ತಾವರಗೇರಾ: ಪ್ರತಿದಿನ ಬೆಳಿಗ್ಗೆ ಚಿಕ್ಕದೊಂದು ಟಾಟಾ ಗೂಡ್ಸ್ ಗಾಡಿಯಲ್ಲಿ ಹೊರಟು ಗ್ರಾಮದ ರಸ್ತೆ ಪಕ್ಕ ಹಾಗೂ ಹೊರಗಡೆ ಹಾಕಿರುವ ತಿಪ್ಪೆಯಲ್ಲಿ ಕಾಣುವ ಈ ಯುವಕರ ದಂಡು, ಬಳಸಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲ, ರಟ್ಟು, ನೀರಿನ ಬಾಟಲ್ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸುವಂತಹ ಕೂಲಿ ಕೆಲಸ ಮಾಡುತ್ತಿದ್ದಾರೆ
ತಾವರಗೇರಾ ಸುತ್ತಲಿನ ಗ್ರಾಮಗಳಿಗೆ ಗೂಡ್ಸ್ ವಾಹನದಲ್ಲಿ ಬರುವ ಈ ತಂಡ, ತಮಗೆ ಸಿಗುವ ಕೂಲಿ ಹಣದಿಂದ ಜೀವನ ನಡೆಸುವ ಈ ಯುವಕರು ಶೂನ್ಯ ಬಂಡವಾಳದ ಉದ್ಯೋಗದಿಂದ ತಮಗೆ ಕೆಲಸ ನೀಡುತ್ತಿರುವ ಮಾಲೀಕನಿಗೆ ಅಧಿಕ ಲಾಭ ತಂದು ಕೊಡುತ್ತಿದ್ದಾರೆ.
ಮುಳ್ಳು, ಕಲ್ಲು ಎನ್ನದೆ ತಿಪ್ಪೆ ಮತ್ತು ರಸ್ತೆ ಪಕ್ಕದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಚೀಲ, ರಟ್ಟು, ನೀರಿನ ಬಾಟಲ್ ಚೀಲಕ್ಕೆ ತುಂಬಿ ವಾಹನಕ್ಕೆ ಹಾಕುತ್ತಾರೆ. ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆ 5ಗಂಟೆವರೆಗೆ ಹತ್ತಾರು ಗ್ರಾಮಗಳಲ್ಲಿ ಸಂಚರಿಸಿ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದಾರೆ.
ಹೀಗೆ ಕೆಲಸ ಮಾಡುವ ಯುವಕರಿಗೆ ಪ್ರತಿ ದಿನ ₹300 ಕೂಲಿ ನೀಡುತ್ತಿದ್ದಾರೆ ಗಂಗಾವತಿ ಮೂಲದ ವಾಹನ ಮಾಲೀಕ ಕಲಂದಾರ್. ಈ ಯುವಕರು ತರುವ ತ್ಯಾಜ್ಯವನ್ನು ಕ್ಷಿಂಟಲ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಶೂನ್ಯ ಬಂಡವಾಳದ ಈ ಉದ್ಯೋಗದಿಂದ ನಿರುದ್ಯೋಗಿ ಯುವಕರಿಗೆ ಕೆಲಸ ನೀಡುತ್ತಿದ್ದಾರೆ. ಆದರೆ ದಿನಕ್ಕೆ 50 ರಿಂದ 60 ಕೆ.ಜಿ ತ್ಯಾಜ್ಯ ಸಿಗುತ್ತಿದೆ. ಕೆಲ ದಿನ ಒಂದು ಕ್ವಿಂಟಲ್ ಸಂಗ್ರಹವಾದರೆ ವಾಹನ ಬಾಡಿಗೆ, ಯುವಕರ ಕೂಲಿ ಹಣ ಖರ್ಚು ತೆಗೆದರೆ ಲಾಭ ಸಿಗುತ್ತದೆ. ಇದರಿಂದ ಸುತ್ತಲಿನ ವಾತಾವರಣವು ಸ್ವಚ್ಛಗೊಳ್ಳುವುದರ ಜತೆಗೆ ನಮ್ಮ ಮಾಲೀಕರಿಗೆ ಉದ್ಯೋಗ ಸಿಕ್ಕಂತಾಗಿದೆ ಎನ್ನುತ್ತಾರೆ’ ಕೂಲಿಕಾರ ದಾವಲಸಾಬ.