ವಾಷಿಂಗ್ಟನ್: ‘ಚಹಾ ಮಾರಾಟ ಮಾಡಲು ತಂದೆಗೆ ನೆರವಾಗುತ್ತಿದ್ದ ಬಾಲಕನೊಬ್ಬ ಇಂದು ನಾಲ್ಕನೇ ಬಾರಿ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾತನಾಡುತ್ತಿದ್ದಾನೆ’. ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ.
ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲು ತಮ್ಮನ್ನೇ ಉದಾಹರಣೆಯಾಗಿ ಉಲ್ಲೇಖಿಸಿದರು.
‘ಪ್ರಜಾಪ್ರಭುತ್ವದ ತಾಯಿ’ ಎಂದೇ ಪರಿಗಣಿಸಲಾಗಿರುವ ಭಾರತದಿಂದ ಬಂದವನು ನಾನು. ನಮ್ಮಲ್ಲಿ ಸಾವಿರಾರು ವರ್ಷಗಳ ಹಿಂದಿನ ಪ್ರಜಾಪ್ರಭುತ್ವದ ಸಂಪ್ರದಾಯವಿದೆ. ವೈವಿಧ್ಯತೆಯೇ ಭಾರತದ ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ಮೋದಿ ಹೇಳಿದ್ದಾರೆ.