ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಮತ್ತು ಹೈದರಾಬಾದ್ನ ಉದ್ಯಮಿ ಲಲಿತ್ ಸಂಜೀವ್ ರೆಡ್ಡಿ ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಜರುಗಿತು.
ವಧು ವರರಾದ ರಕ್ಷಿತಾ ಮತ್ತು ಲಲಿತ್ ಸಂಜೀವ್ ರೆಡ್ಡಿ
ನೂತನ ದಂಪತಿಗೆ ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರೆಟಿಗಳು ಶುಭ ಕೋರಿದರು. ಬದ್ಧ ವೈರಿಗಳೆನಿಸಿದವರೂ ಆರತಕ್ಷತೆಯ ವೇದಿಕೆಯ ಮೇಲೆ ಒಂದಾಗಿ ಫೊಟೊ ತೆಗೆಸಿಕೊಂಡಿದ್ದು ಈ ವಿವಾಹ ಸಮಾರಂಭದ ವಿಶೇಷವಾಗಿತ್ತು.
ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ
ಶ್ರೀರಾಮುಲು ಪುತ್ರಿ ವಿವಾಹ ಸಮಾರಂಭದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರೂ ಕುಟುಂಬ ಸದಸ್ಯರಂತೆಯೇ ಆಗಿದ್ದರು.
ವಿವಾಹ ಸಮಾರಂಭದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ಒಟ್ಟಿಗೆ ಫೊಟೊ ತೆಗೆಸಿಕೊಂಡ ಕ್ಷಣ
ಇದೇ ಹೊತ್ತಿನಲ್ಲೇ ವಿವಾಹಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರೆಡ್ಡಿ ಅವರನ್ನು ಎದುರುಗೊಂಡರು. ಇಬ್ಬರು ಖುಷಿಯಿಂದಲೇ ಮಾತನಾಡುತ್ತಾ ಫೊಟೊ ತೆಗೆಸಿಕೊಂಡರು. ಕುಮಾರಸ್ವಾಮಿ ಅವರ ವಿರುದ್ಧ ರೆಡ್ಡಿ 150 ಕೋಟಿ ಗಣಿ ಲಂಚದ ಆರೋಪ ಮಾಡಿದ್ದರು.
ವಿವಾಹ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜನಾರ್ದನ ರೆಡ್ಡಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ವಿವಾಹಕ್ಕೆ ಆಗಮಿಸಿದ್ದರು. ಅಲ್ಲೆ ಇದ್ದ ರೆಡ್ಡಿ ಅವರನ್ನು ಸಿದ್ದರಾಮಯ್ಯ ಖುಷಿಯಿಂದಲೇ ಮಾತನಾಡಿಸಿದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರೆಡ್ಡಿ ಅವರು ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆಶೀರ್ವಾದ ಪಡೆದ ನವ ದಂಪತಿ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ,ಮಾಜಿ ಸಚಿವ ಡಿ.ಕೆ ಶಿವಕುಮಾರ್, ಎಚ್.ಡಿ ರೇವಣ್ಣ ಅವರೂ ವಿವಾಹಕ್ಕೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದರು.
ವಿವಾಹಕ್ಕೆ ಆಗಮಿಸಿ ವಧು ವರರಿಗೆ ಶುಭ ಕೋರಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್