ಕಠ್ಮಂಡು: ನೇಪಾಳದ ವಿರೋಧ ಪಕ್ಷದ ನಾಯಕ ಶೇರ್ ಬಹದ್ದೂರ್ ದೇವುಬಾ ಅವರು ಮಂಗಳವಾರ ಕಡಿಮೆ ಸಂಖ್ಯೆಯ ಸಚಿವರನ್ನು ಒಳಗೊಂಡಂತೆ ಚಿಕ್ಕ ಗಾತ್ರದ ಸಂಪುಟ ರಚಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ನೇಪಾಳಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಅವರನ್ನು ದೇಶದ ನೂತನ ಪ್ರಧಾನಿಯಾಗಿ ನೇಮಕ ಮಾಡುವಂತೆ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರಿಗೆ ನೇಪಾಳದ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಇದರ ಬೆನ್ನಲ್ಲೇ ನೇಪಾಳಿ ಕಾಂಗ್ರೆಸ್ನ (ಎನ್ಸಿ) ನಾಯಕರಿಬ್ಬರು ಸಂಪುಟ ರಚನೆಯ ಬಗ್ಗೆ ಕಠ್ಮಂಡು ಪೋಸ್ಟ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
‘ದೇವುಬಾ ಅವರು ಮಂಗಳವಾರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏಳು ಮಂದಿ ಸದಸ್ಯರ ಸಣ್ಣ ಸಂಪುಟ ರಚಿಸುವ ಸಾಧ್ಯತೆಗಳಿವೆ’ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
‘ನಾವು ಆರಂಭದಲ್ಲಿ ಚಿಕ್ಕ ಗಾತ್ರದಸಂಪುಟ ರಚಿಸಲು ನಿರ್ಧರಿಸಿದ್ದೇವೆ’ ಎಂದು ಎನ್ಸಿಯ ಮುಖ್ಯ ಸಚೇತಕ ಬಾಲ್ ಕೃಷ್ಣ ಖಾಂಡ್ ಅವರು ಹೇಳಿದ್ದಾರೆ.
‘ನಾವು ಸಮ್ಮಿಶ್ರ ಸರ್ಕಾರ ರಚಿಸಲು ಇಚ್ಛಿಸುತ್ತೇವೆ. ಇದಕ್ಕಾಗಿ ದೇವುಬಾ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮೈತ್ರಿ ಪಕ್ಷಗಳಿಗೆ ಕೇಳಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
‘ಕಾಂಗ್ರೆಸ್ನಿಂದ ಇಬ್ಬರು ನಾಯಕರು, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳದ ಇಬ್ಬರು ಅಥವಾ ಒಬ್ಬ ನಾಯಕರನ್ನು ಸಚಿವರನ್ನಾಗಿ ನೇಮಿಸುವ ಸಾಧ್ಯತೆಗಳಿವೆ’ ಎಂದು ಎನ್ಸಿ ನಾಯಕರೊಬ್ಬರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.