ಹುಬ್ಬಳ್ಳಿ: ‘ಕಾಂಗ್ರೆಸ್ನ ಒಬ್ಬನೇ ಒಬ್ಬ ಶಾಸಕನನ್ನೂ ಬಿಜೆಪಿ ಮುಖಂಡರು ಮುಟ್ಟಲು ಸಾಧ್ಯವಿಲ್ಲ. ಸರ್ಕಾರ ಉರುಳಿಸಲು ಅಷ್ಟು ಸುಲಭವಾಗಿ ನಾವು ಬಿಡುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ಹುಷಾರ್ ಎಂದು ಜಗದೀಶ ಶೆಟ್ಟರ್ ಹೇಳುತ್ತಾರೆ. ಅವರ ಕಾರ್ಯಕರ್ತರನ್ನೇ ಹಿಡಿದಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ, ಇನ್ನೂ ನಮ್ಮ ಪಕ್ಷದ 20 ಶಾಸಕರನ್ನು ಸೆಳೆಯುತ್ತಾರೆಯೇ’ ಎಂದು ವ್ಯಂಗ್ಯವಾಡಿದರು.
ಶಿವಕುಮಾರ್ ಕಾರಿನ ಟಯರ್ನಲ್ಲಿ ಹಣ ಸಾಗಿಸುತ್ತಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಅವರ ಆರೋಪಕ್ಕೆ, ‘ಶೋಭಾ ಕರಂದ್ಲಾಜೆ ನನ್ನ ಗಾಡಿಯಲ್ಲೇ ಬಂದು ಕುಳಿತುಕೊಳ್ಳಲಿ, ಯಾರು ಬೇಡ ಅಂತಾರೆ. ಹಣವಿದ್ದರೆ ಅದನ್ನು ಅಕ್ಕನ ಬ್ಯಾಗ್ನಲ್ಲೇ ತುಂಬಿ ಕಳಿಸುತ್ತೇನೆ’ ಎಂದು ತಿರುಗೇಟು ನೀಡಿದರು.
‘ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಶಿವಕುಮಾರನನ್ನು ಜೈಲಿಗೆ ಕಳಿಸುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಈ ಹಿಂದೆ ಶ್ರೀರಾಮುಲು ಅಣ್ಣನವರು ಸಹ ಇದೇ ರೀತಿ ಹೇಳಿದ್ದರು’ ಎಂದರು.