ಗೋಕರ್ಣ: ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್, ಇಲ್ಲಿನ ಮಹಾಗಣಪತಿ, ಮಹಾಬಲೇಶ್ವರ ಮತ್ತು ಪಾರ್ವತಿ ದೇವರಿಗೆಶುಕ್ರವಾರ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಕಷ್ಟದ ಸಮಯದಲ್ಲಿದ್ದಾಗ ನನ್ನ ಅಭಿಮಾನಿಗಳು ಹಿತೈಷಿಗಳು ದೇವರಲ್ಲಿ ನನ್ನ ಬಗ್ಗೆ ಹರಕೆ ಹೊತ್ತಿದ್ದರು.ಅದನ್ನು ಈಡೇರಿಸಲು ದೇವರಲ್ಲಿ ಪೂಜೆ ಸಲ್ಲಿಸಲು ಬಂದಿದ್ದೇನೆ. ಮಹಾಬಲೇಶ್ವರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದರು.
ಮುಖ್ಯ ಪುರೋಹಿತ ರಾಜಗೋಪಾಲ ಅಡಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಎಲ್ಲ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು. ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಹಿಂದುಳಿದ ವೇದಿಕೆಯ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಸದಸ್ಯರು ಇದ್ದರು.