ಮಂಗಳೂರು: ನಕಲಿ ಸರಕುಪಟ್ಟಿ ಸಲ್ಲಿಸಿದ ಸುಮಾರು ₹83 ಕೋಟಿ ಜಿಎಸ್ಟಿ ವಂಚನೆ ಮಾಡಿರುವ ಆರೋಪದಲ್ಲಿ ಎರಡು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರಿನ ಕೇಂದ್ರ ಜಿಎಸ್ಟಿ ಆಯುಕ್ತಾಲಯದ ಅಧಿಕಾರಿಗಳು, ಎರಡೂ ಕಂಪನಿಗಳ ಮಾಲೀಕರನ್ನು ಬಂಧಿಸಿದ್ದಾರೆ.
ತೌಹೀದ್ ಸ್ಕ್ರ್ಯಾಪ್ ಡೀಲರ್ ಕಂಪನಿಯ ಮಾಲೀಕ ಪಿ.ಕೆ. ಅಬ್ದುಲ್ ರಹೀಮ್ ಹಾಗೂ ಎಂ.ಕೆ. ಟ್ರೇಡರ್ಸ್ ಮಾಲೀಕ ಅಬ್ದುಲ್ ಖಾದರ್ ಕೂಳೂರು ಬಂಧಿತರು.
ತೌಹೀದ್ ಸ್ಕ್ರ್ಯಾಪ್ ಡೀಲರ್ ಕಂಪನಿ ಹಾಗೂ ಎಂ.ಕೆ. ಟ್ರೇಡರ್ಸ್ ಕಂಪನಿಗಳು, ಸರಕು ಖರೀದಿಸಿರುವ ಬಗ್ಗೆ ವಿವಿಧ ಸಂಸ್ಥೆಗಳಿಂದ ನಕಲಿ ಸರಕುಪಟ್ಟಿ ಪಡೆದಿವೆ.
ಅವುಗಳನ್ನು ಸಲ್ಲಿಸಿ ತೆರಿಗೆ ಸಹಾಯಧನ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್) ಪಡೆದುಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
‘ಐಟಿಸಿ ಕ್ರೆಡಿಟ್ ವರ್ಗಾವಣೆಗಾಗಿ ನಕಲಿ ಸರಕುಪಟ್ಟಿಯನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಕೇಂದ್ರ ಜಿಎಸ್ಟಿ ಕಾಯ್ದೆಯ 132 ನೇ ಕಲಂ ಪ್ರಕಾರ ಇದು ಗಂಭೀರ ಹಾಗೂ ಜಾಮೀನುರಹಿತ ಪ್ರಕರಣವಾಗಿದೆ’ ಎಂದು ಕೇಂದ್ರ ಜಿಎಸ್ಟಿ ಮಂಗಳೂರು ಆಯುಕ್ತ ಧರ್ಮಸಿಂಗ್ ತಿಳಿಸಿದ್ದಾರೆ.
‘ಉಭಯ ಕಂಪನಿಗಳು ₹83 ಕೋಟಿ ಮೌಲ್ಯದ ಸರಕು ಖರೀದಿ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿವೆ.
₹15 ಕೋಟಿ ಮೊತ್ತದ ಸಹಾಯಧನ ಪಡೆದು ವಂಚನೆ ಮಾಡಲಾಗಿದೆ.
ಈ ಜಾಲದಲ್ಲಿ ಮತ್ತಷ್ಟು ಕಂಪನಿಗಳು ಶಾಮೀಲಾಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.