‘ಪ್ರೇತವೃಕ್ಷ’ ಕವನದಲ್ಲಿ ಆ ಮರವನ್ನು ‘ವಿರಕ್ತ ತರುಪಿಶಾಚಿ’ ಎಂದು ಕರೆದಿದ್ದಾರೆ. ಆ ‘ಪ್ರೇತವೃಕ್ಷ’ ನಭಕ್ಕೆ ಮುಖಮಾಡಿ ‘ಪ್ರೀತಿಯ ರಸಸುಖ’ವನ್ನು ಅನಂತಶಕ್ತನಲ್ಲಿ ಪ್ರಾರ್ಥಿಸುತ್ತಿರುವಂತೆ ಬಣ್ಣಿಸಿದ್ದಾರೆ.
‘ಪ್ರೇತಹಸ್ತಗಳನು ಚಾಚಿ
ನಿನ್ನ ನಖ ಪ್ರಾರ್ಥನೆ,
ಓ ವಿರಕ್ತ ತರುಪಿಶಾಚಿ,
ಪರಚಿ ನಭೋಮುಖವನೆ
ಪರವನೇಕೆ ಕಾಡುತಿಹುದು?
ವರವನೇನು ಬೇಡುತಿಹುದು?
ಪ್ರೀತಿಯ ರಸಸುಖವನೆ?
ಹೂವತಿಥಿ
ಕೊಟಡಿಯ ಮುಂದೆಯೆ ಕೇಳಿತು ಝೇಂಕೃತಿ;
ಕಿವಿಗಿಂಪೆರೆದೆದೆ ತೆರೆವಾ ಜೇನ್ ಕೃತಿ!
ಜೇನಿಂಟುತ್ತಿವೆ ಹೂವತಿಥಿ? (ಕದರಡಕೆ)
ಕುವೆಂಪು ಅವರು ಮೈಸೂರಿನ ‘ಉದಯರವಿ’ ಮನೆಯ ಹೂತೋಟದಲ್ಲಿ ಕುಳಿತು ದುಂಬಿಗಳ ಝೇಂಕಾರವನ್ನು ಕೇಳುತ್ತ, ಅವು ಸೂರ್ಯಕಾಂತಿ ಹೂವಿನ ಮಕರಂದವನ್ನು ಹೀರುತ್ತಿರುವುದನ್ನು ಕಂಡು ಹಿಗ್ಗಿದ್ದಾರೆ. ಆ ಜೇನ್ದುಂಬಿಯನ್ನು ‘ಹೂವತಿಥಿ’ ಎಂಬ ಅನ್ವರ್ಥನಾಮಪದ ಸೃಷ್ಟಿಸಿ ಬಣ್ಣಿಸಿದ್ದಾರೆ.