ಹೊಸಪೇಟೆ: ಇಲ್ಲಿನ ಹಂಪಿ ಕಲ್ಲಿನ ರಥದ ಸುತ್ತಲೂ ಕಟ್ಟಿಗೆ ತಡೆಗೋಡೆ ನಿರ್ಮಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಮುಂದಾಗಿದೆ.
ಹಂಪಿಯ ಸಂರಕ್ಷಿತ ಸ್ಮಾರಕಗಳಲ್ಲಿ ಕಲ್ಲಿನ ರಥ ಕೂಡ ಒಂದಾಗಿದ್ದು, ಅದರ ಸಂರಕ್ಷಣೆಯ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ. ಇಲಾಖೆಯ ನುರಿತ ಸಿಬ್ಬಂದಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಈಗಾಗಲೇ ಅಳತೆ ಕಾರ್ಯ ಪೂರ್ಣಗೊಂಡಿದೆ.
‘ಹಂಪಿಯಲ್ಲಿ ಅತಿ ಹೆಚ್ಚು ಜನ ವೀಕ್ಷಿಸುವ ಸ್ಮಾರಕ ಕಲ್ಲಿನ ರಥ. ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಿಸುವುದು ಇಲಾಖೆಯ ಜವಾಬ್ದಾರಿ. ಪ್ರವಾಸಿಗರು ದೂರದಿಂದಲೇ ಅದನ್ನು ಕಣ್ತುಂಬಿಕೊಳ್ಳಬಹುದು’ ಎಂದು ಎ.ಎಸ್.ಐ. ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಿತ್ಯ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬರುತ್ತಾರೆ. ಅಂತಹವರಲ್ಲಿ ಕೆಲವರು ರಥದ ಮೇಲೇರಿ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಅದರ ಮೇಲೆ ಕೂರಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕೈ ಮುಟ್ಟಿ ನೋಡುವುದು ಮಾಡುತ್ತಿದ್ದಾರೆ. ಅದರಿಂದ ಸ್ಮಾರಕಕ್ಕೆ ಧಕ್ಕೆಯಾಗಬಹುದು. ಹಾಗಾಗಿ ಅದರ ಸನಿಹ ಹೋಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರಕದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಮೂರರಿಂದ ನಾಲ್ಕು ಅಡಿಗಳಷ್ಟು ಎತ್ತರತಡೆಗೋಡೆ ರ್ಮಿಸಲಾಗುವುದು.
ಈಗಾಗಲೇ ಅನೇಕ ಸ್ಮಾರಕಗಳ ಬಳಿ ಅಂಗವಿಕಲರ ಅನುಕೂಲಕ್ಕಾಗಿ ಕಟ್ಟಿಗೆಯ ರ್ಯಾಂಪ್ ನಿರ್ಮಿಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.‘ಕಲ್ಲಿನ ರಥ ಇರುವ ಪರಿಸರದಲ್ಲೇ ಸಪ್ತಸ್ವರ ಮಂಟಪವಿದೆ. ಮಂಟಪಗಳಿಗೆ ಕೈಗಳಿಂದ ಬಾರಿಸಿದರೆ ಏಳು ಸ್ವರಗಳು ಹೊರಹೊಮ್ಮುತ್ತವೆ. ಬಂದ ಪ್ರವಾಸಿಗರೆಲ್ಲ ಗೆ ಮಾಡಿದ್ದರಿಂದ ಹೆಚ್ಚಿನ ಮಂಟಪಗಳು ಸವೆದು ಹೋಗಿದ್ದವು. ಹಾಗೆ ಮಾಡದಂತೆ ಅನೇಕ ವರ್ಷಗಳ ಹಿಂದೆಯೇ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಈಗಲೂ ಅವುಗಳನ್ನು ನೋಡಬಹುದಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.