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ಸಿಡಿದೆದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸೆಪ್ಟೆಂಬರ್ 5ರಂದು ಹಿಂದಿ ದಿವಸ್ ಬೇಡ ಎಂದು ನೆಟ್ಟಿಗರು ಟ್ಟೀಟ್ ಅಭಿಯಾನ ನಡೆಸಿದ್ದರು. ಒಂದು ಕಡೆ ಹಿಂದಿ ಹೇರಿಕೆ ವಿರುದ್ಧದ ದನಿ ಜೋರಾಗುತ್ತಿದ್ದಂತೆ ಹಿಂದಿ ದಿವಸ್ ಎಂಬ ಆಚರಣೆ ನಮ್ಮ ಮುಂದಿದೆ. ಹಿಂದಿ ಭಾಷೆಯನ್ನು ಉತ್ತೇಜಿಸಲು ಮತ್ತು ದೇಶದಾದ್ಯಂತ ಪ್ರಸಾರ ಮಾಡುವುದಕ್ಕಾಗಿ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಮಾಡಲಾಗುತ್ತದೆ.


ಹಿಂದಿ ದಿವಸ್ ಯಾಕೆ?
1949 ಸೆಪ್ಟೆಂಬರ್ 14ರಂದು ಭಾರತದ ಸಂವಿಧಾನ ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿದ್ದರಿಂದ ಈ ದಿನವನ್ನು ಹಿಂದಿ ದಿವಸ್ ಆಗಿ ಆಚರಣೆ ಮಾಡಲಾಗುತ್ತದೆ. ಹಿಂದಿ ಭಾಷೆ ಇತರ 21 ಭಾಷೆಗಳಂತೆ ಅಧಿಕೃತ ಭಾಷೆಯಾಗಿದ್ದರೂ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಹುಸಿ ನಾಮಕರಣ ಮಾಡಿರುವುದು ಹಿಂದಿ ದಿವಸ್ ದೇಶದಲ್ಲಿ ಇನ್ನಷ್ಟು ಪ್ರಚಾರ ಪಡೆಯಲು ಸಹಕಾರಿಯಾಗಿದೆ.

ಹಿಂದಿ ಹೇರಿಕೆಯ ವಿರೋಧದ ದನಿ
ನಮ್ಮ ದೇಶವನ್ನು ಭಾಷಾವಾರು ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಭಾಷೆ ಇದೆ. ಹೀಗಿರುವಾಗ ಇನ್ನೊಂದು ಭಾಷೆಯನ್ನು ಹೇರುವುದು ಸರಿಯಲ್ಲ ಎಂಬುದೇ ಹಿಂದಿ ಹೇರಿಕೆ ವಿರುದ್ಧದ ಕೂಗು. ಹಿಂದಿ ದಿವಸ್ ಆಚರಣೆಯೂ ಹಿಂದಿ ಹೇರಿಕೆಯ ಭಾಗವೇ ಆಗಿದೆ. ಸಂವಿಧಾನದ 343ರಿಂದ 351ರ ವರೆಗಿನ ವಿಧಿಗಳು ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನವನ್ನು ನೀಡಿದೆ. ಇದರಿಂದಾಗಿ ಕರ್ನಾಟಕ/ ಕನ್ನಡಕ್ಕೆ ಬೇಕಾಗಿರುವ ಫಂಡ್ / ನಿಧಿ ಸಿಗುವುದಿಲ್ಲ. ಕೇಂದ್ರ ಸರ್ಕಾರದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇದರಲ್ಲಿ ಬಹುತೇಕ ಪರೀಕ್ಷೆಗಳು ಇರುವುದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ. ಯುಪಿಎಸ್‌ಸಿ ಮೊದಲನೇ ಹಂತದ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ. ಮುಖ್ಯ ಪರೀಕ್ಷೆ ಮಾತ್ರ ಕನ್ನಡದಲ್ಲಿರುತ್ತದೆ. ಹಿಂದಿ ಬಲ್ಲವರಾಗಿದ್ದರೆ ಮೊದಲ ಹಂತದಲ್ಲಿ ಪರೀಕ್ಷೆ ಪಾಸಾಗಬಹುದು. ಅದೇ ವೇಳೆ ಇತರ ಭಾಷಿಗರು ಇಂಗ್ಲಿಷಿನಲ್ಲಿಯೇ ಪರೀಕ್ಷೆ ಬರೆಯಬೇಕಾಗುವ ಅನಿವಾರ್ಯ ಪರಿಸ್ಥಿತಿ. ಹಾಗಾಗಿ ಇಲ್ಲಿ ತಾರತಮ್ಯ ನಡೆಯುತ್ತಿದೆ. SSC ಪರೀಕ್ಷೆಯಲ್ಲಿ ಸಿ ಮತ್ತು ಡಿ ಗ್ರೂಪ್‌ಗೆ ವಲಯ/ ರಾಜ್ಯ ಹಂತದ ಪರೀಕ್ಷೆ ಕೂಡಾ ಹಿಂದಿ / ಇಂಗ್ಲಿಷ್ ನಲ್ಲಿಯೇ ಇರುತ್ತದೆ. ಈ ರೀತಿಯ ಪರೀಕ್ಷೆಗಳಿಗೆ ಹಿಂದಿ/ ಇಂಗ್ಲಿಷ್ ಭಾಷಾ ಆಯ್ಕೆ ಕೊಟ್ಟಾಗ ಕರ್ನಾಟಕದ ಹೊರಗಿನವರು ಬಂದು ಪರೀಕ್ಷೆ ಬರೆಯುತ್ತಾರೆ. ಇಲ್ಲಿಯವರುವ ಉದ್ಯೋಗವಕಾಶ ವಂಚಿತರಾಗುತ್ತಾರೆ.

ಹಿಂದೆ ಹೇರಿಕೆ ಎಂಬುದು ಹೊಸತೇನಲ್ಲ. ಕಳೆದ 70 ವರ್ಷಗಳಿಂದ ನಿಧಾನವಾಗಿ ಹಂತ ಹಂತವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಿಂದ ಹಿಂದಿ ಹೇರಿಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

––ಅರುಣ್ ಜಾವಗಲ್

-----
ಹಿಂದಿ ಭಾಷಿಗರಲ್ಲದವರ ಮನವೊಲಿಸಿ ಹಿಂದಿ ಬಳಕೆ ಮಾಡಿ ಎಂದು ಹೇಳಲಾಗುತ್ತಿದೆ. ಜನರು ಹಿಂದಿ ಭಾಷೆಯನ್ನು ಒಪ್ಪಿಕೊಂಡಿದ್ದರೆ ಇದೇನೂ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಒತ್ತಾಯಪೂರ್ವಕವಾಗಿ ಹಿಂದಿ ಬಳಸಿ ಎಂಬುದರ ಬಗ್ಗೆಯೇ ನಮಗೆ ವಿರೋಧವಿರುವುದು. ಹಿಂದಿ ದಿವಸ್ ಮಾಡಿ , ಆದರೆ ಇತರ ರಾಜ್ಯಗಳ ಭಾಷೆಗಳನ್ನೂ ಸಮಾನವಾಗಿ ಕಾಣಿ. ಹಿಂದಿ ಭಾಷೆ ಮಾತ್ರ ಅಧಿಕೃತ ಭಾಷೆಯಲ್ಲ. ಎಲ್ಲ ಅಧಿಕೃತ ಭಾಷೆಗಳಿಗೂ ಇದೇ ರೀತಿಯ ಮನ್ನಣೆ ನೀಡಿ.

ಭಾಷೆ ಮತ್ತು ಬದುಕು ಬೇರೆ ಬೇರೆ ಅಲ್ಲ. ಬ್ಯಾಂಕ್‌ಗಳಲ್ಲಿ ಹಿಂದಿಯಲ್ಲಿ ಮಾತನಾಡಿದರೆ ಭಾಷೆ ಅರಿಯದವರಿಗೆ ಅದು ಕಷ್ಟವೇ. ಭಾರತ ಒಕ್ಕೂಟವು ನಂಬಿಕೆ ಮೇಲೆ ರೂಪುಗೊಂಡಿರುವುದು. ಕೇಂದ್ರ ಸ್ಥಾನದಲ್ಲಿರುವವರು ಎಲ್ಲರನ್ನೂ ಸಮಾನರನ್ನಾಗಿ ಕಾಣಬೇಕು. ಒಂದು ದಶಕದಿಂದ ಹಿಂದಿಯ ಪರಿಣಾಮಗಳು ಜಾಸ್ತಿಯಾಗುತ್ತಲೇ ಇದೆ. ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಬರುತ್ತಿದ್ದಾರೆ. ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದೇ ಇದಕ್ಕೆ ಕಾರಣ . ಬ್ಯಾಂಕಿಂಗ್ ,ರೈಲ್ವೆ ಪರೀಕ್ಷೆಗಳು ಹಿಂದಿಯಲ್ಲಿರುವುದರಿಂದ ಅನ್ಯರಾಜ್ಯದವರು ಹಿಂದಿಯೇತರ ರಾಜ್ಯಗಳಿಗೆ ವಲಸೆ ಬರುವಂತೆ ಮಾಡುತ್ತದೆ. ಇತ್ತ ಕೇಂದ್ರ ಸರ್ಕಾರದ ಲಗಾಮು ಹಿಂದಿ ಭಾಷಿಕ ರಾಜ್ಯಗಳ ಕೈಯಲ್ಲಿದೆ. ಹಿಂದಿಯನ್ನು ಹೇರಿಕೆ ಮಾಡಿದಾಗ ಅನ್ಯ ಭಾಷಿಗರು ಅದೇ ಭಾಷೆಯಲ್ಲಿ ವ್ಯವಹರಿಸಬೇಕಾಗುತ್ತದೆ. ಇದು ಭಾಷೆಗೆ ಮಾಡುವ ಅನ್ಯಾಯ
-ದಿನೇಶ್ ಕುಮಾರ್ ಎಸ್.ಸಿ

**
ಹಿಂದಿ ಭಾಷೆಯನ್ನು ಕೇಂದ್ರ ಸರ್ಕಾರ ಅಧಿಕೃತ ಭಾಷೆಯನ್ನಾಗಿ ಮಾಡಿದೆ. It has been the policy of the government of India that progressive use of Hindi in the official work may be ensured through persuasion, incentive and goodwill.

ಒತ್ತಾಯ, ಆಮಿಷ, ವಿಶ್ವಾಸ ಈ ಮೂರು ತಂತ್ರಗಳನ್ನು ಒಡ್ಡಿ ಕೇಂದ್ರ ಸರ್ಕಾರದ ಕೆಲಸಗಳನ್ನು ಹಿಂದಿಯಲ್ಲಿಯೇ ಮಾಡಿಸಬೇಕು ಎಂಬ ಹುನ್ನಾರವನ್ನು ಮಾಡುತ್ತಿದೆ. ಹಿಂದಿ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಮಾಡುವುದೇ ಹಿಂದಿ ದಿವಸ್‌ನ ಉದ್ದೇಶ. ಭಾರತ ಬಹುಭಾಷಿಕರ ನಾಡು. ಇಲ್ಲಿ ಎಲ್ಲ ಭಾಷೆಗಳೂ ಸರಿ ಸಮಾನ. ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಬೇಕು. ಹಿಂದಿ ಹೇರಿಕೆ ನಿಂತರೆ ವಲಸೆಗೂ ಕಡಿವಾಣ ಹಾಕಿದಂತಾಗುತ್ತದೆ. ಭಾಷಾ ಸಮಾನತೆ ಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾ ಸಮಾನತೆಯೂ ಸ್ವಾತಂತ್ರ್ಯದಷ್ಟೇ ಮುಖ್ಯ
–ಆನಂದ ಗುರು

***

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT