ಲಾಸ್ ಏಂಜಲಿಸ್: ಪತ್ನಿ ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ ಭಾರತ ಮೂಲದ ಐ.ಟಿ ಉದ್ಯೋಗಿ ಶಂಕರ ನಾಗಪ್ಪ ಹುನಗುಂದ ಅವರಿಗೆ ಅಮೆರಿಕದ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಪರೋಲ್ ಸೌಲಭ್ಯವಿಲ್ಲದೇ ಶಿಕ್ಷೆಯನ್ನು ಅನುಭವಿಸಬೇಕು ಎಂದೂ ಕೋರ್ಟ್ ಹೇಳಿದೆ. 2019ರಲ್ಲಿ ಕೃತ್ಯ ನಡೆದಿತ್ತು. ಕುಟುಂಬಕ್ಕೆ ಆರ್ಥಿಕವಾಗಿ ನೆರವು ಒದಗಿಸಲಾಗದೇ ಕ್ಯಾಲಿಫೋರ್ನಿಯಾದ ಅಪಾರ್ಟ್ಮೆಂಟ್ನಲ್ಲಿ ಈ ಕೃತ್ಯ ಎಸಗಿದ್ದೆ ಎಂದು ಅವರು ಒಪ್ಪಿಕೊಂಡಿದ್ದರು.
ಸ್ಥಳೀಯ ಕೆಸಿಆರ್ಎ–ಟಿವಿ ಈ ಕುರಿತು ವರದಿ ಮಾಡಿದ್ದು, ತೀರ್ಪು ಕುರಿತಂತೆ ಪ್ರತಿಕ್ರಿಯಿಸಲು ಆತ ನಿರಾಕರಿಸಿದರು ಎಂದು ತಿಳಿಸಿದೆ. ಹುನಗುಂದ ಅವರನ್ನು ಕ್ಯಾಲಿಫೋರ್ನಿಯದ ಮೌಂಟ್ ಶಾಸ್ತಾ ಠಾಣೆಯ ಪೊಲೀಸರು ಬಂಧಿಸಿದ್ದರು.
ಮಕ್ಕಳ ಕೊಲೆ ಕೃತ್ಯ ಆಗ ಪ್ರಮುಖವಾಗಿ ಜನರ ಗಮನಸೆಳೆದಿತ್ತು. ಆತನ ಪತ್ನಿ ಜ್ಯೋತಿ (42), ಪುತ್ರಿಯರಾದವರುಂ (20), ಗೌರಿ (16) ಶವಗಳನ್ನು ಅಪಾರ್ಟ್ಮೆಂಟ್ನಲ್ಲಿ ಹಾಗೂ ಪುತ್ರನಿಶ್ಚಲ್ (13) ಶವವನ್ನು ಹೊರಗಡೆ ನಿಲ್ಲಿಸಿದ್ದ ಕಾರಿನಲ್ಲಿ ಪೊಲೀಸರು ಗುರುತಿಸಿದ್ದರು.
ಮೊದಲು ಪತ್ನಿ, ಪುತ್ರಿಯರು ಹಾಗೂ ಮೂರು ದಿನದ ನಂತರ ಪುತ್ರನನ್ನು ಕೊಂದಿರಬಹುದು ಎಂದು ತನಿಖೆಯ ಬಳಿಕ ಪೊಲೀಸರು ತಿಳಿಸಿದ್ದರು.
‘ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದರು. ಬೇರೆಡೆ ಕೆಲಸ ಸಿಕ್ಕಿರಲಿಲ್ಲ. ಏನೂ ಇಲ್ಲದೇ ಕುಟುಂಬದ ಸದಸ್ಯರಿಗೆ ಸಮಸ್ಯೆ ಆಗಬಾರದು ಎಂದು ಭಾವಿಸಿ, ಕೃತ್ಯ ಎಸಗಿದ್ದರು’ ಎಂದು ಪ್ಲೇಸರ್ ಕೌಂಟಿಯ ಸಹಾಯಕ ಜಿಲ್ಲಾ ಅಟಾರ್ನಿ ಡೇವಿಡ್ ಟೆಲ್ಮನ್ ತಿಳಿಸಿದರು.