ಸಿಂಧನೂರು (ರಾಯಚೂರು ಜಿಲ್ಲೆ): ಪುತ್ರಿಯನ್ನು ಪ್ರೇಮಿಸಿ ವಿವಾಹ ಮಾಡಿಕೊಂಡಿದ್ದ ಯುವಕನ ಮೇಲಿನ ಸೇಡಿಗಾಗಿ ಆತನ ತಾಯಿ, ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಯುವತಿಯ ಕಡೆಯವರು ಸಿಂಧನೂರು ನಗರದ ಸುಕಾಲಪೇಟೆಯಲ್ಲಿದ್ದ ಮನೆಗೆ ನುಗ್ಗಿ ಶನಿವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸುಮಿತ್ರಾ (55), ಶ್ರೀದೇವಿ(36), ಹನುಮೇಶ(35), ನಾಗರಾಜ (38) ಹತ್ಯೆಯಾಗಿದ್ದಾರೆ. ಘಟನೆಯಲ್ಲಿ ರೇವತಿ, ತಾಯಮ್ಮ ಹಾಗೂ ಈರಪ್ಪ ಮೂವರಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಪ್ರೇಮಿಗಳಿಬ್ಬರು ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಕಳೆದ ವರ್ಷ ಪ್ರೇಮವಿವಾಹ ಮಾಡಿಕೊಂಡಿದ್ದ ಮೌನೇಶ ಹಾಗೂ ಮಂಜುಳಾ ಒಂದೇ ಜಾತಿ (ಕುರುಬ)ಗೆ ಸೇರಿದವರು. ಬೇರೆ ಊರಿನಲ್ಲಿದ್ದ ಜೋಡಿ ಈಚೆಗೆ ಸಿಂಧನೂರಿಗೆ ವಾಪಸಾಗಿ ಯುವಕನ ಮನೆಯಲ್ಲಿದ್ದರು. ಈ ಸಂಬಂಧವಾಗಿ ಎರಡು ಕುಟುಂಬಗಳ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರವೂ ಜಗಳ ನಡೆದಿದೆ. ಯುವತಿಯ ತಂದೆ ಕೋಣದ ಫಕಿರಪ್ಪ ಹಾಗೂ ಆತನ ಸಹೋದರರು ಒಟ್ಟಾಗಿ ಬಂದು ಹತ್ಯೆ ಮಾಡಿದ್ದಾರೆ. ಸಿಂಧನೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.