ದಿವಂಗತ ಕಲಾವಿದ ಬಿ.ಎಸ್.ಸುಕುಮಾರ್ ಆರ್ಕೆಸ್ಟ್ರಾಗಳಲ್ಲಿ ಡ್ರಮ್ಸ್ ನುಡಿಸುತ್ತಿದ್ದರು. ತಮ್ಮ ಮಗ ಕೇವಲ ಆರ್ಕೆಸ್ಟ್ರಾಗಳಿಗೆ ಸೀಮಿತವಾಗಬಾರದು, ದೊಡ್ಡ ಸಭಾಗಳಲ್ಲಿ, ದೊಡ್ಡ ಸಂಗೀತ ಕಲಾವಿದರಿಗೆ ತಾಳವಾದ್ಯ ಸಾಥಿಯಾಗಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಮಗನನ್ನು ಶಾಸ್ತ್ರೀಯ ಸಂಗೀತ, ತಾಳವಾದ್ಯ ಪಾಠಕ್ಕೆ ಸೇರಿಸಿದರು. ಆ ಮಗ ಬಹುವಾದ್ಯ ಪಾರಂಗತನಾಗುತ್ತಾರೆ. ಡ್ರಮ್ಸ್ ಜೊತೆಗೆ ತಬಲಾ, ಮೋರ್ಸಿಂಗ್, ಕಂಜೀರಾ ಮುಂತಾದ ವಾದ್ಯಗಳಲ್ಲಿ ಪರಿಣತಿ ಪಡೆಯುತ್ತಾರೆ. ಪಾಶ್ಚಾತ್ಯ, ಸಮಕಾಲೀನ ಸಂಗೀತದ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯಕ್ಕೆ ತಾಳವಾದ್ಯ ಸಾಥಿಯಾಗುತ್ತಾರೆ. 30ಕ್ಕೂ ಹೆಚ್ಚು ದೇಶಗಳಲ್ಲಿ ಮನೆಮಾತಾಗುತ್ತಾರೆ. ಆ ಕಲಾವಿದ ಯಾರೂ ಗೊತ್ತಾ? ವಿಶ್ವವಿಖ್ಯಾತ ಡ್ರಮ್ಸ್ ವಾದಕ, ಬಹುವಾದ್ಯ ಪಾರಂಗತ ವಿದ್ವಾನ್ ಅರುಣ್ ಕುಮಾರ್. 7ನೇ ವಯಸ್ಸಿನಲ್ಲಿ ಡ್ರಮ್ಸ್ ಜೊತೆಯಾದ ಅವರು ವಿಶ್ವದಾದ್ಯಂತ ಖ್ಯಾತನಾಮ ಕಲಾವಿದರುಗಳಿಗೆ ತಾಳವಾದ್ಯ ಸಾಥಿಯಾಗಿದ್ಧಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ಏಸುದಾಸ್, ಹರಿಹರನ್, ಶಂಕರ್ ಮಹದೇವನ್, ಡಾ.ಎಲ್.ಸುಬ್ರಹ್ಮಣ್ಯ, ಕದ್ರಿ ಗೋಪಾಲನಾಥ್ ಮುಂತಾದ ಕಲಾವಿದರಿಗೆ ಜೊತೆಯಾಗಿದ್ದಾರೆ. ಹಲವು ಭಾಷೆಗಳ ಸಂಗೀತ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಷ್ಠಿತ ‘ಲಯ ತರಂಗ’ ಸಂಸ್ಥೆ ಸ್ಥಾಪಕರಲ್ಲಿ ಅರುಣ್ ಕುಮಾರ್ ಕೂಡ ಒಬ್ಬರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಾದಸುಧೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಎಸ್ಪಿಬಿ–50 ಶೀರ್ಷಿಕೆಯಡಿ ವಿಶ್ವದಾದ್ಯಂತ 8 ತಿಂಗಳ ಕಾಲ ಸರಣಿ ಸಂಗೀತ ಕಾರ್ಯಕ್ರಮ ನಡೆಯಿತು. ಆ ಕಲಾವಿದರ ತಂಡದಲ್ಲಿ ಅರುಣ್ ಕುಮಾರ್ ಕೂಡ ಇದ್ದರು. ಎಸ್ಪಿಬಿ ಅವರನ್ನು ಅರುಣ್ಕುಮಾರ್ ದೇವರಂತೆ ಆರಾಧಿಸುತ್ತಾರೆ. ಎಸ್ಪಿಬಿ– ಅರುಣ್ಕುಮಾರ್ ನಡುವಿನ ಒಂದು ಹಿತಾನುಭವ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿದೆ.