ಬೆಂಗಳೂರು: ನಿಷೇಧಾಜ್ಞೆ ನಡುವೆಯೇ ಯುವಕನೊಬ್ಬ ಸಿಗರೇಟ್ಗಾಗಿ 12 ಕಿ.ಮೀ ಸುತ್ತಾಡಿದ್ದು, ನಿಷೇಧಾಜ್ಞೆ ಉಲ್ಲಂಘಿಸಿ ರಸ್ತೆಯಲ್ಲಿ ಸಂಚರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರನ್ನೇ ತಳ್ಳಿ ಪರಾರಿಯಾಗಿದ್ದಾನೆ.
ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 23ರಂದು ತಡರಾತ್ರಿ ಈ ಘಟನೆ ನಡೆದಿದೆ. ಆರೋಪಿ ಅನುಜ್ ಮೋಡಾ (31) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
‘ಇಂದಿರಾನಗರದ ಅನುಜ್, ಸಿಗರೇಟ್ಗಾಗಿ ತಮ್ಮ ಮನೆ ಸುತ್ತಮುತ್ತ ಹುಡುಕಾಟ ನಡೆಸಿದ್ದ. ಎಲ್ಲಿಯೂ ಅಂಗಡಿ ತೆರೆದಿರಲಿಲ್ಲ. ಬಳಿಕ, ತನ್ನ ಕಾರಿನಲ್ಲಿ ಇಂದಿರಾನಗರದಿಂದ ಬಿಟಿಎಂ ಲೇಔಟ್ಗೆ ಬಂದಿದ್ದ. ಅಲ್ಲಿಯೂ ಸಿಗರೇಟ್ ಸಿಕ್ಕಿರಲಿಲ್ಲ. ನಂತರ, ಕೋರಮಂಗಲಕ್ಕೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.
‘ಕೋರಮಂಗಲ ವಾಟರ್ ಟ್ಯಾಂಕ್ನಿಂದ ಹೋಟೆಲ್ ಸುಖಸಾಗರ್ ಜಂಕ್ಷನ್ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೆಬಲ್ ಎಚ್.ಶಿವಕುಮಾರ್ ಹಾಗೂ ಸಿಬ್ಬಂದಿ, ಆರೋಪಿಯ ಕಾರು ತಡೆದಿದ್ದರು. ಆಗ ಇಲ್ಲಿ ಎಲ್ಲಾದರೂ ಸಿಗರೇಟ್ ಸಿಗುತ್ತಾ’ ಎಂದು ಸಿಬ್ಬಂದಿಯನ್ನೇ ಆರೋಪಿ ಕೇಳಿದ್ದ. ಜತೆಗೆ, ಅವಾಚ್ಯ ಶಬ್ದಗಳಿಂದ ಸಿಬ್ಬಂದಿಯನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ’ ಎಂದರು.
‘ಆರೋಪಿಯನ್ನು ವಶಕ್ಕೆ ಪಡೆಯಲು ಸಿಬ್ಬಂದಿ ಮುಂದಾಗಿದ್ದರು. ಅದೇ ವೇಳೆಯೇ ಆರೋಪಿ ಸಿಬ್ಬಂದಿಯನ್ನು ತಳ್ಳಿ ಕಾರು ಸಮೇತ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.