ಲಖನೌ: ಶಾಲೆಯ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುವ ಆಹಾರದ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ಈಗ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ.
ಈ ಆಹಾರ ಸೇವಿಸಿದ ಶಿಕ್ಷಕಿ ಮತ್ತು 9 ಮಂದಿ ವಿದ್ಯಾರ್ಥಿಗಳು ಸದ್ಯ ಅಸ್ವಸ್ಥರಾಗಿದ್ದಾರೆ.
ಉತ್ತರ ಪ್ರದೇಶದ ಮುಜಪ್ಫರನಗರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು,ಜನ ಕಲ್ಯಾಣ ಸಮಿತಿ ಎಂಬ ಸರ್ಕಾರೇತರ ಸಂಸ್ಥೆಯು ಈ ಆಹಾರವನ್ನು ಪೂರೈಸಿತ್ತು. 6–8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರೈಸಿದ ಆಹಾರದಲ್ಲಿ ಇಲಿ ಸಿಕ್ಕಿದೆ.
‘ಸಾಂಬಾರ್ನಲ್ಲಿ ಇಲಿ ಪತ್ತೆಯಾಯಿತು. ಸಾಂಬಾರ್ನ ತಳದಲ್ಲಿ ಇಲಿ ಅವಶೇಷವಿತ್ತು,’ ಎಂದು ಆರನೇ ತರಗತಿಯ ವಿದ್ಯಾರ್ಥಿ ಶಿವಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆ ಕುರಿತು ಸರ್ಕಾರ ಈ ವರೆಗೆ ಏನನ್ನೂ ಮಾತನಾಡಿಲ್ಲವಾದರೂ, ಘಟನೆ ಸಂಬಂಧ ತನಿಖೆಗೆ ಆದೇಶಿಸಿದೆ. ಆಹಾರ ಪೂರೈಸಿದ ಸಂಸ್ಥೆಯ ಕುರಿತು ಜಿಲ್ಲಾಧಿಕಾರಿಗಳು ವರದಿ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಆಹಾರದಲ್ಲಿ ಸರ್ಕಾರದ ಅಸಡ್ಡೆ
ಉತ್ತರ ಪ್ರದೇಶ ಇತ್ತೀಚೆಗೆ ವಿದ್ಯಾರ್ಥಿಗಳ ಆಹಾರದಲ್ಲಿನ ಅವಾಂತರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಕೆಲ ತಿಂಗಳ ಹಿಂದೆ ಮಿರ್ಜಾಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವಾಗಿ ಚಪಾತಿ ಮತ್ತು ಅದರ ಜತೆಗೆ ಉಪ್ಪು ನೀಡುತ್ತಿರುವ ಸಂಗತಿ ಬಯಲಾಗಿತ್ತು.
ಸೋನಾಭದ್ರ ಜಿಲ್ಲೆಯಲ್ಲಿ ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು ಸುರಿಯುತ್ತಿರುವ ಪ್ರಕರಣವೂ ಬಹಿರಂಗಗೊಂಡಿತ್ತು.
ಈ ಎರಡೂ ಪ್ರಕರಣಗಳ ವಿಡಿಯೊಗಳು ದೇಶಾದ್ಯಂತ ವೈರಲ್ ಆಗಿತ್ತು.