ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿವಿಗಾಗಿ ಊರು ಸೇರು | ಬದುಕು ಉಳಿಸಿಕೊಳ್ಳಲು ಊರ ದಾರಿ ಹಿಡಿದರು...

ಗ್ರಾಮಮುಖಿಗಳಿಗೆ ಸಲಹೆಗಳು
Last Updated 13 ಆಗಸ್ಟ್ 2020, 10:27 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""

‘ಕೆಟ್ಟು ಪಟ್ಟಣ ಸೇರು’ ಎನ್ನುವ ಗಾದೆ ಈಗ ‘ಉಳಿವಿಗಾಗಿ ಊರು ಸೇರು’ ಎನ್ನುವಂತಾಗಿದೆ. ಬದುಕು ಹುಡುಕಿಕೊಂಡು ಪಟ್ಟಣ ಸೇರಿದವರು, ಬದುಕು ಉಳಿಸಿಕೊಳ್ಳಲಿಕ್ಕಾಗಿ ಊರ ದಾರಿ ಹಿಡಿದಿರುವ ವಿಚಿತ್ರ ಸಂದರ್ಭ ಇಂದಿನದು. ಕೊರೊನಾ ಸೋಂಕಿಗೆ ಅಂಜಿ ನಗರಗಳಿಗೆ ಬೆನ್ನುಹಾಕಿರುವ ಲಕ್ಷಾಂತರ ಜನ ಹಳ್ಳಿಗಳಿಗೆ ಬಂದಿದ್ದಾರೆ. ಊರಲ್ಲಿ ಅನ್ನ ಹುಟ್ಟುತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ ನಗರಕ್ಕೆ ಹೋದವರು, ಈಗ ಮತ್ತೆ ತವರಿಗೆ ಬಂದರೆ ಅಲ್ಲಿ ಬದುಕುವುದಾದರೂ ಹೇಗೆ? ಹೀಗೆ ಬಂದವರಿಗೆ ಕೃಷಿ ದುಡಿಮೆಯ ಶಕ್ತಿ ಇದೆಯೇ? ಉಳಿದಿದೆಯೇ? ಹೈಟೆಕ್‌ ನಗರಗಳಿಂದ ಬಂದವರಿಗೆ, ಉತ್ತಮ ಶಾಲೆ, ರಸ್ತೆ, ಮೊಬೈಲ್ ನೆಟ್‌ವರ್ಕ್, ಯಾವುದೂ ಸರಿಯಿಲ್ಲದ ಹಳ್ಳಿಗಳು ಒಗ್ಗುತ್ತವೆಯೇ? ಕೊರೊನಾ ಕಾರಣದಿಂದಾಗಿ ರೂಪುಗೊಂಡಿರುವ ತಿರುಗುಮುರುಗಾದ ವಲಸೆಯ ವಿದ್ಯಮಾನವನ್ನು ಬರಹಗಾರ ಶಿವಾನಂದ ಕಳವೆವಿಶ್ಲೇಷಿಸಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವುಹಳ್ಳಿಗಳ ಬದಲಾದ ಸ್ವರೂಪ ಹಾಗೂ ಕೃಷಿ ಪರಿಸ್ಥಿತಿಯ ಸ್ಥಿತ್ಯಂತರಗಳ ಚಿತ್ರಣದೊಂದಿಗೆ, ನಗರಗಳಿಂದ ಹಳ್ಳಿಗಳಿಗೆ ಹೋದವರು ರೂಢಿಸಿಕೊಳ್ಳಬೇಕಾದ ಮನಸ್ಥಿತಿಯ ಬಗ್ಗೆಯೂ ಗಮನ ಸೆಳೆಯುತ್ತದೆ.

---

‘ಮತ್ತೆ ಬೆಂಗಳೂರಿನತ್ತ ಮುಖ ಹಾಕೋದಿಲ್ಲ. ಊರಲ್ಲಿ ಐದೆಕ್ರೆ ಕಾಫಿ ತೋಟವುಂಟು. ಅನ್ನವೋ ಗಂಜಿಯೋ ಕುಡಿಯುತ್ತ ಅಲ್ಲೇ ಇರ‍್ತೇವೆ. ನಗರದ ಸಹವಾಸ ಸಾಕೇ ಸಾಕು’. ಟೋಲ್‌ಗೇಟ್‌ನಲ್ಲಿ ಕಾರು ನಿಲ್ಲಿಸಿದ ಗಳಿಗೆಯಲ್ಲಿ ಮೈಕ್ ಹಿಡಿದ ಸುದ್ದಿವಾಹಿನಿಯ ವರದಿಗಾರರಿಗೆ ಊರಿಗೆ ಹೊರಟವರೊಬ್ಬರು ಉತ್ತರ ಕೊಡುತ್ತಿದ್ದರು. ಮಕ್ಕಳು ಮರಿಗಳು, ಪಾತ್ರೆ ಸರಂಜಾಮುಗಳನ್ನು ವಾಹನದಲ್ಲಿ ಭರ್ತಿಮಾಡಿಕೊಂಡು ಹೆದ್ದಾರಿ ಹಿಡಿದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮಂದಿಯಂತೂ ಬೆಚ್ಚಿಬಿದ್ದವರಂತೆ ಕಾಣುತ್ತಿದ್ದರು. ರಾಜ್ಯಕ್ಕೆಲ್ಲ ರುಚಿ ರುಚಿಯ ಬಿಳಿಜೋಳದ ರೊಟ್ಟಿ ಪರಿಚಯಿಸಿದ ಕೃಷಿ ನೆಲೆಯ ಇವರು, ಊಟದ ಮಾತಿರಲಿ, ಕುಡಿಯಲು ನೀರು ಪಡೆಯಲೂ ಮಹಾನಗರದಲ್ಲಿ ಕಷ್ಟಪಡಬೇಕಾಯ್ತು. ನಗರದಲ್ಲಿ ಇರುವವರನ್ನು ‘ಯಾವತ್ತು ಊರಿಗೆ ಬರೋದು?’ ಎಂದು ಪೋನು ಮಾಡಿದಾಗೆಲ್ಲ ಪ್ರಶ್ನಿಸುತ್ತಿದ್ದ ಅಮ್ಮ, ಅತ್ತೆ, ಸಂಬಂಧಿಕರೆಲ್ಲ ಈಗ ಸ್ವಲ್ಪ ಸುಮ್ಮನಾಗಿದ್ದಾರೆ. ಮಾಸ್ಕ್ ಹಾಕಿ ದೂರವಾಣಿಯಲ್ಲಿ ಮಾತಾಡಿದವರ ಧ್ವನಿ ಬೇರೆಯೇ ಕೇಳುತ್ತಿದೆ.

ಬೆಂಗಳೂರು ಬಿಟ್ಟು ಕಿತ್ತೆದ್ದು ಜನ ಹೊರಟಿದ್ದನ್ನು ಹಲವು ದಿನಗಳಿಂದ ನೋಡುತ್ತಿದ್ದೇವೆ. ಎಲ್ಲ ಮಹಾನಗರಗಳ ಕಥೆಯೂ ಒಂದೇ! ಜನದಟ್ಟಣೆ, ವಾಹನದಟ್ಟಣೆ, ಹೊಗೆ ಕವಿದ ನಗರ ಪರಿಸರ ಬದಲಾಗಿ ದಾರಿಗಳು ಬಿಕೋ ಎನ್ನುತ್ತಿವೆ. ಅಸಂಖ್ಯಾತ ಜನರ ಆರ್ಥಿಕ ಬದುಕು ಕಣ್ಣಿಗೆ ಕಾಣದ ಕೊರೊನಾ ವೈರಸ್ ಕಾರಣಕ್ಕೆ ಊಹೆಗೂ ನಿಲುಕದಷ್ಟು ತಿರುವುಮುರುವಾಗಿದೆ. ರೋಗಕ್ಕೆ ಮದ್ದೇನೆಂದು ಜಗತ್ತು ಹುಡುಕುತ್ತಿದೆ. ದುಡಿಮೆಯ ದಾರಿಗಳು ಮುಚ್ಚಿ ಮನೆ ಮನೆಯಲ್ಲಿ ದುಃಖ ದೊಡ್ಡದಾಗುತ್ತಿದೆ. 20 ವರ್ಷಗಳಿಂದ ಕೆಲಸಕೊಟ್ಟ ಕಂಪನಿ ಬಾಗಿಲು ಹಾಕಿದರೆ ತಂದೆ ತಾಯಿ, ಹೆಂಡತಿ ಮಕ್ಕಳ ಪರಿಸ್ಥಿತಿ ಏನಾದೀತು? ಉದ್ಯಮ ಶುರು ಮಾಡಿದವರು, ಮಕ್ಕಳ ಶಿಕ್ಷಣದ ಬಗ್ಗೆ ನಿರ್ಧರಿಸಿದವರು, ಮನೆ ಕಟ್ಟಿದವರು, ವಾಹನ ಖರೀದಿಸಿದವರಿಗೆ ಸಾಲದ ಕಂತು ತೀರಿಸುವುದು ಹೇಗೆಂದು ತಿಳಿಯುತ್ತಿಲ್ಲ.

ನಗರದ ಚಾಕರಿ ಆರಾಮವೇನಲ್ಲ. ಎಲ್ಲರೂ ಲಕ್ಷ ಸಂಪಾದನೆಯ ಐಟಿ ಕುಲದವರಲ್ಲ. ಬೆಳಿಗ್ಗೆ ಎಂಟಕ್ಕೆ ಮನೆ ಬಿಟ್ಟು ಸಂಚಾರ ದಟ್ಟಣೆಯಲ್ಲಿ ಉಸಿರುಕಟ್ಟಿಕೊಂಡು ಕೆಲಸದ ಜಾಗ ಸೇರಿ ರಾತ್ರಿ ಮರಳುತ್ತಿದ್ದ ದಿನಚರಿಯಲ್ಲಿ ಇಡೀ ಕುಟುಂಬದ ಅನ್ನ, ಆವಾಸದ ಪ್ರಶ್ನೆಗಳು ಅಡಗಿದ್ದವು. ಸಮಯಕ್ಕೆ ಹೋಗಬೇಕು, ಹೇಳಿದ ಕೆಲಸ ಮಾಡಬೇಕು, ಹಾಸಿಗೆ ಇದ್ದಷ್ಟು ಕಾಲುಚಾಚಬೇಕು. ಮನೆಬಾಡಿಗೆ, ವಾಹನಖರ್ಚು, ದಿನಸಿ, ಮನೆಗೆಲಸದವಳ ಖರ್ಚು, ತರಕಾರಿ, ಅಮ್ಮನ ಗುಳಿಗೆ, ಮಕ್ಕಳ ಖರ್ಚು, ವಿಮೆ, ಸಾಲದ ಕಂತು ಎನ್ನುತ್ತ ದುಡಿದ ಹಣ ಹತ್ತಾರು ದಾರಿ ಹಿಡಿದು ಕಟ್ಟಕಡೆಗೆ ಗಳಿಸಿದ್ದರಲ್ಲಿ ಉಳಿಯುವುದೆಷ್ಟು? ಎಂಬ ಪ್ರಶ್ನೆ ಕಾಡತೊಡಗುತ್ತದೆ. ದಿನಗೂಲಿಗಳಂತೂ ಸೊಳ್ಳೆಕಡಿತದ ವಾತಾವರಣದಲ್ಲಿ ಕೆಟ್ಟ ನೀರು ಕುಡಿಯುತ್ತ ರೋಗಸಂಕಟದಲ್ಲಿ ಬಳಲುತ್ತ ಬದುಕು ಕಟ್ಟಿಕೊಂಡವರು. ಅಡುಗೆ ಕೆಲಸ, ನೆಲ ಒರೆಸುತ್ತ ಹೊತ್ತಿನ ತುತ್ತು ಕಂಡ ಹೆಂಗಳೆಯರು ಅಸಂಖ್ಯ. ವಿಶ್ವಾಸದಿಂದ ಇಷ್ಟು ವರ್ಷ ಕೆಲಸ ಮಾಡುತ್ತಿದ್ದವರನ್ನು ಕೊರೊನಾ ಕಾರಣಕ್ಕೆ ಮನೆಗೆ ಕರೆಯಲು ಯಾರೂ ಸಿದ್ಧರಿಲ್ಲ, ಹೊರ ಹೋಗುವುದಕ್ಕೆ ಇವರಿಗೂ ಸಾಧ್ಯವಿಲ್ಲ.

ಕೊರೊನಾ ಮೂಡಿಸಿದ ಗ್ರಾಮ ಮರುವಲಸೆ

ನಗರದಲ್ಲಿ ಬಹುತೇಕ ಎಲ್ಲರೂ ಮುಖ್ಯ ರಸ್ತೆ, ಕವಲು ದಾರಿಯೆಂಬ ಪರಿಚಿತ ನೆಲೆಯ ಅಪರಿಚಿತ ಜನಗಳಲ್ಲವೇ? ಊರಿನಂತೆ ಬಿದ್ದರೆ ಮೇಲೆತ್ತುವವರು, ನಗುವವರು, ಗೆದ್ದರೆ ಸಂಕಟಪಡುವವರು, ಜಾತಿ–ಜಾತಕ ತೆಗೆದು ದೂರವಿಡುವವರಿಲ್ಲ. ಚೋಟುದ್ದ ವಿಷಯಕ್ಕೆ ಜಗಳ ಕಾಯುತ್ತ ಮುಖಮುಚ್ಚಿಕೊಂಡು ನಿಲ್ಲಬೇಕಿಲ್ಲ. ಸೊಸೆಗೆ ಅತ್ತೆಯ ಮಾತಿಲ್ಲ, ಮಗನಿಗೆ ಅಪ್ಪನ ಬೈಯ್ಗುಳಕ್ಕೆ ಅವಕಾಶ ಕಡಿಮೆ. ಸಹೋದರರ ತಿಕ್ಕಾಟ, ನಾದಿನಿಯ ಟೀಕೆಗಳೂ ದೊಡ್ಡ ದನಿಯಲ್ಲಿ ಕೇಳಿಸುವುದಿಲ್ಲ. ತಮ್ಮ ಪಾಡಿಗೆ ನಾವಿದ್ದರೆ ಅಕ್ಕಪಕ್ಕದವರೂ ಜೊತೆಗಿದ್ದೂ ಇಲ್ಲದವರಂತೆ ಬದುಕು. ಹೊಲದ ಬಿಸಿಲು, ಭೀಕರ ಬರದ ನಷ್ಟ, ದುಡಿಮೆಯ ಕಷ್ಟಕ್ಕಿಂತ ಕೊಂಚ ನಿರಾಳ ಗೇಯ್ಮೆ ನಗರದ್ದು. ಒಟ್ಟಿನಲ್ಲಿ ಕೆಲಸದ ಘನತೆ ದೊಡ್ಡದೆಂಬ ಲೆಕ್ಕಾಚಾರ! ಪ್ರವಾಹ ಬರಲಿ, ನೆರೆ ನುಗ್ಗಲಿ, ನಿಶ್ಚಿತ ದುಡಿಮೆಯಿದೆ, ನಿರಂತರ ಆದಾಯವಿದೆ. ಬಡವರು, ಮಧ್ಯಮವರ್ಗ, ಶ್ರೀಮಂತರೆಲ್ಲರಿಗೂ ನಗರ ವರ್ತುಲದಲ್ಲಿ ತಮ್ಮದೇ ಪ್ರಪಂಚ ಕಟ್ಟಿಕೊಂಡ ದಾರಿಗಳಿವೆ. ಸಂಪೂರ್ಣ ವ್ಯಾಪಾರ ವಹಿವಾಟು ಕುಸಿದು ‘ವರ್ಕ್ ಫ್ರಂ ಹೋಂ’ ಎಂದಿದ್ದ ಹಲವು ಕಂಪನಿಗಳು ಕೊನೆ ಕೊನೆಗೆ ಕೈಚೆಲ್ಲಿದವು. ನಿರ್ಮಾಣ ಕಾಮಗಾರಿಗಳು ನಿಂತವು. ಮುಂದೇನು ಮಾಡಬೇಕೆಂದು ಗೊತ್ತಿಲ್ಲದೇ ಖಾಸಗಿ ಕಂಪನಿಗಳ ಬೃಹತ್ ಯೋಜನೆಗಳು ಸರಕು ಸಾಮಗ್ರಿಗಳ ಪೂರೈಕೆಯಿಲ್ಲದೇ ಆಮೆಗತಿಯಾದವು. ಈಗ ಇಲ್ಲಿ ಕೆಲಸವಿಲ್ಲ ಎಂಬುದು ಪ್ರಶ್ನೆಯಲ್ಲ, ಕಾಯಿಲೆಯ ಗೂಡಿನಲ್ಲಿ ಬದುಕು ಸುರಕ್ಷಿತವಿಲ್ಲದ ಭಯ ವಲಸೆಯ ಮೂಲವಾಗಿದೆ.

ಊಟಕ್ಕೆ ದಿನಸಿ ಸಿಗುತ್ತಿಲ್ಲ, ಬಾಡಿಗೆ ಕಟ್ಟಲು ಹಣವಿಲ್ಲ, ಮಕ್ಕಳಿಗೆ ಶಾಲೆಯಿಲ್ಲ, ಜ್ವರ ಬಂದರೂ ವೈದ್ಯರನ್ನು ಕಾಣಲು ಸಾಧ್ಯವಿಲ್ಲ. ಮಹಾಮಾರಿ ವಕ್ಕರಿಸಿದರೆ ಮೂರು ನಾಲ್ಕು ಲಕ್ಷ ರೂಪಾಯಿ ಚಿಕಿತ್ಸೆಗೆ ಹೇಗೆ ಹೊಂದಿಸಬೇಕು? ರೋಗದ ಜೊತೆ ಬದುಕಬೇಕೆಂದು ಎಲ್ಲರೂ ಹೇಳುವವರೇ! ಸರ್ರಕಾ ಎಷ್ಟೇ ಪ್ರಯತ್ನ ಮಾಡಿದರೂ ರೋಗ ನಿಯಂತ್ರಣ, ಚಿಕಿತ್ಸೆ ಕಷ್ಟವೆಂಬುದು ಸಾಬೀತಾಗಿದೆ. ಎಚ್ಚರಿಕೆಯಲ್ಲಿ ಇರಬೇಕು. ಜನವಸತಿ ಕಡಿಮೆಯಿರುವ ಗ್ರಾಮಗಳು ಸುರಕ್ಷಿತ ನೆಲೆ. ಗ್ರಾಮ ಮರುವಲಸೆಯ ಈ ಸಮೂಹಸನ್ನಿಯಿಂದ ಕೊರೊನಾ ಕೂಡಾ ಹಳ್ಳಿ ಹಳ್ಳಿಗೆ ನುಗ್ಗುವ ಭೀತಿ ಎದುರಾಗಿದೆ.

‘ನಗರದಲ್ಲಿ ಇದ್ದೋರು ಇಲ್ಲಿಗೆ ಬರೋದು ಬೇಡ, ರೋಗ ಪಸರಿಸುತ್ತದೆ. ಬಂದ ತಪ್ಪಿಗೆ ದಂಡ ಕಟ್ಟಬೇಕು’ ಎಂದು ಕೆಲವು ಹಳ್ಳಿಗರು ಡಂಗುರ ಹೊಡೆಸಿದ್ದಾರೆ. ರಸ್ತೆಗೆ ಅಗಳ ಹೊಡೆದು, ಬೇಲಿ ಹಾಕಿ, ಕಾವಲು ಕಾಯುತ್ತ ಮರಳಿ ಬರುವವರನ್ನು ತಡೆದ ನೂರಾರು ಘಟನೆಗಳಿವೆ. ನಮ್ಮದೇ ಅಕ್ಕತಂಗಿ, ಅಣ್ಣತಮ್ಮಂದಿರನ್ನು ಮನೆಯೊಳಗೆ ಬಿಟ್ಟುಕೊಳ್ಳುವ ಧೈರ್ಯ ಯಾರಿಗೂ ಇಲ್ಲ. ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿ, ಅಲ್ಲಿಯೂ ಅವ್ಯವಸ್ಥೆ ವರದಿಯಾಗುತ್ತಿವೆ. ದಯವಿಟ್ಟು ಊರಿಗೆ ಹೋಗಬೇಡಿ’ ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕೈಮುಗಿದು ಕೇಳಿಕೊಂಡಿದ್ದಾರೆ. ಲಾಕ್‌ಡೌನ್, ಸೀಲ್‌ಡೌನ್, ಕರ್ಪ್ಯೂ ಪ್ರಹಾರಕ್ಕೆ ಲಕ್ಷಾಂತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕಷ್ಟವಾಗಿರುವಾಗ ಯಾರ ಮಾತನ್ನು ಯಾರೂ ಕೇಳುವಂತಿಲ್ಲ. ದುಬಾರಿ ನಗರದಲ್ಲಿ ರೋಗದ ಮಧ್ಯೆ ಬದುಕುವ ದಾರಿಯಾದರೂ ಯಾವುದು? ಕುಳಿತು ಉಣ್ಣವುದು ಸಾಧ್ಯವೇ? ಪ್ರತಿಯೊಬ್ಬರಿಗೂ ಸಮಸ್ಯೆಗಳಿವೆ.

ಐದೇ ಐದು ತಿಂಗಳ ಹಿಂದೆ ಹೇಗೆ ಬದುಕಿದ್ದೇವೆಂದು ಊಹಿಸಿದರೆ ಅಚ್ಚರಿಯಾಗುತ್ತದೆ. ವೀಕೆಂಡ್ ಮಸ್ತಿ, ಟಾಕೀಸ್, ಮಾಲ್ ಹಾಗೂ ಹೊಟೆಲ್ , ಪ್ರವಾಸಿ ತಾಣ, ಹೋಂಮ್ ಸ್ಟೇ, ರೆಸಾರ್ಟ್ ಸುತ್ತುವವರಿದ್ದರು. ಪ್ರತಿ ಗಂಟೆಗೆ ಹೆದ್ದಾರಿಯಲ್ಲಿ ಸಾವಿರಾರು ವಾಹನ ಸಂಚಾರವಿತ್ತು. ಜಗತ್ತಿನ ಯಾವ ಮೂಲೆಗೆ ಹೋಗಬಹುದು, ಏನು ಬೇಕಾದರೂ ಅಲ್ಲಿಂದ ತರಿಸಬಹುದು ಎನ್ನುವ ಪರಿಸ್ಥಿತಿಯಿತ್ತು. ಕೊಬ್ಬರಿ ಬೆಲೆ ಕುಸಿತ, ಟೊಮೆಟೋ ರಸ್ತೆಗೆ ಎಸೆತ, ಕಬ್ಬಿನ ಹಣ ಬಾಕಿ, ಆಲೂಗಡ್ಡೆಗೆ ರೋಗ, ತೊಗರಿಗೆ ಕಾಯಿಕೊರಕ, ಆಡಿಕೆಯ ಏರಿಳಿತ ಯಾವುದೂ ನಗರಕ್ಕೆ ಸ್ವಲ್ಪವೂ ಗೊತ್ತೇ ಆಗಿರಲಿಲ್ಲ. ಭತ್ತಕ್ಕೆ ಬೆಲೆಯಿಲ್ಲದೇ ರಾಯಚೂರಿನ ರೈತರ ಗೋದಾಮಿನಲ್ಲಿ ಲಕ್ಷಾಂತರ ಕ್ವಿಂಟಾಲ್ ಕೊಳೆಯುತ್ತಿದ್ದರೂ ಅನ್ನದ ಬೆಲೆ ಅರ್ಥವಾಗಿರಲಿಲ್ಲ. ಹಣವಿದ್ದರೆ ಎಲ್ಲವನ್ನೂ ಪಡೆಯಬಹುದೆಂದು ಲೆಕ್ಕ ಹಾಕಿದವರಿಗೆ ಜೀವ ಬಚಾವಾದರೆ ಸಾಕೆಂಬ ಸ್ಥಿತಿ ಒದಗಿದೆ. ಕಣ್ಣಿಗೆ ಕಾಣದ ವೈರಸ್ ಎಂಥವರನ್ನೂ ನಡುಗಿಸಿದೆ.

ಓದಿದ ಪದವಿಗೆ ಯೋಗ್ಯ ಕೆಲಸ ಊರಲ್ಲಿ ಸಿಗುತ್ತಿಲ್ಲ, ಸಾರಿಗೆ ಸಂಪರ್ಕ ಸರಿಯಾಗಿಲ್ಲ, ಕೃಷಿಯಿಂದ ಆದಾಯವಿಲ್ಲ, ಚಿಕ್ಕ ಜಮೀನಲ್ಲಿ ಸಂಸಾರ ನಿಭಾಯಿಸಲು ಸಾಧ್ಯವಿಲ್ಲ. ಸ್ವಂತ ದುಡಿಮೆಯಲ್ಲಿ ತಮ್ಮದೇ ನಿರ್ಧಾರದಂತೆ ಬದುಕುವ ಕನಸಿಗೆ ಎದ್ದು ನಗರ ಸೇರಿದ್ದು ಸಹಜವೇ ! ಮೇಷ್ಟ್ರುಗಳು, ಮೆಕ್ಯಾನಿಕ್‌ಗಳು, ಹೋಟೆಲ್, ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್, ಬೇಕರಿ, ದಿನಸಿ ಅಂಗಡಿ, ಟ್ಯಾಕ್ಸಿ ಡ್ರೈವರ್ ಕೆಲಸದಿಂದ ಶುರುವಾಗಿ ನೂರಾರು ಕೆಲಸಗಳು ದೊರಕಿವೆ. ಸಿಲಿಕಾನ್ ಸಿಟಿಯಲ್ಲಿ ತಿಂಗಳಿಗೆ ಅರವತ್ತು ಎಪ್ಪತ್ತು ಸಾವಿರ ವೇತನ ಎಣಿಸುತ್ತಿದ್ದ ಖಾಸಗಿ ಕಂಪನಿಗಳ ಟೆಕ್ಕಿಗಳ ಪಡೆಯೂ ದೊಡ್ಡದು. ಈಗ ಎಲ್ಲರೂ ದುಃಖತಪ್ತರು, ಕರೋನ ಸಂತ್ರಸ್ತರು.

ನಗರ ವಲಸೆಯ ಕಾಲದ ನೆನಪುಗಳು

ನಗರ ಸೆಳೆತದ ಕಾರಣಕ್ಕೆ ಹಳ್ಳಿಗಳು ವೃದ್ದಾಶ್ರಮಗಳಾಗುತ್ತ ಎರಡು ಮೂರು ದಶಕಗಳಿಂದಲೂ ಊರು ಬಿಡುವ ಪ್ರಕ್ರಿಯೆ ಜೋರಾಗಿಯೇ ನಡೆದಿತ್ತಲ್ಲವೇ? ಕಡಿವಾಣ ಹಾಕುವುದು ಹೇಗೆಂದು ಯಾರಿಗೂ ಗೊತ್ತಾಗಲಿಲ್ಲ. ನಾಲ್ಕು ವರ್ಷದ ಹಿಂದೆ ಭೀಕರ ಬರ ಬಂದಾಗ ಬೆಳೆ ಒಣಗಿ ದನಕರುಗಳನ್ನು ಮಾರಾಟ ಮಾಡಿ ಕಲಬುರ್ಗಿಯ ಆಳಂದದ ಹಳ್ಳಿಗರು ಪುಣೆ, ಮುಂಬೈಗೆ ಗುಳೆ ಹೋಗಿದ್ದರು. ಬೆಂಗಳೂರಿನ ಯಶವಂತಪುರ ಗೇಟಿನಲ್ಲಿ ನಿತ್ಯ ಬೆಳಿಗ್ಗೆ ವಲಸೆ ಬರುವವರನ್ನು ಕಾಣಬಹುದಿತ್ತು. ವರ್ಷದ ಕೆಲವು ತಿಂಗಳ ಕೃಷಿ ಕೆಲಸ ಮುಗಿದ ಬಳಿಕ ನಗರಕ್ಕೋ, ಮಲೆನಾಡಿನ ತೋಟಕ್ಕೋ ಕೆಲಸಕ್ಕೆ ಹೋಗುವುದು ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಮಾಮೂಲಿ. ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ, ದ್ರಾಕ್ಷಿ, ಬಾಳೆ, ಪಪ್ಪಾಯ, ತರಕಾರಿ ಹಲವು ಹುಡುಗರನ್ನು ಹಳ್ಳಿಯಲ್ಲಿ ನಿಲ್ಲಿಸಿದ್ದಿದೆ. ನೀರಾವರಿ ಪ್ರದೇಶದ ಭತ್ತ, ಕಬ್ಬು ಭರವಸೆಯಾಗಿದ್ದಿದೆ. ಆದರೂ ನಿರಂತರ ಬರಗಾಲದಿಂದ ಬೆಳೆ ನಷ್ಟವಾಗಿ ಕೃಷಿಕರ ಎದೆ ನಡುಗಿಸಿತು, ಅವರನ್ನು ಎಂದಿನಂತೆ ನಗರ ಸಲೀಸಾಗಿ ಸೆಳೆಯಿತು. ಕ್ರಿ.ಶ. 2001ರಿಂದ ನಗರ ಜನಸಂಖ್ಯೆಯ ಏರಿಕೆ ಗಮನಿಸಿದರೆ ಇದು ಮನದಟ್ಟಾಗುತ್ತದೆ.

ಕೃಷಿ ಸಾಧಕರ ಕ್ಷೇತ್ರ ವೀಕ್ಷಣೆಗೆ ರಾಜ್ಯ ಸುತ್ತಾಡುವಾಗ ಮುಂದಿನ 20 ವರ್ಷಗಳ ನಂತರ ಕೃಷಿ ಭವಿಷ್ಯ ಏನಾದೀತು ಎಂದು ಅನೇಕರನ್ನು ಪ್ರಶ್ನಿಸಿದ್ದೆ. ಬೀದರ್, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 300ಕ್ಕೂ ಹೆಚ್ಚು ರೈತರು ನೀಡಿದ ಉತ್ತರಗಳು ನನ್ನ ಬಳಿಯಿವೆ. ಕರಾವಳಿ, ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿದ್ದ ನೋಟಗಳು, ಮಕ್ಕಳಿಲ್ಲದೆ ಹಳ್ಳಿ ಶಾಲೆಗಳು ಮುಚ್ಚಿಹೋಗಿದ್ದು, ಈರುಳ್ಳಿ ಕಳೆ ತೆಗೆಯಲು ಕೊಪ್ಪಳದಲ್ಲಿ ವೃದ್ದೆಯರೇ ಕುಳಿತ ಸಾಲು ಕಂಡಿರುವೆ. ಊರಿಗೆ ರಸ್ತೆಯಿಲ್ಲ, ಗಂಡಿಗೆ ಹೆಣ್ಣು ಸಿಗುತ್ತಿಲ್ಲ, ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ಆದಾಯವಿಲ್ಲವೆಂದು 35 ಎಕರೆಯ, ಎತ್ತರದ ಬೆಟ್ಟದ ಅತ್ಯಂತ ಸುಂದರವಾದ ಕೊಲ್ಲೂರಿನ ಮೇಗನಿಯ ಇಡೀ ಹಳ್ಳಿಯೇ ಮಾರಾಟವಾಗಿತ್ತು. ಇಷ್ಟೆಲ್ಲ ಆದರೂ ಗ್ರಾಮ ಪರಿಸ್ಥಿತಿಯ ರೋಗಲಕ್ಷಣ ಯಾರ ಎದೆಗೂ ಅರ್ಥವಾಗಲಿಲ್ಲ. ಹಳ್ಳಿಗೆ ರಸ್ತೆ, ಆಸ್ಪತ್ರೆ, ಶಾಲೆ, ವಿದ್ಯುತ್ ಕೊಡಲು ಹಲವು ಕೋಟಿಗಳು ಬೇಕು. ಕೆಲವೇ ಕೆಲವು ಜನಕ್ಕೆ ಇಷ್ಟೊಂದು ಕೋಟಿ ಖರ್ಚು ಸಾಧ್ಯವಿಲ್ಲವೆಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮೇಗನಿ ಮಾರಾಟದ ಬಗ್ಗೆ ಚರ್ಚೆಗೆ ಹೋದಾಗ ಹೇಳಿದ್ದರು. ‘ಮಾರುವವರು ಮಾರಲಿ, ಕೊಳ್ಳುವವರು ಕೊಳ್ಳಲಿ’ ಎಂಬ ಉಡಾಫೆಯಲ್ಲಿ ಸರ್ಕಾರದ ವರ್ತನೆಯಿತ್ತು.

ಅಮೆರಿಕಾದಲ್ಲಿ ಪ್ರತಿಶತ 2.6ರಷ್ಟು ಜನ ಮಾತ್ರ ಕೃಷಿಕರು. ನಮ್ಮಲ್ಲಿ ಶೇಕಡಾ 70 ಜನ ಏಕೆ? ಇವರೆಲ್ಲ ನಗರಕ್ಕೆ ಬಂದರೆ ವ್ಯಾಪಾರ ವಹಿವಾಟು ಹೆಚ್ಚಿ ಕಂಪನಿಗಳಿಗೆ ಲಾಭವಾಗುತ್ತದೆಂಬ ಲೆಕ್ಕವಿತ್ತು. ಕೃಷಿ ನಿರ್ವಹಣೆ ನಿಕ್ಕೀ ನಷ್ಟವೆಂದು ಕೃಷಿಕರೂ ಉತ್ಸಾಹ ಕಳೆದುಕೊಂಡು ಕೈಚೆಲ್ಲಿದರು. ವಯಸ್ಸಾದ ತಂದೆತಾಯಿ, ಹತ್ತಾರು ಎಕರೆ ಭೂಮಿ ಮರೆತು ನಗರ ಸೇರಿದವರಿದ್ದಾರೆ. ‘ದುಡಿಯುವವರಿದ್ದರೆ ಅನ್ನ, ಯುವಕರಿದ್ದರೆ ಚೆನ್ನ’ ಮಾತು ಕೇಳಿದವರಾರು? ಕೃಷಿಗೆ ಎಷ್ಟೆಲ್ಲ ಯಂತ್ರ ಶೋಧಿಸಿದವರಿಗೆ ಯುವಕರನ್ನು ಹಳ್ಳಿಯಲ್ಲಿ ನಿಲ್ಲಿಸುವ ಒಂದು ಯಂತ್ರ ರೂಪಿಸುವುದು ಸಾಧ್ಯವಾಗಿರಲಿಲ್ಲ. ಹಳ್ಳಿಗರನ್ನು ಹಳ್ಳಿಗೆ ಕಳಿಸುತ್ತ ಕೊರೊನಾ ಈಗ ಅದನ್ನು ಮಾಡುತ್ತಿದೆ. ಹಳ್ಳಿಗಳು ಹೊಸದಾಗಿ ಮುರಿದು ಕಟ್ಟುವಂತೆ ಬಹುದೊಡ್ಡ ಬದಲಾವಣೆಯ ಗಾಳಿ ಬೀಸತೊಡಗಿದೆ.

ಎಂಬತ್ತರ ದಶಕದಲ್ಲಿ ಓದಿದ ಹುಡುಗರಷ್ಟೇ ನಗರಕ್ಕೆ ಹೋಗುತ್ತಿದ್ದ ಕಾಲವಿತ್ತು. ಮನೆ ಮಂದಿಯ ಜೊತೆ ಜಗಳ ಮಾಡಿಕೊಂಡು ನಗರಕ್ಕೆ ಹೋಗಿ ನಾಪತ್ತೆಯಾಗುತ್ತಿದ್ದರು. ‘ಕೆಟ್ಟು ಪಟ್ಟಣ ಸೇರು’ ಎಂದು ಮಾತಾಡುತ್ತಿದ್ದಲ್ಲಿ ‘ನಗರ ಕಟ್ಟುವುದಕ್ಕೆ’ ಹಳ್ಳಿ ಖಾಲಿಯಾಯ್ತು. ಕೊಪ್ಪಳದ ಹಿರೇಸಿಂದೋಗಿಯ ಹೊಲದ ಕರಿಜಾಲಿ ಮರದ ನೆರಳಲ್ಲಿ ಕುಳಿತು ಬಸವರಾಜಯ್ಯ ಹೇಳಿದ ಮಾತು ನೆನಪಾಗುತ್ತಿದೆ. ‘ಅಣ್ಣಾ ಪೇಟ್ಯಾಗೆ ಕಂಪ್ಯೂಟರ್ ಹಿಡಿದು ಕುಂತ ಮಂದಿಗೆ ಅನ್ನಾ ಬೆಳಿಯಾಕ ಬರ‍್ಹಾಂಗಿಲ್ಲ. ಅದ್ಕೆ ಒಂದಲ್ಲ ಒಂದು ದಿನ ಅನ್ನ ಬೆಳಿಯೋದು ಹೇಗೆ ಅಂಥ ಹಳ್ಳಿ ಹುಡುಕ್ಕೊಂಡು ಅವರೆಲ್ಲ ಬರ‍್ತಾರ’ ಎಂದಿದ್ದರು. ಕುಡಿಯಲು ನೀರು ಸಿಗುತ್ತಿಲ್ಲ, ದುಬಾರಿ ಜೀವನ ವೆಚ್ಚ ಭರಿಸಲು ಆಗುತ್ತಿಲ್ಲ, ವಿಷ ಆಹಾರ, ಗಾಳಿ ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆಯೆಂದು ಅಲ್ಲೊಬ್ಬರು ಇಲ್ಲೊಬ್ಬರು ದಶಕಗಳಿಂದ ಬರುತ್ತಿದ್ದರು. ಆದರೆ ಈಗ ಹಾಗಲ್ಲ, ಒಮ್ಮೆಗೆ ರೋಗ ಪ್ರಹಾರಕ್ಕೆ ಹಳ್ಳಿಗಳ ದಾರಿ ಭರ್ತಿಯಾಗುತ್ತಿದೆ. ಇವರಲ್ಲಿ ಹಳ್ಳಿಕಟ್ಟುವ ಕನಸುಳ್ಳವರಿಗಿಂತ ಕಂಗಾಲಾದವರೇ ಜಾಸ್ತಿ. ಕಾಸುಳ್ಳವರು ಕೆಲವರಾದರೆ ಬರಿಗೈಯಲ್ಲಿ ವ್ಹಾಪಸ್ಸಾಗುತ್ತಿರುವವರೇ ಹೆಚ್ಚು. ಇದು ಭವಿಷ್ಯದ ಆರ್ಥಿಕತೆ ಎಂಥ ಹಂತಕ್ಕೆ ಹೋಗಬಹುದೆಂಬುದರ ದಿಕ್ಸೂಚಿ ಕೂಡ.

ಹಳ್ಳಿ ಮೊದಲಿನಂತಿಲ್ಲ

ಉತ್ತಮ ಶಾಲೆಗಳಿಲ್ಲ, ರಸ್ತೆ ಸರಿಯಿಲ್ಲ, ನೆಟ್‌ವರ್ಕ್ ಸಿಗುತ್ತಿಲ್ಲವೆನ್ನುತ್ತ ಹಳ್ಳಿಗಳನ್ನು ಹೈಟೆಕ್ ನಗರಕ್ಕೆ ಹೋಲಿಸುವುದು ಸರಿಯಲ್ಲ. ನಗರದಲ್ಲಿರುವುದು ಹಳ್ಳಿಯಲ್ಲಿಲ್ಲ, ಹಳ್ಳಿಯ ನೆಮ್ಮದಿ ನಗರದಲಿಲ್ಲ ಕಾಲ ಬದಲಾಗಿದೆ. ಎರಡು ದಶಕಗಳೀಚೆಗೆ ಹತ್ತಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗುತ್ತ ರಸ್ತೆ, ಸೇತುವೆ, ಕುಡಿಯುವ ನೀರಿನ ವ್ಯವಸ್ಥೆಗಳಾಗಿವೆ. ರಂಟೆ, ಕುಂಟೆ ಹೊಡೆಯುತ್ತ ಎತ್ತಿನಲ್ಲಿ ಕಷ್ಟಪಟ್ಟು ಹೊಲ ಉಳುತ್ತಿದ್ದಲ್ಲಿ ಟ್ರ್ಯಾಕ್ಟರ್ ಬಂದಿವೆ. ಬೀಜ ಬಿತ್ತನೆ, ಸಿಂಪರಣೆ, ಬೆಳೆ ಕಟಾವು, ಸಂಸ್ಕರಣೆ, ಸಾಗಾಟಕ್ಕೆ ಅನುಕೂಲಗಳಿವೆ. ಕೆರೆ, ಕಾಲುವೆ, ಕೊಳವೆ ಬಾವಿಗಳಿಂದ ನೀರಾವರಿ ಪ್ರಯತ್ನಗಳಿವೆ. ಹಗೇವು, ಕಣಜ, ದೊಡ್ಡಿಗಳ ಸ್ವರೂಪ ಮಾಯವಾಗಿ ಪೇಟೆಯ ಮನೆಗಳಂತೆ ಬಣ್ಣ ಬೆರಗು ಕಾಣಿಸಿದೆ. ಮಿಕ್ಸರ್, ಗ್ರ್ಯಾಂಡರ್, ಫ್ರಿಜ್, ಕಾರು ಜಮಾವಣೆಯ ರೀತಿ ನೋಡಿದರೆ ವ್ಯವಸ್ಥೆಯಲ್ಲಿ ಕೊರತೆ ಕಾಣುತ್ತಿಲ್ಲ.

ಒಂದು ಸಂಗತಿ ನೆನಪಿಡಬೇಕು, ಏರುತ್ತಿರುವ ಗ್ರಾಮೀಣ ಜನಸಂಖ್ಯೆ, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹಳ್ಳಿಯ ಹಲವರು ನಗರಕ್ಕೆ ವಲಸೆ ಹೋಗದಿದ್ದರೆ ಇತ್ತ ಹಳ್ಳಿ ಕುಟುಂಬದ ಪರಿಸ್ಥಿತಿಯೂ ಸುಧಾರಿಸುತ್ತಿರಲಿಲ್ಲ. ನಗರ ದುಡಿಮೆಯ ಕೆಲವಷ್ಟಾದರೂ ಹಣ ಹಳ್ಳಿ ತಲುಪಿದೆಯೆಂಬುದನ್ನು ಮರೆಯಲಾಗದು. ಸಣ್ಣ ಹಿಡುವಳಿದಾರರಿಗೆ ಕೃಷಿಯೇತರ ಬದುಕು ಪ್ರಾಪ್ತವಾಗಿದೆ. ಕಮ್ಮಾರ ಕಂಪ್ಯೂಟರ್ ಹಿಡಿದದ್ದು, ಕೃಷಿಕ ಶಾಪಿಂಗ್ ಮಾಲ್ ಕಟ್ಟಿದ್ದು, ವೈದ್ಯ, ಇಂಜಿನಿಯರ್, ಗುತ್ತಿಗೆದಾರ, ಕಲಾವಿದ ಮುಂತಾಗಿ ಬೆಳೆದು ನಿಂತವರಲ್ಲಿ ಊರು ಬಿಟ್ಟವರ ಸಾಲಿದೆ. ಇವರಿಗೆಲ್ಲ ಜೀವನನುಭವ ಕಲಿಸಿದ ಲೆಕ್ಕಾಚಾರ, ನಿಶ್ಚಿತ ಯೋಜನೆ, ಉತ್ತಮ ಶಿಕ್ಷಣ, ಹೊರಜಗತ್ತಿನ ಅರಿವು, ಉಳಿತಾಯದ ಕಾರಣಗಳಿವೆ. ರಾಜ್ಯದ ವಿವಿಧ ಪ್ರದೇಶದ ಬ್ಯಾಂಕು ಶಾಖೆಗಳಲ್ಲಿ ಉಳಿತಾಯ, ಸಾಲದ ಪ್ರಮಾಣ ಗಮನಿಸಿದರೆ ಅಚ್ಚರಿಯಾದೀತು. ಗ್ರಾಮೀಣ ನೆಲೆಯಲ್ಲಿ ಹಣವಿದ್ದರೂ ಲಾಭ ದೊರೆಯದ ಭಯದಿಂದ ಯಾರೂ ಉದ್ಯಮಗಳಿಗೆ ತೊಡಗಿಸುವುದು ಕಡಿಮೆ, ಸಾಲ ಪಡೆಯುವವರಿಲ್ಲ! ಹೀಗಾಗಿಯೇ ಪ್ರತಿ ತಾಲೂಕಿನಲ್ಲಿ ಪ್ರತಿ ವರ್ಷ ಪದವಿ ಪಡೆಯುವ ಹತ್ತಾರು ಸಾವಿರ ಹುಡುಗರು ನಗರಕ್ಕೆ ಓಡಿದ್ದಾರೆ. ಈಗ ಊರಿಗೆ ಮರಳಿದವರಿಗೆ ಕೆಲಸಬೇಕಾಗಿದೆ, ನೆಲದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟ ಅನಿವಾರ್ಯವಾಗಿದೆ.

ಕೊರೊನಾದಿಂದ ಹಳ್ಳಿಗಳಿಗೆ ತೊಂದರೆಯಾಗಿಲ್ಲವೆಂದು ಯಾರೂ ಭಾವಿಸಬಾರದು. ಸಣ್ಣಪುಟ್ಟ ಕೆಲಸ ನಂಬಿ ಸಮೀಪದ ಪೇಟೆಯಲ್ಲಿ ದುಡಿಯುತ್ತಿದ್ದವರ ಆದಾಯ ನಿಂತಿದೆ. ರಮಜಾನ್ ಹಬ್ಬಕ್ಕೆ ಪಪ್ಪಾಯ ಮಾರಲು ಯೋಜಿಸಿ ವರ್ಷದಿಂದ ತೋಟ ಬೆಳೆಸಿದವರು ಸಾಗಾಟ ಸಾಧ್ಯವಾಗದೆ ನರಳಿದ್ದಾರೆ. ಉತ್ತರ ಪ್ರದೇಶದ ಮಾರುಕಟ್ಟೆ ನಂಬಿ ಪೈನಾಪಲ್ ಬೆಳೆದವರ ಹಣ್ಣುಗಳು, ಲಾರಿ ಸಂಚಾರ ನಿಂತುಹೋಗಿದ್ದರಿಂದ ತೋಟಗಳಲ್ಲೇ ಕೊಳೆಯುತ್ತಿವೆ. ಹಬ್ಬ, ಉತ್ಸವ, ಜಾತ್ರೆಗಳಲ್ಲಿ ಮಾರಾಟವಾಗುತ್ತಿದ್ದ ಮಾವು, ಬಾಳೆ, ಕಲ್ಲಂಗಡಿ, ದ್ರಾಕ್ಷಿ, ದಾಳಿಂಬೆ ಪರಿಸ್ಥಿತಿಯೂ ಕಹಿಯಾಗಿದೆ. ಏಪ್ರಿಲ್–ಮೇ ತಿಂಗಳಲ್ಲಿ ಮದುವೆ ಸಮಾರಂಭಕ್ಕೆ ಬೆಲೆ ಏರುತ್ತಿದ್ದ ನುಗ್ಗೆ, ಗಿಡದಲ್ಲಿಯೇ ಹಾಳಾಗಿದೆ. ಶ್ರಾವಣಕ್ಕೆ ಲಾಭ ಕೊಡುತ್ತಿದ್ದ ಹೂವಿನ ಕಥೆ ಮುಂದೇನಾಗುತ್ತದೋ ನೋಡಬೇಕು. ಓಡಾಟಗಳೆಲ್ಲ ನಿಂತು ಹೋಗಿದ್ದರಿಂದ ಕೃಷಿ ಕೆಲಸಗಳು ಸಲೀಸಾಗಿ ನಡೆಯುತ್ತಿರುವುದು ಸಮಾಧಾನ. ನಮ್ಮ ಸುತ್ತಾಟಗಳಲ್ಲಿ ಬಹುತೇಕ ಅನವಶ್ಯಕವಾಗಿದ್ದವೆಂಬುದು ಈಗೀಗ ಅರ್ಥವಾಗಿದೆ. ಭೂಮಿಯ ಗಡಿಯೇ ಗೊತ್ತಿಲ್ಲದ ಹುಡುಗರು ನೆಲದಲ್ಲಿ ಓಡಾಡಿದ್ದು ಖುಷಿ. ನಗರದಂತೆ ಹಳ್ಳಿಗಳಲ್ಲಿ ಉಪವಾಸ ಬೀಳುವ ಸಂದರ್ಭ ಕಡಿಮೆ. ತರಕಾರಿ, ಸೊಪ್ಪು, ಮಾವು, ಹಲಸಿನಲ್ಲಿ ಖರ್ಚಿಲ್ಲದೇ ಬದುಕಿದ, ಬದುಕುವ ಹೆಮ್ಮೆಯಿದೆ. ಇಷ್ಟುಕಾಲ ಹಳ್ಳಿಯೆಂದು ಮೂಗುಮುರಿಯುತ್ತಿದ್ದವರು ಕೊರೊನಾ ಕಾರಣಕ್ಕಾದರೂ ನೆನಪಿಸಿಕೊಂಡರಲ್ಲವೆಂಬ ಸಂತಸವಿದೆ.

ಕಾಲ ಮುಂಚಿನಂತಿಲ್ಲ. ಹೊಸ ಹೊಸ ಸಂಶೋಧನೆ, ಬೆಳೆ ತಳಿಗಳು ಬಹುಬೇಗ ಹಳ್ಳಿ ತಲುಪುತ್ತಿವೆ. ಟ್ರೈನು ಐದೇ ಐದು ನಿಮಿಷ ಗೋಕಾಕ್‌ನಲ್ಲಿ ನಿಲ್ಲಲು ಶುರುವಾದ ಕಾರಣಕ್ಕೆ ಮುಂಬೈಗೆ ತರಕಾರಿ ಸಾಗಾಟ ಅನುಕೂಲವಾಗಿ ಅರಬಾವಿ ಸುತ್ತಲಿನ 20–30 ಕಿಲೋಮೀಟರ್ ಹೊಲ ತರಕಾರಿಗೆ ಖ್ಯಾತವಾಗಿಲ್ಲವೇ? ದೇಶದ ಮಹಾನಗರ ಸಂಪರ್ಕಿಸುವ ರಸ್ತೆ ಬಂದ ಕಾರಣಕ್ಕೆ ಕೋಲಾರ ಟೊಮೆಟೋ ಖ್ಯಾತಿ ಹೆಚ್ಚಿಲ್ಲವೇ? ತೆರೆದ ಬಾವಿಯಲ್ಲಿ ಅತ್ಯುತ್ತಮ ಕಬ್ಬು ಬೆಳೆಯುತ್ತಿದ್ದ ಬೀದರ್ ಸ್ಥಾನವನ್ನು ಆಲಮಟ್ಟಿ ಅಣೆಕಟ್ಟೆ ನೀರಾವರಿ ಬಳಿಕ ಬಾಗಲಕೋಟೆ ಪಡೆದಿದೆಯಲ್ಲವೇ? ಕೃಷಿಗೆ ನೀರು ಕೊಟ್ಟರೆ ಸರ್ಕಾರಕ್ಕೆ ಸಾಲ ಕೊಡುತ್ತೇನೆಂದ ಹಳ್ಳಿಗಳಿವೆ. ಹೆಬ್ಬೇವು, ಶ್ರೀಗಂಧ ಬೆಳೆಯಲು ಸರ್ಕಾರದ ಪ್ರೋತ್ಸಾಹ, ಮರ ಕಾಯ್ದೆಗೆ ತಿದ್ದುಪಡಿ ದೊರಕಿದ ನಂತರದಲ್ಲಿ ಲಕ್ಷಾಂತರ ಎಕರೆ ಹೊಲದ ಚಹರೆ ಬದಲಾದ ನಿದರ್ಶನಗಳಿವೆ. ರೈತರಿಗೆ ಬೆಳೆಯುವ ವಿಚಾರದಲ್ಲಿ ಸಮಸ್ಯೆಯಿಲ್ಲ, ಸರಿಯಾಗಿ ಬೆಲೆ ಸಿಕ್ಕರೆ ಕೃಷಿ ಉಳಿಯುತ್ತದೆಂಬ ಮಾತಿದೆ. ಈಗ ಊರಿಗೆ ಮರಳುವವರಿಗೆ ಬೆಳೆಯುವ ಶಕ್ತಿ ಇಲ್ಲದಿದ್ದರೂ ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಹಣ ದೊರಕಿಸುವ ತಂತ್ರ ಜೋಡಿಸಿದರೆ ಕೃಷಿಕಪರವಾಗಿ ಎದ್ದು ನಿಲ್ಲಬಹುದು.

ಹಿಂಗಾರಿ ಮುಂಗಾರಿ ಲೆಕ್ಕದಲ್ಲಿ ಅಕ್ಕಡಿ ಬೇಸಾಯದಲ್ಲಿ ಹೈನುಗಾರಿಕೆ ಜೊತೆಗೆ ಬದುಕಿದ ರೀತಿ ಕೈಬಿಟ್ಟು ವಾಣಿಜ್ಯ ಬೆಳೆಗಳತ್ತ ಆಸಕ್ತಿ ಹೆಚ್ಚಿದೆ. ಕಬ್ಬು, ಭತ್ತ, ಬಾಳೆ, ಅಡಿಕೆ, ರಬ್ಬರ್, ಪೈನಾಪಲ್, ಪಪ್ಪಾಯ, ಮಾವು, ಶುಂಠಿ, ಅರಿಶಿನ, ತೊಗರಿ, ಸೂರ್ಯಕಾಂತಿ, ಸೋಯಾ, ಹತ್ತಿ, ಟೊಮೆಟೋ, ಗೋವಿನಜೋಳ, ತೊಗರಿ ಎನ್ನುತ್ತ ಬೆಳೆ ಸ್ವರೂಪ 30 ವರ್ಷಗಳಲ್ಲಿ ಬದಲಾಗಿದೆ. ಹಣದ ಬೆಳೆ ಭೂಮಿಯ ಆರೋಗ್ಯವನ್ನೂ ಕೆಡಿಸಿದೆ. ಬೆಲೆ ಕುಸಿತದ ಸಮಸ್ಯೆಯೂ ಇದೆ. ನಗರದ ವಿಷ ವಾತಾವರಣ ಸಾವಯವ ಉತ್ಪನ್ನ ಬಯಸುತ್ತಿದೆ. ಪ್ರಚಾರದಿಂದ ಮಾರುಕಟ್ಟೆ ಬೆಳೆದು ರಾಸಾಯನಿಕ ಉತ್ಪನ್ನಗಳನ್ನು ಸಾವಯವವೆಂದು ಮಾರುವ ದಂಧೆಗಳಿವೆ. ಹೊರರಾಜ್ಯಗಳಿಂದ ಉತ್ಪನ್ನ ಖರೀದಿಸಿ ಸಾವಯವವೆಂದು ಮಾರುವ ನಾಟಕವಿದೆ. ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಸಾವಯವ ವಿಶ್ವಾಸ ಹೆಚ್ಚಿಸುವ ಅವಕಾಶವಿದೆ. ಒಮ್ಮೆಗೆ ಬಂಪರ್ ಬೆಳೆ ಮಾರುಕಟ್ಟೆಗೆ ಬಂದರೆ ಯಾರಿಗೂ ಲಾಭ ಸಿಗುತ್ತಿಲ್ಲ. ಹೊಸ ಮಾರುಕಟ್ಟೆ ಹುಡುಕಾಟ, ಮೌಲ್ಯವರ್ಧನೆಯ ಯತ್ನಗಳೂ ಬೇಕು. ಸಾಮರ್ಥ್ಯ ಗಮನಿಸಿ ಹಳ್ಳಿಗೆ ಮರಳಿದವರು ತಮ್ಮ ಕೆಲಸದ ದಾರಿ ಹುಡುಕಬೇಕಿದೆ.

‘ಬಾಂಬೆಯಲ್ಲಿ ಇಷ್ಟಗಲ ಹರಿವಾಣದಲ್ಲಿ ಬೀಡಾ ಕಟ್ಟುವವನ ಆದಾಯ ನಾಲ್ಕು ಎಕರೆ ಗದ್ದೆಯಲ್ಲಿ ವರ್ಷವಿಡೀ ಬೆವರಿಳಿಸಿದರೂ ಸಿಗುತ್ತಿಲ್ಲ’ವೆಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥನದ ಸಾಲು ನೆನಪಿರಬಹುದು. ನಗರದ ನೌಕರಿಯಂತೆ ಕೃಷಿಯಲ್ಲಿ ತಿಂಗಳಿಗೆ ನಿಶ್ಚಿತ ಹಣ ಯಾವತ್ತೂ ದೊರೆಯುವುದಿಲ್ಲ. ಸರಿಯಾಗಿ ಬೆಳೆ ಯೋಜಿಸಿದರೆ ಇದು ಸಾಧ್ಯವಿದೆ. ದಿನದ ಖರ್ಚು ಏರುತ್ತಿರುವಾಗ, ಬೇಡಿಕೆಗಳು ಹೆಚ್ಚುತ್ತಿರುವಾಗ ಕೃಷಿ ಆದಾಯದಿಂದ ಎಲ್ಲವೂ ಸಾಧ್ಯವೆಂದು ಹೇಳಲಾಗದು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ತತ್ವ ಮುಖ್ಯ.

ಹಳ್ಳಿಗಳಲ್ಲಿದೆ ರೋಗನಿರೋಧಕ ಬೆಳೆ

‘ಹಳ್ಳಿಗೆ ಬರುವವರು ಮೊದಲು ಕ್ವಾರಂಟೈನ್ ಕೇಂದ್ರಕ್ಕೆ ಹೋಗಿ ನಂತರ ಮನೆ ತಲುಪಲಿ’ ಎಂದು ನಾವು ಹೇಳಬಹುದೇ ಹೊರತೂ ಅವರು ಬರಲೇಬಾರದೆಂದು ಹೇಳಲಾಗದು. ಹಳ್ಳಿ ಮನೆ ಚಿಕ್ಕದ್ದಿರಬಹುದು, ಶೌಚಾಲಯ ಹಳದಿಗೆಟ್ಟಿರಬಹುದು, ಹೊರಗಡೆ ಕೆಸರಿರಬಹುದು, ಅಡುಗೆ ಮನೆಗೆ ದೊಡ್ಡಿಯ ನೊಣ ಬರಬಹುದು, ಪೇಟೆಯಿಂದ ಬಂದ ಮಕ್ಕಳ ಭಾಷೆ ಬದಲಾಗಿರಬಹುದು, ಆಹಾರ, ನಿದ್ದೆಕ್ರಮ ವ್ಯತ್ಯಾಸವಿರಬಹುದು. ಕೃಷಿ ದುಡಿಮೆಗೆ ಯಾವ ಶಕ್ತಿ ಇದೆಯೋ ಗೊತ್ತಿಲ್ಲ. ನಗರದ ಬದುಕು ಚಿಂತಿಸುತ್ತ ಕುಳಿತರೆ ಹಳ್ಳಿಗೆ ಒಗ್ಗುವುದು ಅಸಾಧ್ಯವಾದೀತು. ದಿನವಿಡೀ ವಾಯುವಿಹಾರ, ಹರಟೆಕಟ್ಟೆ, ನೆಟ್‌ವರ್ಕ್ ಹುಡುಕಾಟ, ಮೊಬೈಲ್ ಮಾತುಕತೆಗಳು ಅನಿವಾರ್ಯವಲ್ಲ. ಬಂದವರು ಹಾಗೂ ಊರಲ್ಲಿ ಇದ್ದವರು ವಾಸ್ತವ ಅರ್ಥಮಾಡಿಕೊಳ್ಳಬೇಕು. ಇಡೀ ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಕಣ್ಣೆದುರೇ ಜೀವಗಳನ್ನು ಬಲಿಪಡೆಯುತ್ತಿದೆ. ಹೇಗೋ ಜೀವ ಬಚಾವು ಮಾಡಿಕೊಂಡು ಮನೆಮಕ್ಕಳು ಸುರಕ್ಷಿತ ವಾಪಸ್ಸಾಗಿದ್ದಾರೆ. ತಿಂಗಳಿಗೆ ಐವತ್ತು ಸಾವಿರ ದುಡಿಮೆಯಿದ್ದವರಿಗೆ ಈಗ ಏನೂ ಇಲ್ಲವೆಂದು ಮತ್ತದೇ ಮಾತು ಅಗತ್ಯವಿಲ್ಲ.

ಸಣ್ಣಪುಟ್ಟ ಕೆಲಸ ಮಾಡುತ್ತ ಕೃಷಿ ಜೊತೆಗಿನ ಸಹಬಾಳ್ವೆ ಕಲಿಯುವುದು ಎಲ್ಲರಿಗೂ ಅನಿವಾರ್ಯ. ಕೃಷಿ ಭವಿಷ್ಯದ ಕಲ್ಪನೆ, ಭೂಮಿಗೊಂದು ಯೋಜನೆ, ಜಲಸಂರಕ್ಷಣೆ, ಮರ ಅಭಿವೃದ್ಧಿ, ಬದು ನಿರ್ಮಾಣ, ಮಣ್ಣು ಸಂರಕ್ಷಣೆ, ಹೀಗೆ ಹತ್ತಾರು ದಿಕ್ಕಿನಲ್ಲಿ ಕೆಲಸ ನಿರ್ವಹಿಸುತ್ತ ದುಡಿಮೆಗೆ ಹೊಸ ಶಿಸ್ತು ಬರಬೇಕು. ಕಣ್ಣಳತೆಯ ದೂರಕ್ಕೂ ವ್ಯಾಪಿಸಿದ ಬೀದರ್‌ನ ಅರಿಶಿನ, ಹುಮನಾಬಾದ್‌ನ ಶುಂಠಿ, ಮಲೆನಾಡಿನ ಕಾಳುಮೆಣಸು, ದಾಲ್ಚಿನ್ನಿ, ತುಳಸಿ, ಬಾಳೆ, ದಾಳಿಂಬೆ, ಪೇರಲೆ, ಪಪ್ಪಾಯ, ನೇರಳೆ, ಮುಂತಾಗಿ ವಿಶಾಲ ರಾಜ್ಯದಲ್ಲಿ ಪರಿಸರಕ್ಕೆ ತಕ್ಕುದಾದ ಎಷ್ಟೊಂದು ಹಣ್ಣುಹಂಪಲು ಬೆಳೆಗಳಿವೆ. ಇವುಗಳಿಗೆ ಇಡೀ ಜಗತ್ತಿನ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತಾಕತ್ತಿದೆಯಲ್ಲವೇ? ಆಹಾರ, ಆರೋಗ್ಯ ಕ್ಷೇತ್ರಗಳಿಗೆ ಇನ್ನಿಲ್ಲದ ಮಹತ್ವ ಬಂದಿದೆ. ರೋಗಭಯದಿಂದ ಗ್ರಾಮಕ್ಕೆ ಮರಳಿದವರು ರೋಗಕ್ಕೆ ಮದ್ದರೆಯುವ ಬೆಳೆ, ಮೌಲ್ಯವರ್ಧನೆಯಲ್ಲಿ ಗೆಲ್ಲಬಹುದೇ? ಯೋಚಿಸಬೇಕಿದೆ.

ನಗರದಲ್ಲಿ ಇಷ್ಟುಕಾಲ ಜೀವನ ಕಳೆದು ಹಲವು ಸಂಗತಿ ಕಲಿತಿರಬಹುದು. ಮಂಗಳೂರು ಸ್ಟೋರಿನಲ್ಲಿ ಏನೆಲ್ಲ ಬೆಳೆಗೆ ಯಾವ ದರವಿದೆ? ಮಾಲ್‌ಗಳ ಬೇಡಿಕೆ ಗೊತ್ತಿರಬಹುದು. ಬೆಲೆ ಕುಸಿತವಾದ ಅಕ್ಕಿಯಿಂದ ಬಹುಬೇಡಿಕೆಯ ರುಚಿರುಚಿಯ ರೊಟ್ಟಿ, ಚಕ್ಕುಲಿಯಾಗುವುದು ತಿಳಿದಿದೆಯಲ್ಲವೇ?. ಸೊಪ್ಪು, ತರಕಾರಿ, ಕಾಡಿನ ಮೂಲಿಕೆಗಳ ಜಾಗತಿಕ ನೋಟವನ್ನು ಕೈಯೊಳಗಿನ ಮೊಬೈಲ್‌ನಲ್ಲಿ ನೋಡುವ ತಾಂತ್ರಿಕ ಕಣ್ಣು ಕೆಲವರಿಗಾದರೂ ಇದೆ. ಸಂಪರ್ಕ ಮಾಧ್ಯಮದ ಕೌಶಲ್ಯದಿಂದ ಮಾರುಕಟ್ಟೆ ವಿಸ್ತರಿಸಿ ಹಳ್ಳಿ ಬೆಳೆಗೆ ಒಂದಿಷ್ಟು ಕಾಸು ಜಾಸ್ತಿಯಾದರೂ ಅದರಲ್ಲಿ ನಿಮಗೂ ಪಾಲಿರುತ್ತದೆ. ಮೂವತ್ತು ದಿನಕ್ಕೆ ದೊರೆಯುವ ಸೊಪ್ಪಿನಿಂದ ಶುರುವಾಗಿ ಮೂರು ತಿಂಗಳಲ್ಲಿ ಫಲ ನೀಡುವ ತರಕಾರಿ ಸಂಪತ್ತಿದೆ. ಮಾರುಕಟ್ಟೆಯ ಸತ್ಯ ಅರಿತು ನಡೆಯುವುದು ಮುಖ್ಯ. ಕೃಷಿ, ಪರಿಸರ, ಆರೋಗ್ಯ, ಗ್ರಾಮೀಣಾಭಿವೃದ್ಧಿಯ ಮಜಲಿನಲ್ಲಿ ಯಾವ ಹಂತದಲ್ಲಿ ಯಾರೆಲ್ಲ ಸೇರಿ ಅನುಭವ ಪಡೆಯುತ್ತ ಕೆಲಸ ಮಾಡುತ್ತಾರೆಂಬುದು ಮುಖ್ಯ. ಒಂದು ಮಾತು ನೆನಪಿಡಬೇಕು. ಈಗ ಹಳ್ಳಿಗೆ ಮರಳಿದವರು ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ದೊಡ್ಡ ಪ್ರಮಾಣದಲ್ಲಿ ನಗರಕ್ಕೆ ಮರಳುವುದು ಸಹಜ. ಈಗಾಗಲೇ ನಗರದ ಜಾಲದಲ್ಲಿ ಸಿಲುಕಿದವರಲ್ಲಿ ಖಚಿತವಾಗಿ ಮರಳಿ ಮಣ್ಣಿನಲ್ಲಿ ಉಳಿಯುವವರು ಶೇಕಡಾ 20ಕ್ಕಿಂತ ಜಾಸ್ತಿಯಾಗಲಿಕ್ಕಿಲ್ಲ. ಇಷ್ಟಾದರೂ ಬಹುದೊಡ್ಡ ಬದಲಾವಣೆಯೇ! ಒಟ್ಟಿನಲ್ಲಿ ಹಳ್ಳಿಯಲ್ಲಿರುವರು ಮಾನಸಿಕವಾಗಿ, ದೈಹಿಕವಾಗಿ ಹಳ್ಳಿಯ ಜೀವಭಾಗವಾಗುವುದು ಮುಖ್ಯ.

ಕನಕಪ್ಪನ ಕುಶಲತೆಯಲ್ಲಿ ತಯಾರಾದ ಹಗ್ಗ.

ಒಂದೇ ಕೆಲಸಕ್ಕಿಂತ, ಹಲವು ಕೌಶಲ್ಯ ಕಲಿಯಿರಿ

ಗದಗದ ಶಿರಹಟ್ಟಿಗೆ ಲಕ್ಷ್ಮೇಶ್ವರ ಪೇಟೆಯಿಂದ ಒಮ್ಮೆ ತಮ್ಮ ಹರುಕು ಮುರುಕು ಎಮ್–80 ವಾಹನದಲ್ಲಿ ನಾಲ್ಕು ಜನರನ್ನು ತುಂಬಿಕೊಂಡು ಕನಕಪ್ಪ ಕಂಚಿಕೊರವರ್ ಬಂದಿದ್ದರು. ಅವರ ಜೊತೆ ಕೈಯಲ್ಲಿ ಹಗ್ಗ ಮಾಡುವ ಸುಲಭ ಸಲಕರಣೆಯಿತ್ತು. ಕನಕಪ್ಪ ಬಂದ ಸುದ್ದಿ ಕೇಳಿ ಊರಿನ ರಸ್ತೆಯಲ್ಲಿ ನಾರಿಮಣಿಯರ ಹಳೆಯ ಬಣ್ಣಬಣ್ಣದ ಸೀರೆಗಳೆಲ್ಲ ರಾಶಿ ಬಿದ್ದವು. ಸೀರೆ ಹೋಗಿ ಹಗ್ಗವಾಯ್ತು! ಊರಿಗೆ ಊರೇ ರೂಪಾಂತರ ದೃಶ್ಯ ನೋಡುವುದರಲ್ಲಿ ತಲ್ಲೀನವಾಯಿತು.

ಪರ‍್ರರ‍್ರನೇ ಉದ್ದಕ್ಕೆ ಸಿಗಿದು ಕ್ಷಣಾರ್ಧದಲ್ಲಿ ಹೊಸೆದು ನಾರುಮಿಣಿ, ಹಗ್ಗ, ದಾಬುಗಳಾಗಿ ಸೀರೆಗಳು ಬದಲಾದವು; ದೈತ್ಯ ಕುಲದೆತ್ತು ಹಿಡಿದು ನಿಲ್ಲಿಸುವ ಸೂತ್ರಗಳಾದವು. ಕಡಕ್ ಮುರಿಯ ಬಣ್ಣ ಬಣ್ಣದ ಹಗ್ಗ ಮುಟ್ಟಿ ಮುಟ್ಟಿ ಎಲ್ಲರೂ ಮೆಚ್ಚಿ ಮಾತಾಡುತ್ತಿದ್ದರು. ಹಳೆಯ ನೈಲಾನ್ ಸೀರೆಗಳು ಹೊಸ ಉಪಯೋಗಕ್ಕೆ ಬಂದ ವಾರ್ತೆ ಹಂಚಿದರು. ಎತ್ತಿಗೆ ನೀರು ಕುಡಿಸಲು ಕೆರೆಗೆ ಹೊರಟವರು, ಚಕ್ಕಡಿಯಲ್ಲಿ ಕೃಷಿ ಉತ್ಪನ್ನ ಸಾಗಿಸುತ್ತಿದ್ದವರು, ಹತ್ತಿ ಅಂಡಿಗೆಗಳನ್ನು ಟ್ರ್ಯಾಕ್ಟರ್‌ಗೆ ಲೋಡು ಮಾಡುತ್ತಿದ್ದವರು ತಮ್ಮ ಅಗತ್ಯದ ಹಗ್ಗಗಳನ್ನು ಹಳೆ ಸೀರೆಯಿಂದ ಮಾಡಿಸುವ ಕನಸು ಕಂಡರು. ಹಿಡಿದ ಕೆಲಸ ಬದಿಗಿಟ್ಟು ಹೆಂಡತಿಯ ಹಳೆ ಸೀರೆ ಹುಡುಕಲು ಹೊರಟರು.

ಊರಿನ ಕೃಷಿಕರಿಗೆಲ್ಲ ಉಪಕಾರಿಯಂತೆ ಪ್ರತ್ಯಕ್ಷವಾದ ಕನಕಪ್ಪ ಶಾಲೆ ಓದಿದವರಲ್ಲ; ಕತ್ತಾಳೆ ನಾರಿನಲ್ಲಿ ಹಗ್ಗ ಹೊಸೆಯುತ್ತಿದ್ದ ಕುಲಕಸುಬು ನಂಬಿದವರು. ಹಳ್ಳಿಗಳಲ್ಲಿ ಜನ ಯಾವತ್ತೂ ಒಂದೇ ಕೆಲಸ ನಂಬಿ ಬದುಕುವುದಿಲ್ಲ, ಜೀವನಕ್ಕೆ ಹಲವು ಕಸುಬು ಕಲಿತಿರುತ್ತಾರೆ. ಒಂದಿಷ್ಟು ಕಾಲ ಹಣ್ಣು ಮಾರುತ್ತಿದ್ದ ಕನಕಪ್ಪ ಕೆಲವು ದಿನ ಮಾರುಕಟ್ಟೆಯಲ್ಲಿ ಹೂವು ಹಿಡಿದು ನಿಲ್ಲುತ್ತಿದ್ದರು. ಈಗ ಹಳೆಯ ಯಂತ್ರದ ದೂಳು ಕೊಡವಿ ಹಗ್ಗ ಹೊಸೆಯಲು ಬಂದರು. ಕಟಿಪಿಟಿಯಲ್ಲಿ ಹಗ್ಗ ಹೊಸೆಯುವ ಇವರು ದಿನಕ್ಕೆ ನೂರು ಹಗ್ಗ ಹೊಸೆದರು, ಸಾವಿರ ಸಂಪಾದನೆ ಸಾಧ್ಯವಾಯಿತು. ಪೇಟೆಗಳಲ್ಲಿ ಟ್ರ್ಯಾಕ್ಟರ್ ಬಳಕೆಗೆ 500–600 ರೂಪಾಯಿಗೆ ನೈಲಾನ್ ಹಗ್ಗ ದೊರೆಯುತ್ತದೆ. ಇಲ್ಲಿ ಕೇವಲ 180 ರೂಪಾಯಿಗೆ ಉತ್ತಮ ಗುಣಮಟ್ಟದ ಹಗ್ಗ ಮಾಡಿಸಿದರು. ನಾವು ಯಾವತ್ತೂ ಒಂದೇ ಕೆಲಸ ನಂಬಿದರೆ, ಆ ಕೆಲಸ ಸಿಗದಿದ್ದರೆ ನಿರುದ್ಯೋಗಿಗಳಾಗುತ್ತೇವೆ. ಶಾಲೆಯ ಪ್ರಮಾಣ ಪತ್ರಕ್ಕಿಂತ ಬದುಕುವ ಕೌಶಲ್ಯ ಬಲ್ಲ ಕನಕಪ್ಪನಂತಿದ್ದರೆ ಬಹಳ ಚೆನ್ನ!

ಗ್ರಾಮಮುಖಿಗಳಿಗೆ ಒಂದಿಷ್ಟು ಸಲಹೆಗಳು

* ನೆಟ್‌ಗಾಗಿ ಕೊರಗಬೇಡಿ, ನೆಲ ನೋಡಲು ಮರೆಯಬೇಡಿ!

* ಎಷ್ಟು ದಿನ ಹಳ್ಳಿಯಲ್ಲಿರುತ್ತೀರಿ? ಇಲ್ಲೇನು ಮಾಡಬಹುದು? ಯೋಚಿಸಿರಿ. ಹಳ್ಳಿಯಲ್ಲೇ ಕಾಯಂ ಇರುವುದಾದರೆ ಕುಟುಂಬ, ಮಕ್ಕಳ ಜೊತೆಗೆ ಮಾತಾಡಿ ಸರಿಯಾಗಿ ನಿರ್ಧರಿಸಿರಿ. ಅರೆಮನಸ್ಸು ಒಳ್ಳೆಯದಲ್ಲ.

* ನಗರಗಳಲ್ಲಿ ದುಡಿಯುತ್ತಿದ್ದಷ್ಟು ಹಣ ಇಲ್ಲಿ ದೊರೆಯುವುದಿಲ್ಲ. ಸರಳ ಜೀವನದಲ್ಲಿ ಊಟಕ್ಕೆ ತೊಂದರೆಯಿಲ್ಲ. ಮನೆಬಾಡಿಗೆ, ವಾಹನಖರ್ಚು ಇಲ್ಲ. ಬೇಸಾಯ ಕ್ರಮದಲ್ಲಿ ಸುಧಾರಣೆ, ಸಣ್ಣಪುಟ್ಟ ಉದ್ಯಮ, ಕೃಷಿ ಬೆಳೆಯ ಮೌಲ್ಯವರ್ಧನೆಯ ಮೂಲಕ ಸರಳ ಬದುಕಿನ ದಾರಿ ಹುಡುಕಬಹುದು.

* ಗ್ರಾಮಕ್ಕೆ ಮರಳಿದವರಲ್ಲಿ 45–50 ವರ್ಷವಾದವರು ಜಾಸ್ತಿ. ಕೆಲಸದ ಉತ್ಸಾಹಕ್ಕಿಂತ ಈ ವಯಸ್ಸಿನಲ್ಲಿ ಭವಿಷ್ಯದ ಚಿಂತೆ ಕಾಡುತ್ತದೆ. ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯದ ಪ್ರಶ್ನೆಗಳು ಮುಂದೆ ಬರುತ್ತವೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು ನೆನಪಿಟ್ಟು ನಡೆದರೆ ಬದುಕು ಸಾಗಿಸಬಹುದು. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಸಾಧಕರ ಜೀವನಕ್ರಮಗಳು ಮಕ್ಕಳಿಗೆ ಪ್ರೇರಣೆಯಾಗಬಹುದು.

* ನಗರ ದುಡಿಮೆಯ ಗಳಿಕೆಯ ಒಂದಿಷ್ಟು ಹಣ ಇರಬಹುದು. ಜಮೀನು ಖರೀದಿ, ಕೃಷಿ ಸುಧಾರಣೆ ಎನ್ನುತ್ತ ಒಮ್ಮೆಗೆ ನುಗ್ಗಬೇಡಿ. ಭೂಮಿ ಖರೀದಿಗೆ ರಿಯಲ್ ಎಸ್ಟೇಟ್ ಬಲೆಗೆ ಬಿದ್ದು ಸರಿಯಾದ ಭೂದಾಖಲೆಯಿಲ್ಲದೇ ಮೋಸವಾಗಬಹುದು. ಉದ್ಯಮದ ವಿಚಾರದಲ್ಲಿ ಯಾರದೋ ಸಲಹೆ ನಂಬಿ ಹಣತೊಡಗಿಸುವ ಮುನ್ನ ಹಲವು ಸಾರಿ ಯೋಚಿಸಬೇಕು.

* ‘ಅಣಬೆ ಬೆಳೆಯಿರಿ ಲಾಭ ಗಳಿಸಿರಿ’ ಎಂಬ ಜಾಹೀರಾತು ಹಲವು ವರ್ಷಗಳಿಂದ ನೋಡಿರಬಹುದು. ಸಾವಯವ ಕೃಷಿ ಮಾಡುತ್ತೇನೆ, ತರಕಾರಿ ಬೆಳೆಯುತ್ತೇನೆ, ಬೀಜೋತ್ಪಾದನೆ ಮಾಡುತ್ತೇನೆ, ನಾಟಿ ಹಸು ಸಾಕಿ ಗಂಜಲ, ಗೋ ಉತ್ಪನ್ನ ತಯಾರಿಸುತ್ತೇನೆಂದು ಹೇಳುತ್ತಿರುವ ಹಲವರಿದ್ದಾರೆ. ಆದರ್ಶಕ್ಕಿಂತ ಮುಖ್ಯವಾಗಿ ಕುಟುಂಬ ನಿರ್ವಹಣೆಗೆ ಆದಾಯಬೇಕು. ಯಾವುದೇ ಕೆಲಸ ಶುರುವಿಗೆ ಮುನ್ನ ಕ್ಷೇತ್ರ ಪರಿಣಿತರ ಜೊತೆ ಚರ್ಚೆ ನಡೆಸಿ ನಿಮ್ಮ ಸಾಮರ್ಥ್ಯ ಅರಿತು ಎಚ್ಚರದಲ್ಲಿ ಹೆಜ್ಜೆಯಿಡಬೇಕು.

* ಬಿಸಿಲಲ್ಲಿ ಬೆವರಿಳಿಸಿ ದುಡಿಯಲು ಸಾಧ್ಯವಿಲ್ಲ, ದೈಹಿಕಶ್ರಮ ಅನುಭವವಿಲ್ಲದವರು ಮೌಲ್ಯವರ್ಧನೆ, ಮಾರುಕಟ್ಟೆಯ ಯಂತ್ರ-ತಂತ್ರಜ್ಞಾನದ ಮೂಲಕ ಉದ್ಯೋಗ ಸಾಧ್ಯತೆ ಹುಡುಕಬಹುದು.

* ಊರಿನ ಮೂಲ ಕುಟುಂಬದ ಜಮೀನು, ಆಸ್ತಿ ಸಮಸ್ಯೆ ಶುರುವಾದ ತಕ್ಷಣ ವಕೀಲರು, ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವುದು ಹಲವರ ಅಭ್ಯಾಸ. ಒಮ್ಮೆ ಕಾನೂನು ಸಮರದ ಸುಳಿಯಲ್ಲಿ ಸಿಲುಕಿದರೆ ಅದಕ್ಕೆ ಅಂತ್ಯವಿಲ್ಲ. ಹೀಗಾಗಿ ಸಮನ್ವಯದ ಸೂತ್ರ ಹುಡುಕಬೇಕು.

* ಬೆಳಿಗ್ಗೆ ಹತ್ತರಿಂದ ಸಂಜೆ ಐದರವರೆಗೆ ನಿರಂತರ ದುಡಿಮೆಯ ದಿನಚರಿಯಲ್ಲಿ ಬದುಕಿದ ನಗರದವರಿಗೆ ಹಳ್ಳಿಯ ಜನ ದಿನವಿಡೀ ಕೆಲಸ ಮಾಡುತ್ತಿಲ್ಲವೆನಿಸಬಹುದು. ಹುಡುಕಿ ಹೋದರೆ ಒಂದಿಲ್ಲೊಂದು ಕೆಲಸ ಇದ್ದೇ ಇರುತ್ತದೆ. ಹಳ್ಳಿಯ ವ್ಯವಸ್ಥೆಯಲ್ಲಿ ಹರಟೆಕಟ್ಟೆಯೂ ಒಂದು ಭಾಗ! ಆದರೆ ಮುಂಜಾನೆ ಬೇಗ ಏಳುವುದು, ನಿಶ್ಚಿತ ಕೆಲಸ ನಿರ್ವಹಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಭೂಮಿಯಲ್ಲಿ ಉಳಿಯಬೇಕು, ಆಗ ನಿಮ್ಮಿಂದ ಹಳ್ಳಿಗರ ದಿನಚರಿಯೂ ಬದಲಾದೀತು.

* ಅಕ್ಕಪಕ್ಕದವರ ಚಾಡಿಮಾತು ಮೇಲ್ನೋಟಕ್ಕೆ ಆಪ್ತಸಲಹೆಯಂತೆ ಕಾಣಿಸಬಹುದು. ಹಿಸ್ಸೆ ಪಡೆದು ಹೊಸ ಭೂಮಿ ಖರೀದಿಯ ಕನಸೂ ಹುಟ್ಟಬಹುದು. ಅವಸರದ ನಿರ್ಧಾರ ನಿಮ್ಮ ಭವಿಷ್ಯ ಹಾಳು ಮಾಡೀತು. ಕುಟುಂಬದ ಜೊತೆ ಚೆನ್ನಾಗಿರಲು ಮೊದಲು ಕಲಿಯಬೇಕು. ನಿಮ್ಮ ಕುಟುಂಬಸ್ಥರು ಇಲ್ಲದಿದ್ದರೆ ನೀವು ಈಗ ಹಳ್ಳಿಗೆ ಬರುತ್ತಿರಲಿಲ್ಲವೆಂಬ ಎಚ್ಚರ ಬೇಕು. ಇಷ್ಟು ವರ್ಷ ಕೃಷಿ ಭೂಮಿ ನಿರ್ವಹಣೆಯ ಅವರ ಕಾರ್ಯದ ಬಗ್ಗೆ ಗೌರವ ಬೇಕು. ಸಮಸ್ಯೆ ಎಲ್ಲೆಡೆಯೂ ಇದೆ. ಪರಸ್ಪರ ಸ್ಪಷ್ಟವಾಗಿ ನೇರ ಮಾತಾಡಿ ಪರಿಹಾರ ಹುಡುಕಬೇಕು.

* ಕೃಷಿ ಕಾಗದದ ಲೆಕ್ಕಾಚಾರವಲ್ಲ, ಇದಕ್ಕೂ ವರ್ಷದ ಫಲಿತಾಂಶಕ್ಕೂ ವ್ಯತ್ಯಾಸವಿದೆ. ಕೃಷಿಯ ನೆಲಮೂಲದ ಸಮಸ್ಯೆ ಅರಿವಾದರೆ ಇದು ಅರ್ಥವಾಗುತ್ತದೆ.

* ನರ್ಸರಿ ಮಾಡಬಹುದು, ಕಸಿಕಟ್ಟಬಹುದು, ಕೃಷಿ ಕೆಲಸಕ್ಕೆ ತಂಡ ರೂಪಿಸಬಹುದು, ಕೃಷಿ ಯಂತ್ರ ಬಳಸಿ ಜಾಬ್‌ವರ್ಕ್ ಮಾಡಬಹುದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಸಸ್ಯ ಬೆಳೆಸಬಹುದು. ಮನಸ್ಸಿದ್ದರೆ ಮಾರ್ಗವಿದೆ.

* ಪ್ರವಾಸೋದ್ಯಮ, ದೇಗುಲ ದರ್ಶನ ಎಲ್ಲೆಡೆಯೂ ಆರೋಗ್ಯ ಸುರಕ್ಷರತೆಗೆ ಮಹತ್ವ. ನಾಳೆ ಕೊರೊನಾ ಕಡಿಮೆಯಾದರೂ ಈ ಎಚ್ಚರ ಸಹಜವಾಗಿರುತ್ತದೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇಡೀ ಜಗತ್ತಿಗೆ ಅಭ್ಯಾಸವಾಗಿ ಗ್ರಾಹಕ ಬೇಡಿಕೆ ಹೆಚ್ಚಿದೆ. ಗುಣಮಟ್ಟದ ಇವುಗಳ ಉತ್ಪಾದನೆಗೆ ಹಳ್ಳಿಗಳಲ್ಲಿಯೂ ಅವಕಾಶವಿದೆ.

ಪ್ರತಿಕ್ರಿಯಿಸಿ:ಇ–ಮೇಲ್: feedback@sudha.co.in

ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆ, ನುಡಿಚಿತ್ರಗಳಿಗಾಗಿ ಪ್ರತಿವಾರ ಸುಧಾ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT