ಬೆಂಗಳೂರು: ನೀವು ಹಾದಿಯಲ್ಲಿ ಮುಳ್ಳು ಹಾಕ್ತಾ ಹೋಗಿ, ನಾವು ಪ್ರೀತಿ ಹೂವನ್ನು ನೆಡುತ್ತಾ ಹೋಗ್ತೀವಿ...ನಿಮ್ಮ ದ್ವೇಷದ ಸೂರ್ಯನ ಧಗೆಗೆ ಪ್ರೀತಿಯ ಮಳೆ ಚೆಲ್ಲಿ ಕಾಮನಬಿಲ್ಲಿನಿಂದ ಮುಚ್ಚಿ ಬಿಡ್ತೀವಿ... ಏನ್ ಬೇಕಾದರೂ ಮಾಡಿ ಸರ್, ನಮ್ಮೂರಲ್ಲಿ ಎಲ್ಲರೂ ನಮ್ಮೋರೆ...
‘ಕೋವಿಡ್ ಸಂದರ್ಭದಲ್ಲಿ ಧರ್ಮಾಂಧತೆ ಬೇಡ’ ಎಂಬ ಆಶಯದೊಂದಿಗೆ ಸಮಾನ ಮನಸ್ಕರು ಭಾನುವಾರ ಟ್ವಿಟರ್ನಲ್ಲಿ ‘ನಮ್ಮೂರ ಎಲ್ಲರೂ ನಮ್ಮೋರು’ ಹ್ಯಾಶ್ಟ್ಯಾಗ್ ಅಡಿ ನಡೆಸಿದ ‘ಪ್ರೀತಿಗಾಗಿ ಬೆಂಗಳೂರು’ ಅಭಿಯಾನದಲ್ಲಿ ಕೆಲವರು ಮಾಡಿದ ಟ್ವೀಟ್ಗಳಿವು.
‘ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಕೆಲವು ರಾಜಕಾರಣಿಗಳು ಧರ್ಮವನ್ನು ಮುಂದಿಟ್ಟು ನಮ್ಮನ್ನು ಬೇರೆ ಮಾಡಲು ಹೊರಟಿದ್ದಾರೆ. ನಾವು ಇದನ್ನು ಬಿಡುವುದಿಲ್ಲ, ನಾವೆಲ್ಲರೂ ಒಂದಾಗಿ ಕೋವಿಡ್ ಸೋಂಕನ್ನು ಎದುರಿಸುತ್ತೇವೆ ಎಂದು ತೋರಿಸೋಣ’ ಎಂಬ ಗುರಿಯೊಂದಿಗೆ ನಡೆದ ಈ ಅಭಿಯಾನದಲ್ಲಿ ಕಾರ್ಮಿಕ ಸಂಫಟನೆಗಳು, ಕಲಾವಿದರು,ವಕೀಲರು, ಯುವತಿ-ಯುವಕರು, ವಿಜ್ಞಾನಿಗಳು, ಮಹಿಳಾ ಹೋರಾಟಗಾರರು ಸೇರಿದಂತೆ ಸಾವಿರಾರು ಜನ ಟ್ವೀಟ್ ಮಾಡಿದರು.
ಕೋವಿಡ್ ಬಿಕ್ಕಟ್ಟಿನ ಈ ಕಷ್ಟ ಕಾಲದಲ್ಲಿ, ಹಾಸಿಗೆ, ಆಮ್ಲಜನಕ, ಲಸಿಕೆ, ಔಷಧಿ ಇವೆಲ್ಲವನ್ನೂ ಸಮರ್ಪಕವಾಗಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಸರ್ಕಾರಕ್ಕೆ ಅನೇಕ ಸಂದೇಶಗಳನ್ನು ಜನ ನೀಡಿದರು. ತಾವು ಹೇಳಬೇಕಾದ ಸಾಲುಗಳನ್ನು ಫಲಕಗಳಲ್ಲಿ ಬರೆದುಕೊಂಡು ಕೆಲವರು ಟ್ವಿಟರ್ನಲ್ಲಿ ಪ್ರದರ್ಶಿಸಿದರೆ, ಹಾಡು, ಕವಿತೆಗಳ ಮೂಲಕ ಅನೇಕರು ಸಂದೇಶ ನೀಡಿದರು.
‘ಕೋವಿಡ್ ಕಡೆ ಗಮನ ಕೊಡಿ, ಜಾತಿ-ಧರ್ಮ ಈಗಾದರೂ ಬಿಡಿ’ ಎಂದು ಹಲವರು ಸಲಹೆ ನೀಡಿದರೆ, ‘ಯುಗಾದಿ ಬಂದಾಗ ಡಿವಿಜಿ ರೋಡು, ಕ್ರಿಸ್ಮಸ್ ಬಂದಾಗ ಬ್ರಿಗೇಡ್ ರೋಡು, ರಮ್ಜಾನ್ ಬಂದಾಗ ಮಸೀದಿ ರೋಡು, ಈ ಒಗ್ಗಟ್ಟನ್ನು ಮುರೀಬೇಡ, ಬಿಟ್ಟುಬಿಡು’ ಎಂದು ಹೇಳುವ ಮೂಲಕ ಹಲವರು ಸಾಮರಸ್ಯದ ಪಾಠ ಮಾಡಿದರು.
‘ನಿಮ್ಮ ಬದ್ಧತೆಯ ಕೊರತೆಯನು ಮುಚ್ಚಿಹಾಕಲು ಧರ್ಮಾಂಧತೆಯ ಮತ್ತೊಂದು ಸೋಂಕನ್ನು ಹರಡಬೇಡಿ’ ಎಂದು ಕೆಲವರು ಚುಚ್ಚಿದರೆ, ‘ಜನರೇ ಬದುಕುಳಿಯದಿದ್ದರೆ ಯಾವ ಜಾತಿ? ಯಾವ ಧರ್ಮ?, ಕೊಳಕು ರಾಜಕೀಯ ಪಕ್ಕಕ್ಕಿಡಿ, ಲಸಿಕೆ ಆಮ್ಲಜನಕ ತಂದುಕೊಡಿ’ ಎಂದು ಒತ್ತಾಯಿಸಿದವರು ಅನೇಕ ಮಂದಿ.
‘ಈ ನಾಡು ಸರ್ವಜನಾಂಗದ ಶಾಂತಿಯ ತೋಟ, ಬೂಟಾಟಿಕೆ ಸಾಕು ಲಸಿಕೆ ಬೇಕು’ ಎಂದು ಅನೇಕರು ರಾಜಕಾರಣಿಗಳಿಗೆ ಸಲಹೆ ನೀಡಿದರು.
ರಶ್ಮಿ ರವಿಕುಮಾರ್, ಶೃಂಗ, ನಿಧಿ, ಜಾಕೊಬ್, ಭಾವನಾ, ಭಟ್ಟಾಚಾರ್ಯ, ವಿನಯ್ ಕುಮಾರ್, ವಿನಯ್ ಶ್ರೀನಿವಾಸ್ ಸೇರಿದಂತೆ ಹಲವು ಟ್ವೀಟ್ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.