ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮತ್ತೆ 5 ಜನರಲ್ಲಿ ಕೋವಿಡ್-19 ದೃಢ, ಬಾಧಿತರ ಸಂಖ್ಯೆ 9ಕ್ಕೆ

ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ತಗುಲಿದ ಸೋಂಕು
Last Updated 28 ಮಾರ್ಚ್ 2020, 5:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾರಣಾಂತಿಕ ಕೋವಿಡ್ ಸೋಂಕಿಗೆ ಗೌರಿಬಿದನೂರಿನ ಒಬ್ಬ ವೃದ್ಧೆ ಬಲಿಯಾಗಿ, ಮೂರು ಜನರು ಜೀವನ್ಮರಣದ ಹೋರಾಟ ನಡೆಸಿರುವಾಗಲೇ, ಸೋಂಕಿತರ ಸಂಪರ್ಕಕ್ಕೆ ಬಂದವರ ಪೈಕಿ ಐದು ಜನರಲ್ಲಿ ಕೋವಿಡ್ ಸೋಂಕಿರುವುದು ಶುಕ್ರವಾರ ದೃಢವಾಗಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿದ್ದು, ಜಿಲ್ಲೆಯ ನಾಗರಿಕರಲ್ಲಿ ತಲ್ಲಣ ಮೂಡಿಸಿದೆ.
ಕಳೆದ ಫೆಬ್ರುವರಿಯಲ್ಲಿ ಮೆಕ್ಕಾ ಯಾತ್ರೆ ನಡೆಸಿ ಮಾರ್ಚ್ ಎರಡನೇ ವಾರದಲ್ಲಿ ವಾಪಾಸಾಗಿದ್ದ ಗೌರಿಬಿದನೂರು ನಗರದ ನಾಲ್ಕು ಯಾತ್ರಿಕರಿಗೆ ಕೋವಿಡ್-19 ತಗಲಿರುವುದು ಮಾರ್ಚ್ 21, 23, 24 ಮತ್ತು 26 ರಂದು ದೃಢಪಟ್ಟಿತ್ತು.ಈ ಪೈಕಿ ಗೌರಿಬಿದನೂರಿನಲ್ಲಿ ಮಗನ ಮನೆಯಲ್ಲಿ ಗೃಹ ಬಂಧನದಲ್ಲಿದ್ದ ನೆರೆಯ ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕಿಗೆ ಸೇರಿದ ಮಹಿಳೆ ಮಾರ್ಚ್ 25 ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಮೊದಲು ದೃಢಪಟ್ಟ ಮೂರು ಪ್ರಕರಣಗಳ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಜನರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಗೃಹ ಬಂಧನಕ್ಕೆ ಒಳಪಡಿಸಿ, ಅವರ ಗಂಟಲ ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಶುಕ್ರವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಐದು ಜನರಲ್ಲಿ ಕೋವಿಡ್ 19 ಲಕ್ಷಣಗಳು ಇರುವುದು (ಪಾಸಿಟಿವ್) ಪತ್ತೆಯಾಗಿದೆ. ಇನ್ನು ಇಬ್ಬರಲ್ಲಿ ಸೋಂಕು ಇರುವ ಶಂಕೆ ಇದ್ದು, ಅದು ಶನಿವಾರ ಬರುವ ವರದಿಯಲ್ಲಿ ದೃಢವಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಗೌರಿಬಿದನೂರಿನಲ್ಲಿ ಗೃಹ ಬಂಧನದಲ್ಲಿ ಇದ್ದವರ ಪೈಕಿ‌ ಏಳು ಜನರನ್ನು ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸಜ್ಜುಗೊಳಿಸಿದ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಿ,‌‌ ನಿಗಾ ವಹಿಸಲಾಗಿದೆ.

ಗೌರಿಬಿದನೂರಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಜನರು‌ ಮನೆಯಿಂದ ಹೊರಬರದಂತೆ ಎಚ್ಚರಿಕೆ ‌ನೀಡುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT