ಬೆಂಗಳೂರು: ಕೋವಿಡ್ –19 ವಿರುದ್ಧದ ಸಮರಕ್ಕೆ ನೆರವಾಗಲು ಮುಂದಾಗಿರುವ ವಿಪ್ರೊ ಸಂಸ್ಥೆ ಮತ್ತು ಅಜೀಂ ಪ್ರೇಮ್ಜೀ ಫೌಂಡೇಷನ್, ಇದಕ್ಕಾಗಿ ₹1,125 ಕೋಟಿ ತೆಗೆದಿರಿಸಿದೆ.
ವಿಪ್ರೊ ಸಂಸ್ಥೆ ₹100 ಕೋಟಿ, ವಿಪ್ರೊ ಎಂಟರ್ಪ್ರೈಸಸ್ ₹25 ಕೋಟಿ ಮತ್ತು ಅಜೀಂ ಪ್ರೇಮ್ಜೀ ಫೌಂಡೇಶನ್ ₹1,000 ಕೋಟಿ ನೀಡಲಿದೆ. ವಾರ್ಷಿಕ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ಆರ್) ಹೊರತಾಗಿ ಈ ನೆರವು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತ ಮಾಹಿತಿಯನ್ನು ವಿಪ್ರೊ ಸಂಸ್ಥೆಯ ಮುಖ್ಯಸ್ಥರಶೀದ್ ಪ್ರೇಮ್ಜೀ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಜೆಎಸ್ಎಸ್ನಿಂದ ₹ 50 ಲಕ್ಷ (ಮೈಸೂರು): ಕೋವಿಡ್ 19 ಪರಿಹಾರ ಕಾರ್ಯಗಳಿಗೆ ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ಜೆಎಸ್ಎಸ್ ಸಂಸ್ಥೆಯ ನೌಕರರು ನೀಡಿರುವ ಮೊಬಲಗು ಸೇರಿಸಿ ₹ 50 ಲಕ್ಷ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಬುಧವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಚೆಕ್ ಹಸ್ತಾಂತರಿಸಿದರು.
₹1 ಕೋಟಿ ಪರಿಹಾರ: ನವದೆಹಲಿ(ಪಿಟಿಐ): ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ.
ಕೊರೊನಾ: ₹20 ಕೋಟಿ ನೆರವು ನೀಡಿದ ರಾಮೋಜಿ ರಾವ್ ಅಮರಾವತಿ (ಪಿಟಿಐ):ಕೊರೊನಾ ವೈರಸ್ ವಿರುದ್ಧದ ಹೋರಾಟದ ನೆರವಿಗಾಗಿಮಾಧ್ಯಮ ದೊರೆ ರಾಮೋಜಿ ರಾವ್ ಅವರು, ಆಂಧ್ರಪದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ₹10 ಕೋಟಿ ನೆರವು ನೀಡಿದ್ದಾರೆ.
ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲಿದ್ದಾರೆ. ಜನರೂ ಈ ಸಮಸ್ಯೆಯಿಂದ ಹೊರಬರಲಿದ್ದಾರೆ ಎಂದು ತಿಳಿಸಿದ್ದಾರೆ.