ಬೆಂಗಳೂರು: ಬೆಂಗಳೂರು ಸಹಿತ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ಚಿಕಿತ್ಸಾ ದರವನ್ನು ನಿಗದಿಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು, ಖಾಸಗಿ ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಈ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಸರ್ಕಾರ ಕಳುಹಿಸುವ ರೋಗಿಗಳಿಗೆ ದಿನಕ್ಕೆ ಜನರಲ್ ವಾರ್ಡ್ಗೆ ₹ 5,000, ಎಚ್ಡಿಯು ₹ 7,000, ಐಸಿಯು ₹8,500 ಹಾಗೂ ವೆಂಟಿಲೇಟರ್ ಇರುವ ಐಸಿಯುಗೆ ₹10,000 ದರ ನಿಗದಿಪಡಿಸಲಾಗಿದೆ.
ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಒಳಪಟ್ಟರೆ ಅವರಿಂದ ಜನರಲ್ ವಾರ್ಡ್ಗೆ ದಿನಕ್ಕೆ ₹10,000, ಎಚ್ಡಿಯು ₹ 12,000, ಐಸಿಯು ₹15,000 ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ ₹25,000ಕ್ಕಿಂತ ಅಧಿಕ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ಬಿಲ್ ಪಾವತಿಯ ನೋಡಲ್ ಏಜೆನ್ಸಿಯಾಗಿದ್ದು, ಬಿಪಿಎಲ್, ಎಪಿಎಲ್, ವಲಸೆ ಕಾರ್ಮಿಕರು ಮತ್ತು ಪಡಿತರ ಚೀಟಿ ಇಲ್ಲದೆ ಇತರ ರಾಜ್ಯಗಳಿಂದ ಮರಳಿದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಟ್ರಸ್ಟ್ ವಹಿಸಿಕೊಳ್ಳಲಿದೆ.