ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಬಣ್ಣವೆಂಬ ಕರಿಮೋಡ: ಭಾರತದಲ್ಲಿಯೂ ಇದೆ ಕಪ್ಪು ವರ್ಣದ ಬಗ್ಗೆ ತಿರಸ್ಕಾರ

Last Updated 8 ಜೂನ್ 2020, 6:58 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ನಡೆದ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಮಹಿಳೆಯರ ಚರ್ಮದ ಬಣ್ಣದ ಬಗ್ಗೆಯೂ ಅಂತಹ ಧೋರಣೆಗಳು ನಮ್ಮ ಭಾರತದಲ್ಲಿ ಈಗಲೂ ಇರುವುದನ್ನು ನೆನಪಿಸಿಕೊಳ್ಳಬಹುದು. ಕಪ್ಪು ಮೈ ಬಣ್ಣದ ಯುವತಿಯರ ಬಗ್ಗೆ ತಿರಸ್ಕಾರ, ಅಪಹಾಸ್ಯಗಳು ಈಗಲೂ ಸಾಕಷ್ಟಿವೆ.

---

ಸುಮಾರು ಮೂರು ದಶಕಗಳ ಹಿಂದೆ ನಾವು ವಿದ್ಯಾರ್ಥಿಗಳು ಮೊದಲ ಬಾರಿಗೆ ರೈಲಿನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದೆವು. ಧಾರವಾಡದಿಂದ ದೆಹಲಿಗೆ ಹೊರಟ ರೈಲು ಪುಣೆಯಲ್ಲಿ ಒಂದೆರಡು ತಾಸುಗಳ ಕಾಲ ನಿಂತಿತ್ತು. 20 ವಿದ್ಯಾರ್ಥಿಗಳು ಇದ್ದ ನಮ್ಮ ತಂಡ ಚಹಾ, ತಿಂಡಿ ಸೇವನೆಗೆ ಹೊರಟಿತ್ತು. ಆಗ ಎಲ್ಲಿಂದಲೋ ತೂರಿ ಬಂದ ‘ಮದ್ರಾಸಿ ಆಗಯೇ’ ಎಂಬ ಕೂಗು ಇನ್ನೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಹಾಗೆ ನೋಡಿದರೆ ಪುಣೆಯೇನೂ ಕರ್ನಾಟಕದ ಗಡಿಯಿಂದ ಬಹಳ ದೂರವೇನೂ ಇಲ್ಲ. ಆದರೂ ದಕ್ಷಿಣದವರೆಲ್ಲ 'ಮದ್ರಾಸಿ' ಎಂದು ಗುರುತಿಸಲ್ಪಡಲು ಕಾರಣ ಅವರ ಬಣ್ಣದಿಂದ!

ಕಳೆದ ವಾರ ಅಮೆರಿಕದಲ್ಲಿ ನಡೆದ ಆಫ್ರಿಕಾ ಮೂಲದ ವ್ಯಕ್ತಿಯೋರ್ವನ ಹತ್ಯೆಗೆ ವಿಶ್ವದಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. 21ನೇ ಶತಮಾನದ ಈ ಆಧುನಿಕ ದಿನಗಳಲ್ಲೂ ದೇಹದ ಚರ್ಮದ ಬಣ್ಣದ ಕಾರಣದಿಂದ ಒಬ್ಬ ವ್ಯಕ್ತಿಯನ್ನು ಅಮಾನವೀಯ ವಾಗಿ ನಡೆಸಿಕೊಳ್ಳುವುದು ಖಂಡನಾರ್ಹ ಹಾಗೂ ಶಿಕ್ಷಾರ್ಹ. ಇದರಲ್ಲಿ ಎರಡನೇ ಮಾತು ಇಲ್ಲವೇ ಇಲ್ಲ.

ಈ ಹಿನ್ನೆಲೆಯಲ್ಲಿ ಮೇಲೆ ಹೇಳಿದ ಉದಾಹರಣೆಯ ಕುರಿತು ಕೆಲವು ಮಾತುಗಳು. ಇಂದು ವರ್ಣಬೇಧ ನೀತಿಯ ವಿರುದ್ಧದ ಜಗತ್ತಿನ ದನಿಗೆ ಭಾರತವೂ ದನಿಗೂಡಿಸಿರುವುದು ಸ್ವಾಗತಾರ್ಹ. ಅಲ್ಲದೇ ವಿದೇಶಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿರುವುದರಿಂದ ಅವರು ತಮ್ಮ ರಕ್ಷಣೆಗಾಗಿ ಅಲ್ಲಿ ದನಿ ಎತ್ತಿರುವುದು ಹಾಗೂ ಇಲ್ಲಿಯೂ ಅದಕ್ಕೆ ಪ್ರತಿರೋಧ ವ್ಯಕ್ತವಾಗಿರುವುದು ರಾಜತಾಂತ್ರಿಕ ನಡೆಯೂ ಹೌದು. ಇವೆಲ್ಲವನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಲೇ ಹಾಗೂ ಸ್ವಾಗತಿಸುತ್ತಲೇ ಚರ್ಮದ ಬಣ್ಣದ ಬಗೆಗೆ ಭಾರತೀಯರ ನಿಲುವುಗಳನ್ನೂ ನಾವು ಗಮನಿಸೋಣ.

ವಿದೇಶಿ ವ್ಯಾಮೋಹ ಮತ್ತು ಮದುವೆ ಮಾರುಕಟ್ಟೆ

9೦ರ ದಶಕದ ಆರಂಭದ ಕಾಲ. ಭಾರತದಲ್ಲಿ ವಿದೇಶಿ ವ್ಯಾಮೋಹ ಆರಂಭವಾಗಿ ನಂತರದ ವರ್ಷಗಳಲ್ಲಿ ತೀರಾ ಹೆಚ್ಚಾಗಿ 'ಪ್ರತಿಭಾ ಪಲಾಯನ' ಎಂಬ ಗುಲ್ಲು ಎದ್ದಿತ್ತು . ಬೆಂಗಳೂರಿನಂಥ ಶಹರಗಳ ಮೇಲ್ ಮಧ್ಯಮ ವರ್ಗದವರ ಮನೆಗಳಲ್ಲಿ ಒಬ್ಬರಾದರೂ ಅಮೆರಿಕ, ಇಂಗ್ಲೆಂಡ್‌ಗಳಿಗೆ ಕೆಲಸಕ್ಕಾಗಿ ಹೋಗುವುದು ಪ್ರತಿಷ್ಠೆಯಾಗಿತ್ತು. ಅದುವರೆಗೂ ಆಗರ್ಭ ಶ್ರೀಮಂತರಿಗೆ ಮಾತ್ರ ನಿಲುಕುತ್ತಿದ್ದ ಈ ಅವಕಾಶ ಇತರರಿಗೂ ತೆರೆದುಕೊಂಡಿತು. ಇದಕ್ಕೆ ಭಾರತದ ಅಂದಿನ ಬದಲಾದ ಆರ್ಥಿಕ ನೀತಿ, ಅದರಿಂದ ಹೆಚ್ಚಿದ ಬ್ಯಾಂಕ್ ಸೌಲಭ್ಯಗಳು, ವಿದೇಶಾಂಗ ನೀತಿ ಮೊದಲಾದ ಅನೇಕ ಕಾರಣಗಳಿದ್ದವು.

ಆದರೆ ಈ ವಿದೇಶಿ ವ್ಯಾಮೋಹ ಭಾರತದ ಮದುವೆ ಮಾರುಕಟ್ಟೆಯ ಮೇಲೆ ಗಾಢವಾದ ಪ್ರಭಾವ ಬೀರಿತು. ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿವಾಹ ಕುದುರಿಸುವ ನೋಂದಾಯಿತ ಸಂಘ-ಸಂಸ್ಥೆಗಳು ತಮ್ಮಲ್ಲಿ ವಧೂವರರ ದೊಡ್ಡ ಯಾದಿಗಳನ್ನೇ ಸಿದ್ಧಪಡಿಸಿಕೊಂಡಿದ್ದರು. ಅವುಗಳಲ್ಲಿ ಹುಡುಗಿಯ ಬಣ್ಣ, ಎತ್ತರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು ಎಂಬುದು ಗಮನಿಸತಕ್ಕ ವಿಚಾರ. ಆ ಹೊತ್ತಿಗೆ ವಿದೇಶದಲ್ಲಿ ನೌಕರಿಯಲ್ಲಿರುವ ವರನ ವರ್ಚಸ್ಸು ಅಗಾಧವಾಗಿ ಏರಿ ಅವನನ್ನು ವರಿಸಲು ಯೋಗ್ಯ ವಧುವಿನಲ್ಲಿ ಇರಬೇಕಾದ ಕನಿಷ್ಠ ಅರ್ಹತೆಗಳ ಪಟ್ಟಿಯೇ ತಯಾರಾಗಿತ್ತು. ಅದರಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದು ಆಕೆಯ ಬಿಳಿಯ ಬಣ್ಣ! ಆ ನಂತರ ಎತ್ತರ, ವಿದ್ಯಾಭ್ಯಾಸ, ಪಾಲಕರ ಆರ್ಥಿಕ ಮಟ್ಟ ಇತ್ಯಾದಿ. ಬಿಳಿಯ ಬಣ್ಣ ಒಂದು ಮುಖ್ಯ ಅರ್ಹತೆಯಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ.

ಕಪ್ಪು ಮೈಬಣ್ಣದ ಯುವತಿಯರ ಅಪಹಾಸ್ಯ

ಇದು ಸಾಮಾಜಿಕವಾಗಿ ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಿತು. ಕಪ್ಪು, ಕಂದು ಬಣ್ಣದ ಹೆಣ್ಣು ಮಕ್ಕಳನ್ನು ಹೆತ್ತ ಪಾಲಕರು ಈ ಮದುವೆ ಮಾರುಕಟ್ಟೆಯಿಂದ ದೂರ ಉಳಿಯಬೇಕಾಯಿತು. ಈ ಬಣ್ಣದ ಹೆಣ್ಣುಮಕ್ಕಳ ಆತ್ಮವಿಶ್ವಾಸವೇ ಉಡುಗಿ ಹೋಯಿತು. ಅವರು ಸಮಾಜದ, ಕುಟುಂಬದ ತಿರಸ್ಕಾರಕ್ಕೆ, ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತು. ವರದಕ್ಷಿಣೆ ಪಿಡುಗು ತೀರಾ ಹೆಚ್ಚಿತು. ಇದರಿಂದ ಹೆಣ್ಣು ಭ್ರೂಣಹತ್ಯೆ ತೀವ್ರವಾಗಿ ಏರಿತು. ಬಾಲ್ಯ ವಿವಾಹಗಳು ಹೆಚ್ಚಾದವು. ಹೆಣ್ಣು ಮದುವೆ ಮಾರುಕಟ್ಟೆಯ ಸರಕಾದಳು.

ಭಾರತದಲ್ಲಿ 1975ರ ನಂತರ ಮಹಿಳಾ ಪರ ಚಳವಳಿಯ ಕಾರಣದಿಂದ ಮಹಿಳೆಯರ ವಿದ್ಯಾಭ್ಯಾಸ ಹೆಚ್ಚಿ, ಉನ್ನತ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರ ದಾಖಲಾತಿ ಹೆಚ್ಚಾಯಿತು. ಇದು ಭಾರತೀಯ ಮಹಿಳೆಯರ ಪಾಲಿಗೆ ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕಾಲವಾಗಿತ್ತು. ಆದರೆ ಈ ಕಾಲ ಮುಂದಿನ ಎರಡು ದಶಕಗಳಲ್ಲೇ ಅವನತಿಯತ್ತ ಸಾಗಿ ಮಹಿಳೆಯರ ಜೀವನವನ್ನು ಸವಾಲಾಗಿಸಿತು. ಹೆಣ್ಣು ಹುಟ್ಟುವುದು ಪಾಪ ಎಂಬಂತಾಗಿ ಅನೇಕ ಹೆಣ್ಣು ಮಕ್ಕಳು ಆತ್ಮಹತ್ಯೆಯನ್ನೂ ಮಾಡಿಕೊಂಡರು. ಇದಕ್ಕೆ ಮುಖ್ಯ ಕಾರಣ ಮದುವೆ ಮಾರುಕಟ್ಟೆ ಎಂಬುದನ್ನು ಮರೆಯಲಾಗದು. ಮುಂದಿನ ಸುಮಾರು ಒಂದೂವರೆ ದಶಕದವರೆಗೂ ಇದು ಮುಂದುವರೆಯಿತು!

ಆರ್ಥಿಕ ಸ್ವಾವಲಂಬನೆ

21 ನೇ ಶತಮಾನದ ಆರಂಭದ ವರ್ಷಗಳು ಭಾರತದಲ್ಲಿ ಮತ್ತೆ ಮಹಿಳೆಯರ ಪಾಲಿಗೆ ವರದಾನವಾದವು. ಮಹಿಳೆಯರ ಆರ್ಥಿಕ ಸದೃಢತೆ, ಸ್ವಾವಲಂಬನೆ ಮೊದಲಾದವುಗಳಿಂದ ಎಲ್ಲ ರಂಗಗಳಲ್ಲೂ ಪುರುಷನಿಗೆ ಸಮಾನವಾಗಿ ಹೆಜ್ಜೆ ಹಾಕಿದ ಹಾಗೂ ಅದನ್ನು ಸಮಾಜವೂ ಒಪ್ಪಿಕೊಂಡ ಕಾಲಘಟ್ಟ ಇದು. ಆದರೆ ಆಕೆಯ ಉನ್ನತಿಯೇ ಆಕೆಗೆ ಮುಳುವಾಗುವ ಕಾಲ ಬಹಳ ಬೇಗ ಬಂದುಬಿಟ್ಟಿತು. ದೇಶದಾದ್ಯಂತ ಆಕೆಯ ಮೇಲೆ ನಡೆದ ಅನ್ಯಾಯ, ಅತ್ಯಾಚಾರಗಳನ್ನು ಈ ದೇಶ ಹಿಂದೆಂದೂ ಕಂಡಿರಲಿಲ್ಲ. ಇದರ ಫಲವಾಗಿ ಲಿಂಗಾನುಪಾತದಲ್ಲಿ ಗಣನೀಯ ಏರುಪೇರಾಯಿತು. ಹರಿಯಾಣ, ಪಂಜಾಬ್, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 850-90೦ರ ಒಳಗೆ ಇತ್ತು. ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಾಲ್ಯ ವಿವಾಹ ಹೆಚ್ಚಿತು. ಮತ್ತೊಮ್ಮೆ ಮಹಿಳೆಯ ಸ್ಥಾನಮಾನ ಹಿಮ್ಮುಖವಾಗಿ ಚಲಿಸಿ 19ನೇ ಶತಮಾನಕ್ಕೆ ಬಂದು ನಿಂತಿತು. ಈ ಎಲ್ಲ ಏರು ಪೇರಿನಲ್ಲಿ, ಸಂಘರ್ಷದಲ್ಲಿ ಹೆಣ್ಣಿನ ದೇಹ ಬಹು ಮುಖ್ಯ ಪಾತ್ರ ವಹಿಸಿದೆ. ಅಂದರೆ ಆಕೆಯ ದೇಹ, ಬಣ್ಣ, ಆಕಾರಗಳ ಮೂಲಕ ಆಕೆಯನ್ನು ವ್ಯಕ್ತಿತ್ವ ಶೂನ್ಯಳಾಗಿ ಮಾಡುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ಇದಕ್ಕೆ ಬಡವ- ಬಲ್ಲಿದ, ವಿದ್ಯಾವಂತ- ಅವಿದ್ಯಾವಂತ, ಹಿರಿಯ-ಕಿರಿಯ, ಉದ್ಯೋಗಿ-ನಿರುದ್ಯೋಗಿ ಮೊದಲಾದ ಯಾವ ಸೂಚಿಗಳೂ ನಿರ್ಭರವಾಗದಿದ್ದದ್ದಕ್ಕೆ ಈ ದೇಶ ಸಾಕ್ಷೀಭೂತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT