ಬಾಳೆ ಕಟಾವಾದ ಮೇಲೆ ಉಳಿಯುವ ದಿಂಡಿನಲ್ಲಿ ಪೊಟ್ಯಾಷ್ ಹೆಚ್ಚಿರುತ್ತದೆ. ಕಬ್ಬಿನ ಹಾಲು ತೆಗೆಯುವ ರೀತಿ ಬಾಳೆ ದಿಂಡಿನ ಸಾರವನ್ನೂ ತೆಗೆದು ಬಹುತೇಕ ಎಲ್ಲ ಬೆಳೆಗಳಿಗೂ ನೀಡಬಹುದು. ಹೀಗೆ ತೆಗೆದ ರಸವನ್ನು ‘ಕದಳೀ ಸಾರ’ ಎನ್ನಬಹುದು. ಎಕರೆ ಬಾಳೆ ತ್ಯಾಜ್ಯದಿಂದ (ದಿಂಡು) 4500-6000 ಲೀಟರ್ ಕದಳೀ ಸಾರ ತೆಗೆಯಬಹುದು.
ಕದಳೀ ಸಾರ ಬಳಕೆ ಹೇಗೆ?
l ಹನಿ ನೀರಾವರಿ ಮೂಲಕ (ಎಕರೆಗೆ 50-100 ಲೀಟರ್)
l ಸಿಂಪಡಣೆ (15-20 ಮಿ.ಲೀ/ಲೀ)
l ತರಕಾರಿ/ಧಾನ್ಯದ ಬೆಳೆಗಳಿಗೆ ಹೂ ಬಂದ ನಂತರ ಕೊಟ್ಟರೆ ಹೆಚ್ಚು ಪ್ರಯೋಜನ
l ಪ್ಲಾಂಟೇಶನ್ ಬೆಳೆಗಳಿಗೆ ನಿಯಮಿತವಾಗಿ ತಿಂಗಳಿಗೊಮ್ಮೆಯಾದರೂ ಕೊಡಬೇಕು
l ವೇಸ್ಟ್ ಡಿಕಂಪೋಸರ್, ಜೀವಾಮೃತ, ಪಂಚಗವ್ಯಗಳೊಂದಿಗೆ ಬೆರೆಸಿಯೂ ಕೊಡಬಹುದು.
l ಕೊಡುವ ಪ್ರಮಾಣ ಹೆಚ್ಚಾದರೂ ದುಷ್ಪರಿಣಾಮ ಇಲ್ಲ.
l ನೆನಪಿರಲಿ; ದಿಂಡಿನ ರಸ ತೆಗೆದ ನಂತರ ಅದನ್ನು ಮೂರು ದಿನಗಳೊಳಗೆ ಬಳಸಬೇಕು.
ಬಳಕೆಯಿಂದಾಗುವ ಅನುಕೂಲಗಳು
l ಪೊಟ್ಯಾಷ್, ಕಬ್ಬಿಣ ಹಾಗೂ ಕೆಲ ಬೆಳೆ ಪ್ರಚೋದಕಗಳು ಕದಳೀ ಸಾರದಲ್ಲಿವೆ.
l ಬೆಳೆಗೆ ನೀಡುವ ಪೊಟ್ಯಾಷ್ ಪ್ರಮಾಣವನ್ನು ಶೇ 20-25 ರಷ್ಟು ಕಡಿಮೆ ಮಾಡಬಹುದು.
l ರೋಗ ನಿರೋಧಕ ಶಕ್ತಿ ಸಹಜವಾಗಿ ಹೆಚ್ಚಾಗುವುದು.
l ಸಾವಯವ ಕೃಷಿಯಲ್ಲಿ ಪೊಟ್ಯಾಷ್ ಮೂಲವಾಗಿ ಬಳಸಬಹುದು.
l ಬೆಳೆಯ ಕೆಲವು ಲಘುಪೋಷಕಾಂಶಗಳ ಕೊರತೆ ನಿವಾರಣೆ ಸಾಧ್ಯ.
l ದ್ರಾವಣ ರೂಪದಲ್ಲಿರುವುದರಿಂದ ಬೆಳೆಗೆ ಸುಲಭವಾಗಿ ಪೊಟ್ಯಾಷ್ ಪೂರೈಕೆಯಾಗುವುದು.
‘ದಿಂಡಿನ ರಸ ಬಾಳ ಛಲೋ ಐತಿ, ನಾನು ನಾಲ್ಕೈದು ವರ್ಷಗಳಿಂದ ಬೆಳೆಯುವ ಎಲ್ಲಾ ಬೆಳೆಗಳಿಗೂ ಬಳಸುತ್ತಿರುವೆ, ರಿಸಲ್ಟ್ ಫಸ್ಟ್ ಕ್ಲಾಸ್’ ಎನ್ನುತ್ತಾರೆ ದಿಂಡಿನ ರಸ ಬಳಸುತ್ತಿರುವ ಹುಕ್ಕೇರಿಯ ರೈತ ಭರಮಪ್ಪ ಬಾಳೀಕಾಯಿ ಅವರು..
ಗುಜರಾತಿನ ನವಸಾರಿ ಕೃಷಿ ವಿಜ್ಞಾನ ಕೇಂದ್ರದವರು ಕದಳೀ ರಸ ಬಳಸಿ ಮಾಡಿರುವ ಮೌಲ್ಯವರ್ಧಿತ ಉತ್ಪನ್ನಕ್ಕೆ ಪೇಟೆಂಟ್ ಸಿಕ್ಕಿದೆ. ನಮಗೆ ಪೇಟೆಂಟ್ ಬೇಡ, ತ್ಯಾಜ್ಯದ ಸಮರ್ಪಕ ಬಳಕೆ, ಪೊಟ್ಯಾಷ್ ಗೊಬ್ಬರದ ಉಳಿಕೆ, ಉತ್ತಮ ಫಸಲು ಬಂದರೆ ಸಾಕಲ್ಲವೇ?
ಹೆಚ್ಚಿನ ಮಾಹಿತಿಗೆ ಬಾಳೀಕಾಯಿ (9972637269) ಅಥವಾ ಹರೀಶ್ (9480557634) ಸಂಪರ್ಕಿಸಬಹುದು.