ಚಿತ್ರದುರ್ಗ: ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿ ಬದುಕಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಚೈಲ್ಡಿಶ್ ಆಗಿದೆ. ಇದು ಶತಮಾನದ ಜೋಕ್ ರೀತಿಯಲ್ಲಿ ಕಾಣುತ್ತಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ಮೇವಾನಿ ಟೀಕೆ ಮಾಡಿದರು.
ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗಲು ಗುರುವಾರ ಚಿತ್ರದುರ್ಗಕ್ಕೆ ಬಂದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ರೈಲು ನಿಲ್ದಾಣದಲ್ಲಿ ಮೋದಿ ಚಹಾ ಮಾರಾಟ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈಗ ದೇಶ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವವಾಡುತ್ತಿದೆ. ನರೇಗಾ ಯೋಜನೆ, ಆರೋಗ್ಯ ಯೋಜನೆಗಳು ಮುಗ್ಗರಿಸಿವೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದಕ್ಕೆ ಮೋದಿ ಬಳಿ ಉತ್ತರವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಕಿಡಿ ಕಾರಿದರು.
ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯದಿಂದ ತೆಗೆಯುವುದು ಆರ್ ಎಸ್ ಎಸ್ ಅಜಂಡಾ. ಇದು ಕೋಮುವಾದಿ ಮನಸ್ಥಿತಿ. ಹಿಂದೂಗಳನ್ನು ತುಷ್ಠೀಕರಣ ಮಾಡಲು ಮುಸ್ಲಿಮ ಸಮುದಾಯ ದಮನಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಬಹುಸಂಸ್ಕೃತಿಯೇ ದೇಶದ ಸೌಂದರ್ಯ. ಅದನ್ನು ಆಚರಿಸಬೇಕಿದೆ ಎಂದರು.
ಜನರಿಗೆ ಈಗ ಬಿಜೆಪಿ ಸರ್ಕಾರದ ಧೋರಣೆ ಅರಿವಾಗುತ್ತಿದೆ. ಎಲ್ಲಾ ಪಕ್ಷದ ನಾಯಕರು ವಾಸ್ತವ ಪರಿಸ್ಥಿತಿ ಜನರ ಮುಂದಿಡಬೇಕಿದೆ. ಸಾವರ್ಕರ್ ಬ್ರಿಟಿಷರ ಕ್ಷಮೆ ಕೇಳಿ 13 ಪತ್ರ ಬರೆದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವೇ ಇಲ್ಲ ಎಂದಿ ದೂರಿದರು.
2018ರ ಏ.6ರಂದು ನಡೆದ ಸಂವಾದದಲ್ಲಿ 'ಮೋದಿ ಕಾರ್ಯಕ್ರಮದಲಿ ಕುರ್ಚಿ ತೂರಿ' ಎಂಬ ಹೇಳಿಕೆ ನೀಡಿದ ಆರೋಪದ ಮೇಲೆ ಇವರ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆ ಜಿಲ್ಲಾ ನ್ಯಾಯಾಲಯಕ್ಕೆ ಮೇವಾನಿ ಹಾಜರಾದರು.