ಮಂಗಳೂರು: ಪ್ರತಿಭಟನೆಯ ನೆಪದಲ್ಲಿ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ, ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣ ಗಂಭೀರ ಮತ್ತು ಆತಂಕಕಾರಿ ಎಂದು ವಿಎಚ್ಪಿ ಕರ್ನಾಟಕದ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ ಹೇಳಿದರು.
ಕಾಶ್ಮೀರದಲ್ಲಿ ನಡೆಯುತ್ತಿದ್ದ ಘಟನೆಗಳು ನಗರದಲ್ಲಿ ನಡೆಯುತ್ತಿರುವುದು ಬಹಳ ಅಪಾಯಕಾರಿ. ಪ್ರತಿಭಟನೆಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ತೂರಾಟ ನಡೆಸಿದ್ದನ್ನು ನೋಡಿದರೆ, ಇದರ ಹಿಂದೆ ವ್ಯವಸ್ಥಿತ ಪಿತೂರಿ ಇರುವುದು ಸ್ಪಷ್ಟವಾಗಿದೆ ಎಂದರು.
ಈ ಕೃತ್ಯದಲ್ಲಿ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವ ಸಂಶಯ ಬರುತ್ತಿದೆ. ಈ ಪ್ರತಿಭಟನೆಯಲ್ಲಿ ಕೇರಳ ಮತ್ತು ಬೇರೆ ರಾಜ್ಯಗಳಿಂದ ಜನ ಬಂದಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ. ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಒತ್ತಾಯಿಸಿದರು.
ಆಸ್ಪತ್ರೆಗಳಲ್ಲಿ ದಾಖಲಾಗಿರುವ ಮುಸ್ಲಿಂರನ್ನು ಭೇಟಿಯಾಗಲು ರಾಜಕೀಯ ನಾಯಕರಿಗೆ ಸಮಯವಿದೆ. ಆದರೆ, ಗಾಯಗೊಂಡಿರುವ ಪೊಲೀಸರನ್ನು, ಅವರ ಕುಟುಂಬದವರನ್ನ ಭೇಟಿಯಾಗಲು ಸಮಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ಪೊಲೀಸರು ಹಾಗೂ ಅವರ ಕುಟುಂಬದವರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಸ್ತುಸ್ಥಿತಿ ತೋರಿಸಿದ ಮಾಧ್ಯಮಗಳ ಪ್ರತಿನಿಧಿಗಳಿಗೂ ಬೆದರಿಕೆ ಹಾಕಲಾಗುತ್ತಿದೆ ಎಂದರು.
ಇದೇ ಮೊದಲ ಬಾರಿಗೆ ವಿಎಚ್ಪಿ ಅಂತರರಾಷ್ಟ್ರೀಯ ಸಭೆ ಇದೇ 25ರಿಂದ 30ರವರೆಗೆ ನಗರದ ಸಂಘ ನಿಕೇತನದಲ್ಲಿ ನಡೆಯಲಿದ್ದು, ಸಭೆಯಲ್ಲಿರಾಮಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆಚರ್ಚೆ ನಡೆಸಲಾಗುವುದು ಎಂದು ಹೇಳಿದರು.