ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಗಂಟೆಗೆ 6.40ಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇಲ್ಲಿನ ಹೊರವಲಯದ ಗಬ್ಬೂರು ಬೈಪಾಸ್ ಬಳಿ ಇರುವ ಕೆಎಲ್ಇ ಸಂಸ್ಥೆಯ ಉದ್ದೇಶಿತ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮೈದಾನದಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಧಾನಿಯವರ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಮೂರು ದಿನಗಳ ಹಿಂದೆಯೇ ನಗರದಲ್ಲಿ ಬೀಡು ಬಿಟ್ಟಿದ್ದು, ಭದ್ರತಾ ಉಸ್ತುವಾರಿಯ ಮೇಲ್ವಿಚಾರಣೆ ವಹಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿರುವುದರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಪ್ರಧಾನಿಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ (ಐಐಐಟಿ)ಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ.
ಧಾರವಾಡದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಿದ 2350 ಮನೆಗಳ ಇ-ಗೃಹ ಪ್ರವೇಶವನ್ನು ಮೋದಿ ನೆರವೇರಿಸಿದ್ದಾರೆ.
Overwhelmed by the strong support in Hubballi. Speaking at a rally. Watch. https://t.co/Kw9CDUh1mr
— Narendra Modi (@narendramodi) February 10, 2019
ಮೋದಿ ಭಾಷಣದ ಹೈಲೈಟ್ಸ್
* ಇಲ್ಲಿ ನರೆದಿರುವ ಜನರನ್ನು ನೋಡಿದರೆ ಕರ್ನಾಟಕದಲ್ಲಿನ ರಾಜಕೀಯ ವಾತಾವರಣದಲ್ಲಿ ಬದಲಾವಣೆಯನ್ನು ನಾನು ಕಾಣುತ್ತಿದ್ದೇನೆ ಎಂದು ಮೋದಿ ಭಾಷಣ ಆರಂಭಿಸಿದ್ದಾರೆ.
*ಕರ್ನಾಟಕದ ಅಭಿವೃದ್ಧಿ ಮತ್ತು ಬಡವರ ಅಭಿವೃದ್ಧಿಗಾಗಿ ದುಡಿದ ಶ್ರೀ ಅನಂತ್ ಕುಮಾರ್ ಅವರನ್ನು ನಾನಿಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
*ಜನರ ಹಿತಕ್ಕಾಗಿ ದುಡಿದ ಸಿದ್ದಗಂಗಾಮಠ ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
*₹5,000 ಕೋಟಿ ವೆಚ್ಚದ ಯೋಜನೆಯನ್ನು ಕೆಲವೇ ಕ್ಷಣಗಳ ಹಿಂದೆ ಉದ್ಘಾಟಿಸಲಾಗಿದೆ.ಮುಂದಿನ ಜನಾಂಗಕ್ಕಾಗಿ ನಾವು ದೇಶದ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸುತ್ತಿದ್ದೇವೆ.
*ಕಳೆದ ನಾಲ್ಕು ವರ್ಷಗಳಿಂದ ನಾವು ನಿರಂತರವಾಗಿಬಡವರ ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿಗಾಗಿ ದುಡಿದಿದ್ದೇವೆ. ಇನ್ನು ಮುಂದೆಯೂ ನಾವು ಅದನ್ನು ಮುಂದುವರಿಸುತ್ತೇವೆ.
*ನಮ್ಮ ಸರ್ಕಾರ 55 ತಿಂಗಳಲ್ಲಿ 77 ಲಕ್ಷ ಮನೆ ಮಂಜೂರು ಮಾಡಿದೆ.ನಗರ ಪ್ರದೇಶಗಳಲ್ಲಿ 13 ಲಕ್ಷ ಮನೆ ಮಂಜೂರು ಮಾಡಿದ್ದು, ಇದರಲ್ಲಿ 8 ಲಕ್ಷ ಮನೆ ಪೂರ್ಣಗೊಂಡಿದೆ.ಮಂಜೂರಾದ 77 ಲಕ್ಷ ಮನೆಗಳ ಪೈಕಿ 15 ಲಕ್ಷ ಮನೆಗಳ ಕೆಲಸ ಪೂರ್ಣಗೊಂಡಿದೆ.
ಇದೇ ಮೊದಲ ಬಾರಿ ಸರ್ಕಾರವೊಂದು ಮಧ್ಯಮ ವರ್ಗದವರಿಗೆ ಮನೆ ಸೌಲಭ್ಯದ ಬಗ್ಗೆ ಯೋಚಿಸಿದ್ದು. ಹಾಗಾಗಿ ಮನೆ ಸಾಲದ ಬಡ್ಡಿದರದಲ್ಲಿ ವಿನಾಯಿತಿ ನೀಡಲು ಹೊಸ ಕೆಟಗರಿ ಮಾಡಲಾಗಿದೆ.
*ಇತ್ತೀಚಿನ ಬಜೆಟ್ನಲ್ಲಿ ₹5 ಲಕ್ಷದವರೆಗೆ ವೇತನ ಇರುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
*ಕೆಲವೊಬ್ಬರು ತಮ್ಮ ಸಂಪಾದನೆ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ ಎಂದು ಭಾವಿಸಿದ್ದರು,.ಆದರೆ ಅವರು ಲೂಟಿ ಮಾಡಿದ್ದನ್ನು ಈಗ ಪ್ರಶ್ನಿಸಲಾಗುತ್ತಿದೆ.ಲೂಟಿ ಮಾಡಿದವರು ವಿದೇಶದಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ.
*ವಿಪಕ್ಷದಲ್ಲಿರುವವರಿಗೆ ಬಡವರ,ಯುವಜನಾಂಗ ಮತ್ತು ಬಡವರ ಕಾಳಜಿ ಇಲ್ಲ.ಅವರೆಲ್ಲರೂ ಸ್ವಾರ್ಥಿಗಳಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಾರೆ.
*ನೂತನ ಭಾರತ ಮಜ್ಬೂತಿ (ಸುದೃಢ) ಬಯಸುತ್ತಿದೆ.ಮಜ್ಬೂರಿ ( ನಿಸ್ಸಹಾಯಕತೆ) ಅಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.