ನೈಪಿತಾವ್, ಮ್ಯಾನ್ಮಾರ್: ಭಾರತವು ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ಗೆ ಹತ್ತು ಲಕ್ಷ ಡೋಸ್ ಕೋವಿಡ್ ಲಸಿಕೆ,ಹತ್ತು ಸಾವಿರ ಟನ್ ಅಕ್ಕಿ ಮತ್ತು ಗೋಧಿಯನ್ನು ಕಳುಹಿಸಿಕೊಟ್ಟಿದೆ.
ಮ್ಯಾನ್ಮಾರ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಅವರು ಈ ವಿಷಯ ತಿಳಿಸಿದ್ದಾರೆ. ಭಾರತವು ಮಾನವೀಯ ನೆರವನ್ನು ಮುಂದುವರಿಸಿದ್ದು, ಅದರ ಭಾಗವಾಗಿ ನೆರವು ನೀಡಲಾಗಿದೆ ಎಂದಿದ್ದಾರೆ.
ಫೆಬ್ರುವರಿ 1ರಂದು ನಡೆದ ಸೇನಾ ದಂಗೆಯಲ್ಲಿಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ,ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಉನ್ನತ ಮಟ್ಟದ ನಿಯೋಗ ಮ್ಯಾನ್ಮಾರ್ಗೆ ಭೇಟಿ ನೀಡಿದೆ.
ಮ್ಯಾನ್ಮಾರ್ನ ರೆಡ್ಕ್ರಾಸ್ ಸೊಸೈಟಿಗೆ ಶ್ರಿಂಗ್ಲಾ ಅವರು ಬುಧವಾರ ಲಸಿಕೆಗಳನ್ನು ಹಸ್ತಾಂತರಿಸಿದರು.
‘ಭಾರತದೊಂದಿಗೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿರುವ ಮ್ಯಾನ್ಮಾರ್ ಜನತೆಗೆ ಮಾನವೀಯ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಮ್ಯಾನ್ಮಾರ್ ಕೋವಿಡ್ ವಿರುದ್ಧ ಹೋರಾಡುತ್ತಿರುವುದರಿಂದ ಭಾರತದಲ್ಲಿ ತಯಾರಿಸಿದ 10 ಲಕ್ಷ ಡೋಸ್ ಲಸಿಕೆಗಳನ್ನು ಅಲ್ಲಿನ ರೆಡ್ಕ್ರಾಸ್ ಸೊಸೈಟಿಗೆಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.