ವಾಷಿಂಗ್ಟನ್: ಭಾರತದ ವೈವಿಧ್ಯತೆಯೇ ನಮ್ಮ ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಅವರು ಭಾಷಣ ಮಾಡಿದರು.
ಆಗಸ್ಟ್ 15ಕ್ಕೆ ಭಾರತವು ಸ್ವಾತಂತ್ರ್ಯೋತ್ಸವದ 75ನೇ ವರ್ಷಕ್ಕೆ ಕಾಲಿಟ್ಟಿದೆ.ವೈವಿಧ್ಯತೆಯೇ ನಮ್ಮ ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ಮೋದಿ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಭಾರತವು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 75 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಅಭಿವೃದ್ಧಿಯುಎಲ್ಲರನ್ನೂ ಒಳಗೊಂಡಿರಬೇಕು ಮತ್ತು ಸಾರ್ವತ್ರಿಕವಾಗಿ ಎಲ್ಲರನ್ನು ಪೋಷಿಸುವಂತಿರಬೇಕು. ಅಂತ್ಯೋದಯ ತತ್ವವನ್ನು ಗಮನದಲ್ಲಿಟ್ಟುಕೊಂಡು ಭಾರತವು ಇಂದು ಸಮಗ್ರ ಮತ್ತು ಸಮಾನತೆಯ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದಲ್ಲಿ ಲಸಿಕೆ ಉತ್ಪಾದಿಸಲು ವಿಶ್ವದಾದ್ಯಂತ ಇರುವ ಎಲ್ಲಾ ಲಸಿಕೆ ಉತ್ಪಾದಕರನ್ನು ನಾನು ಆಹ್ವಾನಿಸುತ್ತಿದ್ದೇನೆ. ಭಾರತವು ವಿಶ್ವದ ಮೊತ್ತ ಮೊದಲ ಡಿಎನ್ಎ ಆಧಾರಿತ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದಾಗಿ ಈ ಮೂಲಕ ವಿಶ್ವಕ್ಕೆ ತಿಳಿಸಲು ಬಯಸುತ್ತೇನೆ. ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಬಹುದಾಗಿದೆ. ಮೂಗಿನ ಮೂಲಕ ನೀಡಬಹುದಾದ ಲಸಿಕೆಯೂ ಅಭಿವೃದ್ಧಿ ಹಂತದಲ್ಲಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ ಬೆಳವಣಿಗೆಯಾದಾಗ ಜಗತ್ತು ಬೆಳೆಯುತ್ತದೆ. ಭಾರತ ಸುಧಾರಣೆಯಾದಾಗ ಜಗತ್ತೂ ಬದಲಾಗುತ್ತದೆ.ನಮ್ಮದೇ ಆದ ಹಾದಿಯಲ್ಲಿ ನಾವು ದೃಢವಾಗಿ, ಧೈರ್ಯದಿಂದ ಮುನ್ನಡೆಯಬೇಕು. ಆಗ ಕಷ್ಟಗಳು ದೂರವಾಗುತ್ತವೆ ಎಂದು ರವೀಂದ್ರನಾಥ ಟ್ಯಾಗೋರರು ಹೇಳಿದ್ದರು. ಅವರ ಮಾತಿನಂತೆ ನಾವು ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಕೋಟ್ಯಂತರ ನಿರಾಶ್ರತರನ್ನು ಮನೆ ಮಾಲೀಕರನ್ನಾಗುವಂತೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.
ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದನೆ ಹರಡಲು ಮತ್ತು ಉಗ್ರ ಚಟುವಟಿಕೆಗಳಿಗೆ ಬಳಸದಂತೆ ಖಾತರಿಪಡಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯವಾಗಿದೆ.ತೀವ್ರವಾದಿ ಚಿಂತನೆ ಮತ್ತು ಉಗ್ರವಾದದ ಅಪಾಯವು ಪ್ರಪಂಚಕ್ಕೆ ಹೆಚ್ಚಾಗಿದೆಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ನಮ್ಮ ಸಾಗರಗಳು ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿನ ಜೀವನಾಡಿಯಾಗಿವೆ. ಅವುಗಳನ್ನು ರಕ್ಷಿಸಬೇಕಿದೆ. ನಿಯಮಾಧಾರಿತ ಜಗತ್ತನ್ನು ರೂಪಿಸಲು ಅಂತರರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ಮಾತನಾಡಬೇಕು ಎಂದು ಮೋದಿ ಹೇಳಿದ್ದಾರೆ.
ನಮ್ಮೆಲ್ಲರ ಪ್ರಯತ್ನದಿಂದಾಗಿ ನಾವು ಜಗತ್ತನ್ನು ಪ್ರತಿಯೊಬ್ಬರಿಗೂ ಇನ್ನಷ್ಟು ಉತ್ತಮ ತಾಣವನ್ನಾಗಿ ಮಾಡಬಹುದು.ವಿಶ್ವಸಂಸ್ಥೆಯು ಪ್ರಸ್ತುತತೆಯನ್ನು ಉಳಿಸಿಕೊಳ್ಳಬೇಕಾದರೆ, ಅದು ಅದರ ಪರಿಣಾಮಕಾರಿತ್ವವನ್ನು ಸುಧಾರಿಸಬೇಕು, ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕು ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.