ನ್ಯೂಯಾರ್ಕ್: ‘ಭಾರತವು ಧುವ್ರೀಕರಣಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೇತುವೆಯಾಗಿದೆ. ಭದ್ರತಾ ಮಂಡಳಿಯ ಭಿನ್ನಪ್ರಾಯಗಳನ್ನು ಶಮನಗೊಳಿಸುವಲ್ಲಿ ದೇಶವು ನೆರವಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ತಿಳಿಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ತಾತ್ಕಾಲಿಕ ಸದಸ್ಯನಾಗಿ ಭಾರತ ಮೂರು ತಿಂಗಳು ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಶ್ವಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ,‘ಮಂಡಳಿಯ ಚರ್ಚೆಗಳಿಗೆ ‘ವಿಶಿಷ್ಟ ದೃಷ್ಟಿಕೋನ’ ನೀಡುವಲ್ಲಿ ಭಾರತ ನೆರವಾಗಿದೆ. ಬೇಕಾದರೆ ಇದನ್ನು ಭಾರತದ ದೃಷ್ಟಿಕೋನ ಅಂತಲೂ ಕರೆಯಬಹುದು’ ಎಂದರು.
‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಧ್ರುವೀಕರಣಕೊಂಡಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮಂಡಳಿಯಲ್ಲಿರುವ ಭಿನ್ನಭಿಪ್ರಾಯಗಳನ್ನು ಸಂಕುಚಿತಗೊಳಿಸುವಲ್ಲಿ ಭಾರತ ಸೇತುವೆಯ ಪಾತ್ರ ನಿರ್ವಹಿಸುತ್ತಿದೆ. ಭಾರತವು ಮಂಡಳಿಯ ಸದಸ್ಯರೊಂದಿಗೆ ಸೇರಿ ರಚನಾತ್ಮಕ ಕೆಲಸವನ್ನು ಮಾಡುತ್ತದೆ. ಮಂಡಳಿಯು ಕೂಡ ನಮ್ಮ ಅಭಿಪ್ರಾಯಗಳನ್ನು ಗೌರವಿಸುತ್ತದೆ’ ಎಂದು ಅವರು ಹೇಳಿದರು.
‘ಮ್ಯಾನ್ಮಾರ್ನಲ್ಲಿ ಪ್ರಜಾಪ್ರಭುತ್ವತೆ ಮರುಸ್ಥಾಪನೆ, ಅಫ್ಗಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಸಿರಿಯಾದಲ್ಲಿ ಭಯೋತ್ಪಾದನೆ ನಿಗ್ರಹದ ಕುರಿತಂತೆ ಭಧ್ರತಾ ಮಂಡಳಿಗೆ ವಿಭಿನ್ನ ದೃಷ್ಟಿಕೋನ ನೀಡಲು ಭಾರತ ನೆರವಾಗಿದೆ’ ಎಂದು ಅವರು ತಿಳಿಸಿದರು.
‘ಸಮಸ್ಯೆ ಬಗ್ಗೆ ಮೌನ ವಹಿಸುವುದಕ್ಕಿಂತ ಮಾತನಾಡುವುದೇ ಒಳಿತು. ಹಾಗಾಗಿ ಭದ್ರತಾ ಸಮಿತಿ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.