ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಮರಣದಂಡನೆ

Last Updated 18 ಜನವರಿ 2020, 19:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶೃಂಗೇರಿ ತಾಲ್ಲೂಕಿನ ಮೆಣಸೆ ಪಕ್ಕದ ಹೊಸೆಕೆರೆ ಸೈಟಿನ ಪ್ರದೀಪ (32) ಮತ್ತು ಸಂತೋಷ (26) ಅವರಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ಗಲ್ಲು ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶರಾದ ಉಮೇಶ್‌ ಎಂ.ಅಡಿಗ ಈ ಆದೇಶ ನೀಡಿದ್ದಾರೆ. ಕೊಲೆ ಕೃತ್ಯಕ್ಕೆ ಗಲ್ಲು, ಸಾಮೂಹಿಕ ಅತ್ಯಾಚಾರ ಎಸಗಿದ್ದಕ್ಕೆ 25 ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ₹ 25,000 ದಂಡ, ಸಾಕ್ಷ್ಯ ನಾಶಪಡಿಸಿದ್ದಕ್ಕೆ ಏಳು ವರ್ಷ ಕಠಿಣ ಶಿಕ್ಷೆ ಮತ್ತು ತಲಾ ₹ 5,000 ದಂಡ, ವಿದ್ಯಾರ್ಥಿನಿಯ ಆಭರಣ ಕಳವಿಗೆ ಆರು ತಿಂಗಳು ಕಠಿಣ ಶಿಕ್ಷೆ, ತಲಾ ₹ 1,000 ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?: 2016ರ ಫೆಬ್ರುವರಿ 16ರಂದು ಪ್ರಕರಣ ನಡೆದಿತ್ತು. ಬಿ.ಕಾಂ ವಿದ್ಯಾರ್ಥಿನಿ (18) ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 1.30ರ ಹೊತ್ತಿನಲ್ಲಿ ಊರಿಗೆ ಕಾಲುದಾರಿಯಲ್ಲಿ ಸಾಗುವಾಗ ಪ್ರದೀಪ ಮತ್ತು ಸಂತೋಷ ಹೊತ್ತೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಶವವನ್ನು ಸಮೀಪದ ಪಾಳು ಬಾವಿಗೆ ಎಸೆದಿದ್ದರು. ಆಭರಣಗಳನ್ನು ಕದ್ದೊಯ್ದಿದ್ದರು.

ಸಂಜೆಯಾದರೂ ಮಗಳು ಮನೆಗೆ ಬಾರದಿದ್ದರಿಂದ ಕುಟುಂಬದವರು ಹುಡುಕಾಡಿದ್ದರು. ಪಾಳು ಬಾವಿಯಲ್ಲಿ ಶವ ಪತ್ತೆಯಾಗಿತ್ತು. ವಿದ್ಯಾರ್ಥಿನಿಯ ತಂದೆ ದೂರು ದಾಖಲಿಸಿದ್ದರು.

‘ಜಿಲ್ಲೆಯ ಐತಿಹಾಸಿಕ ತೀರ್ಪು’
ಪಬ್ಲಿಕ್‌ ಪ್ರಾಸಿಕ್ಯುಟರ್‌ ವಿ.ಜಿ. ಯಳಗೇರಿ ಮಾತನಾಡಿ, ‘ಕೋರ್ಟ್‌, ಜಿಲ್ಲೆಯಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ‘ನಿರ್ಭಯಾ’ ತೀರ್ಪು ಸಹಿತ ಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಪ್ರಸ್ತಾಪಿಸಲಾಗಿತ್ತು’ ಎಂದರು.

‘ಸಮ್ಮತಿಗೆ ದಾಖಲೆಗಳನ್ನು ಹೈಕೋರ್ಟ್‌ಗೆ ರವಾನಿಸುತ್ತಾರೆ. ಅಲ್ಲಿ ದೃಢೀಕರಣವಾದ ನಂತರ ಶಿಕ್ಷೆ ಜಾರಿಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

*
ನಿರ್ಭಯಾ ತೀರ್ಪಿನ ನಂತರ ಈ ಪ್ರಕರಣದಲ್ಲೂ ಅದೇ ತೀರ್ಪು ಬರಬಹುದು ಅನಿಸಿತ್ತು. ಸಮಾಧಾನ ತಂದಿದೆ. ಸಮಾಜದಲ್ಲಿ ಇಂಥ ಪ್ರಕರಣಗಳು ಮರುಕಳಿಸಬಾರದು.
-ಮೃತ ವಿದ್ಯಾರ್ಥಿನಿಯ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT