ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಂತನ ದಾಹದ ಸುನೀತಗಳ ಸಾಮ್ರಾಟ ‘ಚೆನ್ನವೀರ ಕಣವಿ’

Last Updated 16 ಫೆಬ್ರುವರಿ 2022, 7:22 IST
ಅಕ್ಷರ ಗಾತ್ರ

‘ಏನಾದರೂ ಇರಲಿ ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ ಮೂಲೆಗೆ ಹೋಗಿ ಹಾಯಬಹುದು...’

ತೊಂಬತ್ನಾಲ್ಕು ವರ್ಷಗಳ ಕಾಲ ಬಾಳಿದ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಕನ್ನಡದಲ್ಲಿ ಶಬ್ದಗಳ ದೀಪ ಮಾಲೆಯನ್ನು ಹಚ್ಚುತ್ತಾ ಬಂದವರು. ನೂರು ಮಳೆಗಾಲಗಳ ಕಾಳ ಕವಿತೆಯ ಹಾಡು ಹಾಡಬೇಕಾದ ಕವಿಯ ಎದೆಯ ದೀಪ ಬುಧವಾರ ಹಾರಿಹೋಗಿದೆ. ‘ಭಾವ ಜೀವಿಯು ನಾನು, ನನ್ನೆದೆಯ ನಂಬಿರುವ ಕನಸುಗಳೇ ಕಲ್ಪವೃಕ್ಷ’ ಎಂದು ಕವಿ ಚೆನ್ನವೀರ ಕಣವಿ ಜಾರಿಹೋಗಿದ್ದಾರೆ.

ಕುವೆಂಪು, ಮಾಸ್ತಿ, ಕಾರಂತರಂತೆ ಕಣವಿ ಅವರು ದೊಡ್ಡ ಬದುಕನ್ನು ನಡೆಸಿದವರು. ಅವರಿಗೆ ಜೀವನವೇ ಕಾವ್ಯ. ಕಾವ್ಯವೇ ಜೀವನವಾಗಿತ್ತು. ಕಣವಿ ಮೊದಲು ಕವಿತಾ ಸಂಕಲನ ‘ಕಾವ್ಯಸಾಕ್ಷಿ’ಯಿಂದ ಇತ್ತೀಚಿನ ‘ಭೂಮಿ ಬದುಕು’ ಸಂಕಲನದವರೆಗೆ ಆರುನೂರು ಕವಿತೆಗಳನ್ನು ರಚಿಸಿದವರು. ಕಣವಿ ಅವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು. ಕಣವಿ ಕನ್ನಡ ಜನತೆಯ ಪ್ರೀತಿಯ ಕವಿ.

‘ಕಣವಿ ಸಮಗ್ರಕಾವ್ಯ’ ಐದು ಮುದ್ರಣಗಳನ್ನು ಕಂಡಿದೆ. ಅವರ ನಾಲ್ಕು ಭಾವಗೀತೆಗಳು ಧ್ವನಿಸುರುಳಿಗಳು ಸುಗಮ ಸಂಗೀತದ ಮೂಲಕ ರಸಿಕರನ್ನು ನಿರಂತರವಾಗಿ ಆಕರ್ಷಿಸಿವೆ. ಅವರ ‘ಹೂವು ಹೊರಳುವವು ಸೂರ್ಯನ ಕಡೆಗೆ. ನಮ್ಮ ದಾರಿ ಬರಿ ಚಂದ್ರನವರೆಗೆ’ ತುಂಬಾ ಪ್ರಸಿದ್ಧವಾದ ಕವಿತೆ. ಮನುಷ್ಯ ಚಂದ್ರನತ್ತ ಪಯಣ ಬೆಳೆಸಿದರೆ ನಿಸರ್ಗ ಸ್ವಯಂಪ್ರಭೆಯ ಸೂರ್ಯನಿಗೆ ಮುಖ ಮಾಡಿದೆ. ಇಂದು ಪ್ರಪಂಚದಲ್ಲಿ ಮನುಷ್ಯ ಅಹಂಕಾರದಿಂದ ನಿಸರ್ಗದ ವಿರುದ್ಧ ಸಾಗುತ್ತಿದ್ದಾನೆ. ಪ್ರಜ್ಞಾ ಪ್ರಕಾಶದಲ್ಲಿ ನಾವು ಮುನ್ನಡೆಯುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ‘ನನ್ನ ನಂಬಿಕೆಯೊಂದು ಆಕಾಶ ನಿಜ ಆದರೆ ತಲೆಬುಡವಿಲ್ಲ. ನಾನೆಷ್ಟು ಬೆಳೆದರೂ ನನಗೆ ನಿಲುಕುವುದಿಲ್ಲ’ ಎಂಬುದು ಕಣವಿ ಕಾವ್ಯ ಜಿಜ್ಞಾಸೆಯಾಗಿದೆ.

ಕಣವಿ ‘ಚಿರಂತನ ದಾಹ’ದ ಕವಿ. ಆದ್ದರಿಂದಲೇ ‘ಜಗವ ತುಂಬಿದ ಬೆಳಕು ನಮಗೇಕೋ ಸಾಲದಿದೆ ಎನಿತು ಮಾನವನೆದೆಯ ಆಳ ಅಗಲ’ ಕಾವ್ಯ ಮಾನವತೆಯ ಬೆಳಕಿನ ಪ್ರಭೆ ಹರಡಬೇಕು ಎಂದು ಅವರು ಹೇಳಿದ್ದಾರೆ.

ಚೆನ್ನವೀರ ಕಣವಿ ಹಾಗೂ ಜಿ.ಎಸ್. ಶಿವರುದ್ರಪ್ಪ ಅವರು ಪ್ರಾಥಮಿಕ ಶಾಲೆಯ ಶಿಕ್ಷಕರ ಮಕ್ಕಳಾಗಿ ಪ್ರತಿಭೆ, ಪರಿಶ್ರಮದಿಂದ ಕನ್ನಡದ ಶ್ರೇಷ್ಠ ಕವಿ ವಿಮರ್ಶಕರಾಗಿರುವುದು ಒಂದು ವಿಸ್ಮಯವೇ ಆಗಿದೆ. ವರಕವಿ ಬೇಂದ್ರೆ ಅವರು ಗುರುತಿಸಿದಂತೆ ಚೆನ್ನ–ವೀರ, ಶಿವ–ರುದ್ರ ಹೆಸರಿನಲ್ಲಿ ಅವಿನಾಭಾವ ಸಂಬಂಧವಿದೆ. ಅವರಿಬ್ಬರನ್ನೂ ‘ಸಮನ್ವಯ’ ಕವಿಗಳೆಂದೂ ಕೆಲವರು ಕರೆದಾಗ ಕಣವಿ ಶಿವರುದ್ರಪ್ಪ ಇಬ್ಬರೂ ಅದನ್ನು ನಿರಾರಕರಿಸಿದರು. ಅವರಿಬ್ಬರದೂ ಅಪೂರ್ವ ‘ಸ್ನೇಹ ಕಾರ್ತೀಕ’. ಕಣವಿ ಅವರಿಗೆ ‘ನಿಮ್ಮ ಹಾಗೆ ನಿಮ್ಮ ಕವಿತೆ’ ಎಂದು ಶಿವರುದ್ರಪ್ಪನವರು ಕವಿತೆಯಲ್ಲಿ ಹೇಳಿದ್ದರೂ ಅವರಿಬ್ಬರ ಕಾವ್ಯದ ದಾರಿ ಬೇರೆಯಾದದ್ದು. ಜನಪರವಾದ ನಿಲುವುಗಳಿಗೆ ಸ್ಪಂದಿಸುತ್ತ ಉದಾರವಾದ ಮಾನವತಾವಾದದಲ್ಲಿ ಕಣವಿ ಅವರು ತಮ್ಮ ಕಾವ್ಯವನ್ನು ನೆಲೆಗೊಳಿಸುತ್ತಾರೆ. ಆದರೆ ದೇಶದ ಸಮಕಾಲೀನ ಸ್ಥಿತಿಯ ಬಗೆಗೆ ದಟ್ಟವಾದ ವಿಷಾದ ಶಿವರುದ್ರಪ್ಪನವರ ಕವಿತೆ ಪ್ರಕಟಿಸುತ್ತದೆ.

ಕಣವಿ ಅವರು ಕನ್ನಡ ಸಾಂಸ್ಕೃತಿಕ ಪ್ರಪಂಚದ ನಾಯಕರಾಗಿದ್ದರು. ಮೃದು ಮಾತಿನ ಸಜ್ಜನಿಕೆಯ ಕಣವಿ ಅವರು ಕರ್ನಾಟಕದ ತುಂಬಾ ಸಂಚರಿಸಿ ಸಾಹಿತ್ಯ ಪ್ರಸಾರ ಕಾರ್ಯ ನಡೆಸಿದರು. ಯುವ ಮನಸ್ಸುಗಳಿಗೆ ಕಾವ್ಯಪ್ರೀತಿಯನ್ನು ಕಲಿಸಿದರು. ಯಾರೊಡನೆಯೂ ಜಗಳವಾಡದ, ಯಾವುದೇ ವಾಗ್ವಾದದಲ್ಲಿ ಸಿಕ್ಕಿಕೊಳ್ಳದ, ತಮ್ಮ ಸಮತೋಲನವನ್ನು ಕಳೆದುಕೊಳ್ಳದ ವ್ಯಕ್ತಿತ್ವ ಅವರದ್ದಾಗಿತ್ತು. ಹಾಗೆಂದು ಅವರು ಅನ್ಯಾಯದ ವಿರುದ್ಧ ಎಂದೂ ಮೌನಿಯಾಗಿರಲಿಲ್ಲ. ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ ಚಳವಳಿ, ಕನ್ನಡಪರ ಹೋರಾಟಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು.

ಗೋಕಾಕ ಚಳವಳಿಯ ಹೋರಾಟದಲ್ಲಿ ಅವರು ಕನ್ನಡಕ್ಕಾಗಿ ಜೈಲು ವಾಸವನ್ನೂ ಅನುಭವಿಸಿದ್ದರು. ಕನ್ನಡ ಶಕ್ತಿಕೇಂದ್ರದ ಅಧ್ಯಕ್ಷರಾಗಿ, ಕೇಂದ್ರ ಕನ್ನಡ ಕ್ರಿಯಾಸಮಿತಿಯ ಮಾರ್ಗದರ್ಶಕರಾಗಿ ಭಾಷಾ ಚಳವಳಿಯಲ್ಲಿ ದುಡಿದರು. ಅವರ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ/ ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ’ ಗೀತೆ ಗೋಕಾಕ ಚಳವಳಿಯಲ್ಲಿ ರಾಜ್ಯದಾದ್ಯಂತ ಪ್ರಚಾರ ಪಡೆಯಿತು. ಕಣವಿ ಅವರು ಬರೆದ ‘ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ’ ಗೀತೆ ನನ್ನಲ್ಲಿ ರೋಮಾಂಚನವನ್ನುಂಟು ಮಾಡಿತು ಎಂದು ಕುವೆಂಪು ಅವರ ಉದ್ಘರಿಸಿದ್ದರು. ಕಣವಿ ಕಾವ್ಯದಲ್ಲಿ ಹಲವು ಕನ್ನಡ ಪರ ಗೀತೆಗಳಿವೆ.

ಚೆನ್ನವೀರ ಕಣವಿ ಅವರು ‘ಸುನೀತಗಳ ಸಾಮ್ರಾಟ' ಎಂದೇ ಪ್ರಸಿದ್ಧರು. ಹೊಸಗನ್ನಡ ಕಾವ್ಯದಲ್ಲಿ ಅವರಷ್ಟು ಸುನೀತಗಳನ್ನು ಬರೆದ ಕವಿ ಇನ್ನೊಬ್ಬರಿಲ್ಲ. ಕಳೆದ ಶತಮಾನದ ನವೋದಯ ಪ್ರಗತಿಶೀಲ, ನವ್ಯ, ನವ್ಯೋತ್ತರ ಚಳವಳಿಗಳಲ್ಲಿ ನಿರಂತರವಾಗಿ ಸುನೀತಗಳನ್ನು ಬರೆಯುತ್ತ ಬಂದ ಚೆನ್ನವೀರ ಕಣವಿ ಅವರು ತಮ್ಮ ಸುನೀತಗಳ ಮೂಲಕ ಒಂದು ಕಲಾಶಾಲೆಯನ್ನೇ ನಿರ್ಮಿಸಿದ್ದಾರೆ. ಬಳ್ಳಾರಿಯ ಲೋಹಿಯಾ ಪ್ರಕಾಶನ ಕಣವಿ ಅವರ ‘ಸುನೀತ ಸಂಪದ’ (2002) ಮೊದಲ ಆವೃತ್ತಿಯನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, 2014ರಲ್ಲಿ ದ್ವಿತೀಯ ಆವೃತ್ತಿಯನ್ನೂ ಪ್ರಕಟಿಸಿವೆ.

‘ವ್ಯಕ್ತಿ–ವ್ಯಕ್ತಿತ್ವ’ ಭಾಗದಲ್ಲಿ ಬಂದ ನೂರಕ್ಕೂ ಹೆಚ್ಚು ಸುನೀತಗಳು ಕನ್ನಡ ಸಾಹಿತ್ಯ ಪ್ರಪಂಚದ ಮಹಾ ವ್ಯಕ್ತಿಗಳ ಜೀವನ ಸಾಧನೆಯು ಕಾವ್ಯಾಭಿವ್ಯಕ್ತಿಯಾಗಿ ಹೊಮ್ಮಿರುವುದು ಬಹಳ ಮಹತ್ವದ್ದಾಗಿದೆ. ‘ನಿಸರ್ಗ ಸ್ಪಂದನ’ದಲ್ಲಿ ಸುಂದರ ಪರಿಸರ ಋತುಮಾನದ ಸೌಂದರ್ಯವನ್ನು ವರ್ಣಿಸುವ ಕವಿತೆಗಳಿವೆ. ಕನ್ನಡದ ಶ್ರೇಷ್ಠ ‘ಕವಿ ಕೃತಿ’ಗಳನ್ನು ಓದಿದಾಗ ಉಂಟಾಗುವ ಆನಂದವನ್ನು ಅವರ ‘ಕೃತಿ–ಆಕೃತಿ’ಯ ಸುನೀತಗಳು ಹೇಳುತ್ತವೆ. ‘ನಿವೇದನೆ’ ‘ಜಿಜ್ಞಾಸೆ’ಯ ಸುನೀತಗಳಲ್ಲಿಯೂ ಕಣವಿಯವರ ಸುಂದರ ಮನಸ್ಸಿನ ಅಭಿವ್ಯಕ್ತಿಯಿದೆ.

ನಿಸರ್ಗ ಪ್ರೀತಿಯನ್ನು ಕವಿ ಜೀವನದ ಅನಂತ ಪಯಣದುದ್ದಕ್ಕೂ ಕಣವಿ ಅವರು ಸ್ಥಾಯೀಭಾವವಾಗಿ ಪ್ರಕಟಿಸುತ್ತಾ ಬಂದಿದ್ದಾರೆ. ಕನ್ನಡದಲ್ಲಿ ಕುವೆಂಪು ಸೂರ್ಯೋದಯದ ಕವಿ, ಬೇಂದ್ರೆ ಶ್ರಾವಣದ ಕವಿ, ಕಣವಿ ಮಳೆಗಾಲದ ಕವಿ. ‘ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು’, ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ ಜಿನುಗಿದೆ ಸೋನೆಯು’, ‘ಧಾರವಾಡದಲ್ಲಿ ಮಳೆಗಾಲ’ ಕವಿತೆಯ ಮೋಹಕ ರೂಪಕಗಳು ಮನಸೆಳೆಯುತ್ತವೆ.

ಕಣವಿ ಅವರಿಗೆ ಹೂವುಗಳೆಂದರೆ ಪಂಚಪ್ರಾಣ. ಮನೆಯ ಹೂದೋಟದಲ್ಲಿ ಅರಳಿದ ಹೂಗಳ ಮಧ್ಯೆ ಹರ್ಷಪಡುತ್ತಿದ್ದರು. ಕಣವಿ ಅವರ ಕವಿತೆಗಳಲ್ಲಿ ವಾತ್ಸಲಭಾವವಿದೆ. ಅವರು ತಮ್ಮ ಮಗಳು ‘ರಂಜನಾ’ಳ ಕುರಿತು ಬರೆದ ಕವಿತೆಯಲ್ಲಿ ಎಲ್ಲರ ಮನೆಯ ಮಕ್ಕಳಲ್ಲೂ ಜೀವನೋತ್ಸಹವನ್ನು ಕಾಣುತ್ತಾರೆ. ಬದಲಾಗುತ್ತಿರುವ ಸಾಮಾಜಿಕ ಪರಿಸರಕ್ಕೆ ವ್ಯಗ್ರರಾಗದೆ ಹೊಸ ಪೀಳಿಗೆಯನ್ನು ಸ್ವಾಗತಿಸುವ ಜೀವನದೃಷ್ಟಿ ‘ಈಗಿನ ಮಕ್ಕಳು’ ಕವಿತೆಯಲ್ಲಿದೆ.

ಕಾಲದ ಅನನ್ಯಶೋಧ ಕಣವಿ ಅವರ ಕಾವ್ಯದ ಮುಖ್ಯ ವಸ್ತುವಾಗಿದೆ. ನಗರದ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ. ಕಣವಿ ಅವರ ‘ಕಾಲ ನಿಲ್ಲುವುದಿಲ್ಲ’, ‘ಮಧ್ಯಾಹ್ನದ ಮಜಲು’, ‘ಕಾಲಾತೀತ’ ಮೊದಲಾದ ಕವಿತೆಗಳು ಕಾಲದಂಥ ಅಮೂರ್ತ ವಸ್ತುವನ್ನು ಚಿಂತನೆಯ ನಿಕಷಕ್ಕೆ ಒಡ್ಡಿರುವುದು ಗಮನಾರ್ಹವಾಗಿದೆ.

ಚೆನ್ನವೀರ ಕಣವಿ ಅವರು ಸಮಕಾಲೀನ ವಾಸ್ತವಕ್ಕೆ, ಭಾರತದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ಶೋಷಣೆಯ ವಿರುದ್ಧ ಪ್ರತಿಭಟನೆ, ಸಾಮಾಜಿಕ ಅಸಮಾನತೆಯ ಬಗ್ಗೆ ತೀವ್ರವಾದ ಕಾಳಜಿ, ಭ್ರಷ್ಟಾಚಾರ, ಮೋಸ ವಂಚನೆಯ ವಿರುದ್ಧ ವಿಂಡಬನೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಬಂದಿದ್ದಾರೆ. ಅವರ ಕವಿತೆಗಳಲ್ಲಿ ಸ್ತ್ರೀಪರ ಕಾಳಜಿ, ಸ್ತ್ರೀ ಸಂವೇದನೆಯ ವಿಚಾರಗಳಿವೆ. ಕಣವಿಯವರ ‘ನೀಲಾಂಬಿಕೆ’ ಸ್ತ್ರೀಕೇಂದ್ರಿತ ಕವಿತೆಯಾಗಿ ಪ್ರಸಿದ್ಧವಾಗಿದೆ. ಜೀತಪದ್ಧತಿಯ ನರಕಯಾತನೆಯನ್ನು ‘ಹಂಗರಹಳ್ಳಿ’, ‘ಅಂಬೇಡಕರ’ ಕವಿತೆಯಲ್ಲಿ ದಲಿತರ ನೋವಿನ ಮಿಡಿತವನ್ನೂ ಕಣವಿ ಕವಿತೆ ಪ್ರತಿಮಿಸಿದೆ. ‘ದುಃಖದ ಕಡಲು’ ಸುನಾಮಿ ದುರಂತವನ್ನು ಕಾವ್ಯವಾಗಿಸಿದೆ.

ಕಣವಿಯವರು ಭಾರತದ ವಿವಿಧ ಭಾಷೆಗಳ ಜಾಗತಿಕ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ವಿಶ್ವಾತ್ಮಕ ಭಾವನೆಗಳಿಗೆ ಪ್ರತಿಸ್ಪಂದನ ಅವರ ಕವಿ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಮಕ್ಕಳಿಗಾಗಿಯೇ ‘ಚಿಣ್ಣರ ಲೋಕವ ತೆರೆಯೋಣ’ ಕವಿತಾ ಸಂಕಲನ ಕೊಟ್ಟಿದ್ದಾರೆ. ಕನ್ನಡದಲ್ಲಿ ಕುವೆಂಪು ರಾಮಕೃಷ್ಣ ಪರಮಹಂಸರ ಭಕ್ತಿಗೆ ತೆರೆದುಕೊಂಡರು. ಬೇಂದ್ರೆ ಮಧುರಚೆನ್ನ, ಗೋಕಾಕ ಅರವಿಂದರ ದರ್ಶನಕ್ಕೆ ಪ್ರಭಾವಿತರಾದರು. ಆದರೆ ಕಣವಿ ಅವರು ಇಹನಿಷ್ಠ ಜೀವನದ ಸಮಸ್ಯೆಗಳಿಗೆ ಸ್ಪಂದಿಸಿದರು. ಆದರೂ ಅವರ ಅನುಭಾವಿಕ ನೆಲೆಯ ಕವಿತೆಗಳು ‘ಮಾನಸಪೂಜೆ’ ಸಂಕಲನದಲ್ಲಿ ಬಂದಿವೆ. ಕಣವಿ ಅವರ ಚುಟುಕುಗಳಲ್ಲೂ ಮಿಂಚಿನ ಸ್ಪರ್ಶವಿದೆ. ‘ನಾಡಿನ ತುಂಬ ನೂರು ಜಗದ್ಗುರು/ ಇರುವುದ ಜಗವೊಂದೇ/ ಕಾಡಿನ ತುಂಬ ಬಣ್ಣದ ಹೂಗಳು/ ವಾಸನೆ ಕೆಲವೊಂದೇ; ಬತ್ತಿಹೋದ ಕೆರೆಯಲ್ಲಿ ಬಂಗಲೆಗಳು ಎದ್ದಿವೆ/ ಜಲದೇವತೆಗೆ ಎಷ್ಟೊಂದು ಗೋರಿಗಳು…’

ಚೆನ್ನವೀರ ಕಣವಿಯವರು ಶ್ರೇಷ್ಠ ಕವಿಯಾಗಿ ಖ್ಯಾತರಾದಂತೆ ಸಹೃದಯ ವಿಮರ್ಶಕರೂ ಆಗಿದ್ದರು. ಅವರು ಸಾಹಿತ್ಯ ಚಿಂತನ ‘ಕಾವ್ಯಾನುಸಂಧಾನ’, ‘ಸಮಾಹಿತ’, ‘ಸಮತೋಲನ’, ‘ಮಧುರಚೆನ್ನ’, ‘ವಚನಾಂತರಂಗ’, ‘ಸಾಹಿತ್ಯ ಸಮಾಹಿತ’, ‘ಸ್ಮೃತಿಸೌರಭ’, ‘ಅವಿನಾಭಾವ’ಗಳಲ್ಲಿ ಮಧ್ಯಕಾಲೀನ, ಆಧುನಿಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾವಿರಾರು ಪುಟಗಳ ಗದ್ಯ ಸಾಹಿತ್ಯ ವಿಮರ್ಶೆ ಕನ್ನಡಕ್ಕೆ ಕೊಟ್ಟಿದ್ದಾರೆ. ಕಣವಿ ಅವರು ‘ಶುಭನುಡಿಯೇ ಹಕ್ಕಿ’ಯಲ್ಲಿ ಹೊಸಕವಿಗಳ ಕವಿತಾ ಸಂಕಲನಗಳಿಗೆ ಮುನ್ನುಡಿ ಬರೆದು ಅವರ ಪ್ರತಿಭೆ ಅರಳುವಂತೆ ಮಾಡಿದ್ದಾರೆ.

ಚೆನ್ನವೀರ ಕಣವಿ ಅವರು ಕನ್ನಡ ನಾಡಿನಲ್ಲಿ ಕಾವ್ಯ ಸಂಸ್ಕೃತಿ ನಿರ್ಮಾಣ ಮಾಡಿದಂತೆ, ಪುಸ್ತಕ ಸಂಸ್ಕೃತಿಯ ಪ್ರಸಾರವನ್ನೂ ಮಾಡಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಸಾರಂಗದ ಮೊದಲ ನಿರ್ದೇಶಕರಾಗಿ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರೋಪನ್ಯಾಸ ನಡೆಸಿ ಜನಶಿಕ್ಷಣ ಕಾರ್ಯ ಮಾಡಿದರು. ಕನ್ನಡ ಅಧ್ಯಾಪಕರ ಪರಿಷತ್ತಿನ ಸಮಾವೇಶ ಮತ್ತು ಹೋರಾಟಗಳಲ್ಲಿ ಭಾಗವಹಿಸಿ ನಮಗೆ ಮಾರ್ಗದರ್ಶನ ಮಾಡಿದ್ದನ್ನು ನಾವು ಮರೆಯಲಾರೆವು. ಧಾರವಾಡದ ಸಾಹಿತ್ಯ ಸಭೆ ಸಮಾರಂಭಗಳಲ್ಲಿ ಕಣವಿ ಅವರು ನಿರಂತರವಾಗಿ ಭಾಗವಹಿಸುತ್ತಿದ್ದರು.

ಕಣವಿ ಅವರ ಬಾಳಸಂಗಾತಿ ಶಾಂತಾದೇವಿ ಕಣವಿ ಅವರು ಕನ್ನಡದ ಖ್ಯಾತ ಕಥೆಗಾರ್ತಿಯಾಗಿದ್ದರು. ಎರಡು ವರ್ಷದ ಹಿಂದೆ ಅವರು ಅಗಲಿದಾಗ ಕವಿ ಕಣವಿ ಅವರು ಅಂತರ್ಮುಖಿಯಾದರು. ಇತ್ತೀಚೆಗೆ ಕಣವಿಯವರ ಹೊಸ ಪುಸ್ತಕ ‘ಅಭಿನಂದನ’ ವಿಮರ್ಶಾಲೇಖನಗಳ ಸಂಗ್ರಹ, ಶಾಂತಾದೇವಿ ಕಣವಿ ಅವರ ಸ್ಮೃತಿ ಸಂಚಯ ‘ಸಂಜೆ ಮಲ್ಲಿಗೆ’ ಬಿಡುಗಡೆಯ ಸಮಾರಂಭ ಜರುಗಿತು. ಅದು ಕವಿ ಕಣವಿ ಅವರು ಭಾಗವಹಿಸಿದ ಕೊನೆಯ ಸಾರ್ವಜನಿಕ ಸಮಾರಂಭವಾಯಿತು. ಶಾಂತಾದೇವಿಯ 89ನೇ ಜನ್ಮದಿನದಂದು (ಜ. 12) ಅವರ ಸಮಾಧಿಗೆ ಕಣವಿ ಹೋಗಿ ಬಂದ ನಂತರ ಸಾವು ಬದುಕಿನ ನಡುವೆ ಹೋರಾಟ ನಡೆಸಿದರು. ಕಣವಿ ದಂಪತಿ ಅಗಲಿಕೆಯಿಂದ ಧಾರವಾಡ, ಕನ್ನಡ ನಾಡು ನಿಜವಾಗಿಯೂ ಆದರ್ಶ ಸಾಹಿತಿ ದಂಪತಿಯನ್ನು ಕಳೆದುಕೊಂಡು ಬಡವಾಗಿದೆ. ಅವರ ಮಕ್ಕಳಾದ ಶಿವಾನಂದ, ಚಂದ್ರಮೌಳಿ, ಪ್ರಿಯದರ್ಶಿ, ರಂಜನಾ, ಕರುಣಾ ಪ್ರಸಾದ ಪ್ರತಿಭಾವಂತರು. ಅಳಿಯ ಡಾ. ಅಶೋಕ ಗೋದಿ ಅವರು ಹೆಸರಾಂತ ವೈದ್ಯ. ಕಣವಿ ಪರಿವಾರ, ಚೆಂಬೆಳಕಿನ ನಿವಾಸ ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಕಣವಿ ಶತಮಾನದ ಶ್ರೇಷ್ಠ ಕವಿಯಾಗಿ ಆಧುನಿಕ ಕಾವ್ಯದಲ್ಲಿ ಚಿರಸ್ಮರಣೀಯರಾಗಿದ್ದಾರೆ. ಅವರ ಕವಿತೆಯ ಸಾಲು

‘ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು
ಒಂದು ಕವಿತೆಗೆ ಕೂಡ ಮನ ಕರಗಬಹುದು’

ಚೆನ್ನವೀರ ಕಣವಿ ಅವರು ನನ್ನ ಪ್ರೀತಿಯ ಕವಿ. ಕಳೆದ ಅರ್ಧ ಶತಮಾನದಿಂದ ಅವರ ಕಾವ್ಯದ ಓದು ನನ್ನ ಅರಿವಿನ ವಿಸ್ತಾರವನ್ನು ಮಾಡುತ್ತಲೇ ಬಂದಿದೆ. ನನ್ನನ್ನು ಬಹುವಾಗಿ ಪ್ರಭಾವಿಸಿದ ಚೆನ್ನವೀರ ಕಣವಿ ಅವರ ಮನೆ ಮನಗಳ ನಡುವೆ ಇರುವಂತಾದದ್ದು ನನ್ನ ಭಾಗ್ಯವೆಂದೇ ಹೇಳಬೇಕು. ಕಣವಿ ಅವರೊಂದಿಗೆ ಕರ್ನಾಟಕದ ತುಂಬ ಸಾವಿರಾರು ಸಭೆಗೆ ಹೋಗಿದ್ದೇನೆ. ಅವರ ಪ್ರೀತಿ, ಅಂತಃಕರಣ, ಕಾವ್ಯಪ್ರೀತಿ ನೋಡಿ ಬೆರಗಾಗಿದ್ದೇನೆ. ಕಣವಿ ಅವರು ಹಾಸನದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾದಾಗ ಸಿಂದಗಿಯ ನೆಲೆ ಪ್ರಕಾಶನ ಪ್ರಕಟಿಸಿದ ನನ್ನ ‘ಕವಿ ಕಣವಿ’ ಪುಸ್ತಕ ಮೂರು ಮುದ್ರಣಗಳನ್ನು ಕಂಡಿತು. ನಾನು ಸಂಪದಾದಿಸಿದ ‘ಕವಿ ಕಣವಿ ಸಂದರ್ಶನ’ ಪುಸ್ತಕವನ್ನು ಚಿಂಚಣಿಯ ಕನ್ನಡ ಜಾಗೃತಿ ಪುಸ್ತಕಮಾಲೆ ಪ್ರಕಟಿಸಿತು. ಕಣವಿಯವರಿಗೆ 75 ತುಂಬಿದಾಗ ನಮ್ಮ ಸೃಜನ ಚಿಂತನ ಬಳಗದಿಂದ ಧಾರವಾಡದಲ್ಲಿ ಕಣವಿ ಸಾಹಿತ್ಯ ವಿಚಾರಸಂಕಿರಣ ನಡೆಸಿದೆವು. ಆಗ ಡಾ. ಗುರುಲಿಂಗ ಕಾಪಸೆ ಅವರೊಂದಿಗೆ ನಾನು ಸಂಪಾದಿಸಿದ ‘ಬೆಳ್ಳಿತೇರಿನ ದಾರಿ’ ಕಣವಿ ಕಾವ್ಯಾಧ್ಯಯನ ಗ್ರಂಥ ಬಿಡುಗಡೆಯಾಯಿತು. ಕಣವಿಯವರಿಗೆ 80 ತುಂಬಿದಾಗ ಡಾ. ಕಾಪಸೆ ಅವರೊಂದಿಗೆ ಕಣವಿ ಅವರ ಕವಿತೆ: ಹೊಸ ಓದು ಕಣವಿ ಕವಿತೆಗಳ ಪ್ರಾಯೋಗಿಕ ವಿಮರ್ಶೆಯ ಬೃಹತ್ ಸಂಪುಟ ಸಂಪಾದಿಸಿದೆ. ಅದರಲ್ಲಿ 80ಕ್ಕೂ ಹೆಚ್ಚು ವಿಮರ್ಶಕರು ಕಣವಿ ಅವರ ನೂರೈದು ಕವಿತೆಗಳ ವಿಮರ್ಶೆ ಬರೆದದ್ದು ಕನ್ನಡದಲ್ಲಿ ಹೊಸ ಪ್ರಯೋಗವಾಯಿತು.

ಕಣವಿ ಅವರಿಗೆ 85 ತುಂಬಿದಾಗ ಚೆನ್ನವೀರ ಕಣವಿ ಅವರ ಆಯ್ದ ಕವಿತೆಗಳ ಅನುಸಂಧಾನ ಸಪ್ನ ಬುಕ್‌ ಹೌಸ್‌ ವತಿಯಿಂದ ಬೃಹತ್ ವಿಮರ್ಶಾ ಸಂಪುಟ ಪ್ರಕಟಗೊಂಡಿತು. ಅದನ್ನು ಡಾ. ಕಾಪಸೆ ಮತ್ತು ನಾನು ಸಂಪಾದಿಸಿದ್ದೆವು. ಕಣವಿ ಅವರಿಗೆ 90 ತುಂಬಿದಾಗ ನನ್ನ ‘ಚೆಂಬೆಳಕಿನ ಕವಿ ಚೆನ್ನವೀರ ಕಣವಿ’ ಪುಸ್ತಕವನ್ನು ಗದುಗಿನ ತೋಂಟದಾರ್ಯ ಮಠದ ಡಾ. ಎಂ.ಎಂ.ಕಲಬುರ್ಗಿ ಲಿಂಗಾಯತ ಅಧ್ಯಯನ ಸಂಸ್ಥೆ ಪ್ರಕಟಿಸಿತು. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಧಾರವಾಡದಲ್ಲಿ ಕವಿ ಸನ್ಮಾನ ಜರುಗಿಸಿದರು. ಕಣವಿಯವರಿಗೆ 91 ತುಂಬಿದಾಗ ಚೆನ್ನವೀರ ಕಣವಿ ಸಂದರ್ಶನ ಗ್ರಂಥವನ್ನು ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿತು. ಕಣವಿ ಅವರಿಗೆ ಜನ್ಮದಿನೋತ್ಸವವಾದ ಜೂನ್ 28 ಅನ್ನು ಕಳೆದ ಎರಡು ದಶಕಗಳಿಂದ ವಿಚಾರ ಸಂಕಿರಣ, ಗ್ರಂಥ ಬಿಡುಗಡೆ, ಕಾವ್ಯೋತ್ಸವಗಳ ಮೂಲಕ ವಿನೂತನವಾದ ರೀತಿಯಲ್ಲಿ ನಮ್ಮ ಸೃಜನ ಚಿಂತನ ಬಳಗ ಮೂಲಕ ನಡೆಸುತ್ತಾ ಬಂದಿದ್ದೇವೆ. ಕಣವಿಯವರಿಗೆ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭ ಧಾರವಾಡದಲ್ಲಿ ಜರುಗಿತು. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಮನು ಬಳಿಗಾರ ಅವರು ನನ್ನ ಚನ್ನವೀರ ಕಣವಿ ಪುಸ್ತಕ ಪ್ರಕಟಿಸಿದರು. ಕಣವಿಯವರು ತಮಗೆ ಬಂದ ನೃಪತುಂಗ ಪ್ರಶಸ್ತಿಯ ಅರ್ಧ ಮೊತ್ತವನ್ನು ನೆರೆಯ ಹಾವಳಿಯಿಂದ ಬಳಲಿದ ಬಡ ಸಂತ್ರಸ್ತರಿಗೆ ನೀಡಲು ಸರ್ಕಾರಕ್ಕೆ ನೀಡಿದರು. ಕರ್ನಾಟಕದ ಜನ ಕೊಟ್ಟ ಸನ್ಮಾನದ ಶಾಲುಗಳನ್ನು ಅನಾಥಾಲಯಕ್ಕೆ ಹೋಗಿ ಬಡ ಮಕ್ಕಳಿಗೆ ಹೊದಿಸಿ ಬಂದರು. ಇದು ಸಾಮಾಜಿಕ ಋಣಸಂದಾಯದ ಭಾಗ ಎಂದು ಹೇಳಿದರು.

ರಾಜ್ಯದಲ್ಲಿ ಕನ್ನಡ ಶಾಲೆಗಳ ಶೋಚನೀಯ ಪರಿಸ್ಥಿತಿಯ ಬಗೆಗೆ ಮರುಗಿದರು. ಇಂಗ್ಲಿಷ್ ಆಕ್ರಮಣ ಆದುದನ್ನು ಕೇಳಿ ಸಂಕಟ ಪಟ್ಟರು. ಗೋಕಾಕ ಚಳವಳಿ ಏಕೀಕರಣ ಚಳವಳಿ ಏಕಾಯಿತು ಎಂಬುದನ್ನು ಸರ್ಕಾರ ಮರೆಯಿತು ಎಂದು ನೋವು ಅನುಭವಿಸಿದರು.

ರಾಜ್ಯದಲ್ಲಿ ಹತ್ತನೆಯ ತರಗತಿಯವರಿಗೆ ಮಾತೃಭಾಷೆಯಾದ ಕನ್ನಡ ಪ್ರಥಮ ಭಾಷೆಯಾಗಿರಬೇಕು ಎಂದು ಅವರು ಒತ್ತಾಯಿಸಿದ್ದರು. ಕನ್ನಡ ಅಧ್ಯಾಪಕರ ನೇಮಕಾತಿ, ಕನ್ನಡ ಪುಸ್ತಕಗಳ ಸಗಟು ಖರೀದಿಗೆ ಸರ್ಕಾರಕ್ಕೆ ಸಲಹೆ ನೀಡಿದರು. ಹೊರನಾಡುಗಳಲ್ಲಿರುವ ಕನ್ನಡ ಪೀಠಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳುವಂತೆ ಧ್ವನಿ ಎತ್ತಿದರು. ಸರ್ಕಾರಕ್ಕೆ ಸಾಂಸ್ಕೃತಿಕವಾಗಿ ಮಾರ್ಗದರ್ಶನ ಮಾಡಿದ ನಾಡಿನ ಹಿರಿಯ ಚಿಂತಕರು ಅವರಾಗಿದ್ದರು.

ಕನ್ನಡ ಬದ್ಧತೆಯ ಬೋಧಕರಾಗಿದ್ದ ನಾಡಿನ ಸಾಕ್ಷಿ ಪ್ರಜ್ಞೆಯಂತೆ ಕಣವಿಯವರು ಭಾಷಣ ಮಾಡುತ್ತಿದ್ದರು. ಕವಿಗೋಷ್ಠಿಗಳಲ್ಲಿ ಅವರ ಅಧ್ಯಕ್ಷ ಭಾಷಣ ಕವಿತಾ ವಾಚನಗಳು ಕೇಳುಗರನ್ನು ಸಮ್ಮೋಹನಗೊಳಿಸುತ್ತಿತ್ತು.

*ಲೇಖಕರು: ನಿವೃತ್ತ ಪ್ರಾಧ್ಯಾಪಕ, ಕಣವಿ ಅವರ ಒಡನಾಡಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT