ಲಖನೌ: ಉತ್ತರ ಪ್ರದೇಶದಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಗುರುವಾರಬೆಳಗ್ಗೆ ನ್ಯಾಯಾಲಯದ ವಿಚಾರಣೆಗಾಗಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಈಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದು, ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ರಾಯ್ಬರೇಲಿಗೆ ಬರುವುದಕ್ಕಾಗಿ ಮುಂಜಾನೆ4.30ಕ್ಕೆ ಬೈಸ್ವಾರಾ ಬಿಹಾರ್ರೈಲು ನಿಲ್ದಾಣಕ್ಕೆ ಹೋಗುತ್ತಿದ್ದಾಗದುಷ್ಕರ್ಮಿಗಳು ಆಕೆಯನ್ನು ತಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆಯ ಹೇಳಿಕೆ ಪ್ರಕಾರ 6 ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ತಲೆಗೆ ಹೊಡಿದು, ಕತ್ತಿಯಿಂದ ಕುತ್ತಿಗೆಗೆ ಇರಿದಿದ್ದಾರೆ. ಆಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಗೌರಾ ಕ್ರಾಸಿಂಗ್ನಲ್ಲಿ ಹರಿಶಂಕರ್ ತ್ರಿವೇದಿ, ಕಿಶೋರ್, ಶುಭಂ, ಶಿವಂ, ಉಮೇಶ್ ಮತ್ತು ಇಬ್ಬರು ತನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದು, ಇದರಲ್ಲಿ ಇಬ್ಬರು ಅತ್ಯಾಚಾರ ಪ್ರಕರಣದ ಆರೋಪಿಗಳಾಗಿದ್ದಾರೆ.
ಈವೇಳೆ ಅಲ್ಲಿದ್ದ ಜನರು ಸಂತ್ರಸ್ತೆಯ ರಕ್ಷಣೆಗಾಗಿ ಓಡಿ ಬಂದಾಗ ದುರ್ಷರ್ಮಿಗಳು ಓಡಿ ಹೋಗಿದ್ದಾರೆ. ಸ್ಥಳೀಯರು112 ಸಂಖ್ಯೆಗೆ ತುರ್ತು ಕರೆ ಮಾಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 5 ಮಂದಿಯ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು ಇದರಲ್ಲಿ ಮೂವರನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳಿಗಾಗಿ ಹುಡುಕಾಟನಡೆಯುತ್ತಿದೆ ಎಂದು ಉನ್ನಾವ್ ಎಸ್ಪಿ ವಿಕ್ರಾಂತ್ ವೀರ್ ಹೇಳಿದ್ದಾರೆ.
ಸಾಮೂಹಿಕ ಅತ್ಯಾಚಾರದ ಬಗ್ಗೆ ಸಂತ್ರಸ್ತೆ ಮಾರ್ಚ್ ತಿಂಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದಲ್ಲಿ ಬಂಧಿತರಾಗಿದ್ದಇಬ್ಬರು ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.