ಬೆಂಗಳೂರು: ರಾಜ್ಯದ ಘಟ್ಟ ಪ್ರದೇಶದಲ್ಲಿ ಮುಂಗಾರು ಬಿರುಸಾಗಿದ್ದು, ಕರಾವಳಿಯಲ್ಲಿ ದುರ್ಬಲವಾಗಿದೆ. ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಯಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.
ಕಳೆದ ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆ ಕೊಡಗು ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಬಿಟ್ಟುಬಿಟ್ಟು ಬರುತ್ತಿದೆ. ಈ ಭಾಗದಲ್ಲಿ 2–3 ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿಕೊಳ್ಳುತ್ತಿದೆ.
ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದಂಚಿನ ಗ್ರಾಮಗಳಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಹೇಮಾವತಿ ನದಿಯೂ ತುಂಬಿ ಹರಿಯುತ್ತಿದೆ.
ಸಕಲೇಶಪುರ ಭಾಗದ ಹೆತ್ತೂರು, ಹಾನುಬಾಳು ಹೋಬಳಿ ವ್ಯಾಪ್ತಿಯಲ್ಲಿ ಸರಾಸರಿ 70 ಮಿ.ಮೀ. ಮಳೆ ದಾಖಲಾದರೆ, ಕಸಬಾ ಹೋಬಳಿಯಲ್ಲಿ ಸರಾಸರಿ 60 ಮಿ.ಮೀ. ಬೆಳಗೋಡು ಹೋಬಳಿಯಲ್ಲಿ 30 ಮಿ.ಮೀ. ಯಸಳೂರು ಹೋಬಳಿಯಲ್ಲಿ 50 ಮಿ.ಮೀ. ಮಳೆಯಾಗಿದೆ.
ಕೊಡಗು ಜಿಲ್ಲೆಯ ನಾಪೋಕ್ಲು, ಭಾಗಮಂಡಲ, ತಲಕಾವೇರಿಯಲ್ಲಿ ಬಿಡುವು ಕೊಟ್ಟು ಮಳೆಯಾಗುತ್ತಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಾದಾಪುರ ವ್ಯಾಪ್ತಿಯಲ್ಲಿ ತುಂತುರು ಮಳೆ ಬಂತು. ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮೈಸೂರು ಜಿಲ್ಲೆಯಲ್ಲಿ ತುಂತುರು ಮಳೆಯಾಯಿತು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಳಸ ತಾಲ್ಲೂಕುಗಳಲ್ಲಿ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರಿದಿದ್ದು, ಮೂರು ದಿನದಿಂದ
ಎಡಬಿಡದೇ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಕಳಸದಲ್ಲಿ ಭಾನುವಾರ ಸುರಿದ ಮಳೆಯ ಪ್ರಮಾಣ ಶನಿವಾರಕ್ಕಿಂತ ಕಡಿಮೆ ಇತ್ತು.
ಮಳೆಯೊಂದಿಗೆ ರಭಸವಾಗಿ ಗಾಳಿ ಬೀಸಿದ್ದರಿಂದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮ, ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆಯಿಂದಾಗಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು ಬೆಟ್ಟದಮನೆ, ಕಿತ್ಲೆಗಂಡಿ, ಹಂತೂರು ಹಾಗೂ ಬಂಕೇನಹಳ್ಳಿಯಲ್ಲಿರುವ ಹೇಮಾವತಿ ಸೇತುವೆಗಳ ಬಳಿಗೆ ತೆರಳಿ ಜನರು ನದಿಯು ಹರಿಯುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಕರಾವಳಿಯಲ್ಲಿ ಕ್ಷೀಣ: ಕರಾವಳಿಯಲ್ಲಿ ಎರಡು ದಿನಗಳಿಂದ ಮುಂಗಾರು ಕ್ಷೀಣಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ಅಲ್ಪ ಪ್ರಮಾಣದ ಮಳೆ ಸುರಿದಿದೆ. ಭಾನುವಾರ ಬಹುತೇಕ ಬಿಸಿಲಿನ ವಾತಾವರಣ ಇತ್ತು.
ಶಿವಮೊಗ್ಗ ನಗರ, ಸಾಗರ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಹೊಸನಗರದಲ್ಲಿ ಸಾಧಾರಣ ಮಳೆಯಾಗಿದೆ.
ಮುಳುಗಡೆ ಸ್ಥಿತಿಯಲ್ಲಿ 7 ಸೇತುವೆ: ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ಬಾಗಲಕೋಟೆ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದೆ.
ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಆ ರಾಜ್ಯದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಜಾಸ್ತಿಯಾಗಿದೆ. 36,066 ಕ್ಯುಸೆಕ್ ನೀರು ಹರಿಬಿಡಲಾಗಿದೆ.
ಕೃಷ್ಣಾ ನದಿಗೆ ಕಲ್ಲೋಳ ಬಳಿ ನಿರ್ಮಿಸಲಾದ ಕಲ್ಲೋಳ–ಯಡೂರ, ವೇದ ಹಾಗೂ ದೂಧ್ಗಂಗಾ ನದಿಗೆ ಕಾರದಗಾದಲ್ಲಿ ನಿರ್ಮಿಸಿರುವ ಕಾರದಗಾ–ಭೋಜ, ವೇದಗಂಗಾ ನದಿಗೆ ಭೋಜದಲ್ಲಿ ಕಟ್ಟಿರುವ ಭೋಜವಾಡಿ–ಕುನ್ನೂರ, ಸಿದ್ನಾಳ ಬಳಿಯ ಸಿದ್ನಾಳ–ಅಕ್ಕೋಳ, ಜತ್ರಾಟದಲ್ಲಿನ ಜತ್ರಾಟ–ಭಿವಶಿ, ದೂಧ್ಗಂಗಾ ನದಿಗೆ ಮಲ್ಲಿಕವಾಡ ಬಳಿ ನಿರ್ಮಿಸಿರುವ ಮಲಿಕವಾಡ–ದತ್ತವಾಡ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿವೆ.
ಇವು ಚಿಕ್ಕ ಬ್ರಿಡ್ಜ್ ಕಮ್ ಬ್ಯಾರೇಜ್ ಗಳಾಗಿವೆ. ಪರ್ಯಾಯ ರಸ್ತೆಗಳಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿಲ್ಲ.
ಘಟಪ್ರಭಾ ನದಿಯ ಒಳ ಹರಿವು ದಿನೇ ದಿನೇ ಏರಿಕೆಯಾಗುತ್ತಿರುವ ಪರಿಣಾಮ, ಗೋಕಾಕ ಹೊರವಲಯದ ಶಿಂಗಳಾಪೂರ ಬ್ರಿಡ್ಜ್ ಕಮ್ ಬ್ಯಾರೇಜ್ ಭಾನುವಾರ ಸಂಜೆ ಮುಳುಗುವ ಭೀತಿಯಲ್ಲಿತ್ತು.
ಖಾನಾಪುರ ತಾಲ್ಲೂಕಿನಾದ್ಯಂತ ಸತತ ವರ್ಷಧಾರೆಯಾಗಿದೆ. ಬೆಳಗಾವಿ ತಾಲ್ಲೂಕು, ಬೈಲಹೊಂಗಲ, ಹಿರೇಬಾಗೇವಾಡಿ, ಚನ್ನಮ್ಮನ ಕಿತ್ತೂರು, ಎಂ.ಕೆ. ಹುಬ್ಬಳ್ಳಿಯಲ್ಲಿ ಮಳೆಯಾಗಿದೆ.
ಕೆಆರ್ಎಸ್ ಮಟ್ಟ ಏರಿಕೆ
ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಎರಡು ದಿನಗಳಿಂದ ಹೆಚ್ಚಿದ್ದು, ಭಾನುವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 82.70 ಅಡಿ ತಲುಪಿದೆ.
ಒಂದೇ ದಿನದಲ್ಲಿ 2 ಅಡಿ ನೀರು ಏರಿಕೆ ಆಗಿದೆ. ಶನಿವಾರ ನೀರಿನ ಮಟ್ಟ 80.75 ಅಡಿ ಇತ್ತು. ಜಲಾಶಯಕ್ಕೆ 9,090 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಸೋಮವಾರದ ವೇಳೆಗೆ ಒಳಹರಿವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಜಲಾಶಯದಲ್ಲಿ ಸದ್ಯ 12.028 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. ನದಿಗೆ 307 ಕ್ಯುಸೆಕ್ ಹಾಗೂ ಆರ್ಬಿಎಲ್ಎಲ್ ನಾಲೆಗೆ 50 ಕ್ಯುಸೆಕ್ ಸೇರಿ 357 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 108.78 ಅಡಿ (30.512 ಟಿಎಂಸಿ ಅಡಿ) ಇತ್ತು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.