ಮಂಗಳೂರು: ‘ಶತಮಾನಗಳಿಂದ ತುಳಿತಕ್ಕೆ ಒಳಗಾದವರಿಗೆ ಶಿಕ್ಷಣ ಹಾಗೂ ಸೌಲಭ್ಯಗಳಲ್ಲಿ ಮೀಸಲಾತಿ ನೀಡಬೇಕು. ಆದರೆ, ಮೀಸಲಾತಿ ಪಡೆದು ಅಭಿವೃದ್ಧಿ ಹೊಂದಿದವರ ಮಕ್ಕಳಿಗೂ ಮತ್ತೆ ಮೀಸಲಾತಿ ಬೇಡ. ಅಂತೆಯೇ ಬಡ್ತಿಯಲ್ಲೂ ಮೀಸಲಾತಿ ನೀಡುವ ಅಗತ್ಯವಿಲ್ಲ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಜಾತಿ–ಧರ್ಮದ ವ್ಯವಸ್ಥೆಯನ್ನು ಅಳಿಸಲು ಸಾಧ್ಯವಿಲ್ಲ. ಆದರೆ, ಪರಸ್ಪರ ಪ್ರೀತಿ–ಸೌಹಾರ್ದತೆಯಿಂದ ಅರಿತು–ಬೆರೆತು ಸಮಾಜದಲ್ಲಿ ಸಾಮರಸ್ಯ ಮತ್ತು ಅಭಿವೃದ್ಧಿ ಸಾಧಿಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಸವ ಸಿದ್ಧಾಂತ ಅನುಸರಿಸುವವರೆಲ್ಲಾ ಲಿಂಗಾಯತರೇ. ಲಿಂಗಾಯತ ಎನ್ನುವುದು ಜಾತಿ ಅಲ್ಲ. ಅದು ತತ್ವ, ಒಂದು ಸಿದ್ಧಾಂತ. ಕೇವಲ ಯಡಿಯೂರಪ್ಪ ಅವರೊಬ್ಬರನ್ನು ಮಾತ್ರ ಲಿಂಗಾಯತರೆಂದು ಕರೆದರೆ ಹೇಗೆ?’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಮತ್ತೆ ಕಲ್ಯಾಣ’ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸ್ವರೂಪಗಳಲ್ಲಿ ನಡೆಯಲಿದೆ. ಆ ಬಳಿಕ ಸಾಣೇಹಳ್ಳಿಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನದ ರಾಜ್ಯ ಮಟ್ಟದ 20 ದಿನಗಳ ಕಾರ್ಯಾಗಾರ ನಡೆಸಲಾಗುವುದು’ ಎಂದು ಹೇಳಿದರು.