ಕಲಬುರ್ಗಿ: ಕೊರೊನಾವೈರಸ್ ಸೋಂಕು ತಗುಲುವ ಭೀತಿಯ ಹಿನ್ನೆಲೆಯಲ್ಲಿ ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಕಲಬುರ್ಗಿಯಲ್ಲಿ ವೃದ್ಧರೊಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು ದೃಢಪಟ್ಟ ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಶುಕ್ರವಾರ ಇಡೀ ನಗರದಲ್ಲಿ ಆತಂಕದ ಛಾಯೆ ಆವರಿಸಿತ್ತು.
ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ರೈಲ್ವೆ ಅಧಿಕಾರಿಗಳು ಶನಿವಾರ ತುರ್ತು ಕ್ರಮ ಕೈಗೊಂಡು ತಪಾಸಣೆ ಆರಂಭಿಸಿದ್ದಾರೆ.
ಮೊದಲು ರೈಲ್ವೆ ಅಧಿಕಾರಿಗಳೇ ಸ್ಕ್ರೀನಿಂಗ್ ಮಾಡಿಸಿಕೊಳ್ಳುವ ಮೂಲಕ ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಿದರು.
ರೈಲ್ವೆ ನಿಲ್ದಾಣದ ನೆಲ, ಆಸನಗಳು, ಕುಳಿತುಕೊಳ್ಳುವ ಕಟ್ಟೆ, ಟಿಕೇಟ್ ಕೌಂಟರಿನ ಗ್ರಿಲ್, ಡೆಸ್ಕ್, ತುರ್ತು ಟಿಕೇಟ್ ನೀಡುವ ಯಂತ್ರ ಸೇರಿದಂತೆ ಇಡೀ ನಿಲ್ದಾಣದ ಇಂಚಿಂಚೂ ಬಿಡದಂತೆ ಸ್ವಚ್ಛಗೊಳಿಸಲಾಯಿತು.
ಮೈಕಿನಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರೈಲ್ವೆ ನಿಲ್ದಾಣದ ಮ್ಯಾನೇಜರ್ ಎ.ಎಸ್. ಪ್ರಸಾದರಾವ್ ತಿಳಿಸಿದ್ದಾರೆ.