ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದ ದಾಂಪತ್ಯವನ್ನು ಮತ್ತೆ ಕಟ್ಟುವ ಹಂಬಲ...

Last Updated 19 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಜಾಗತೀಕರಣದ ಇಂದಿನ ಬದುಕು ಪಡೆದಿರುವ ಹೊಸ ಸ್ವರೂಪವನ್ನೂ ತುಂಬಾ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಸಂಸ್ಕೃತಿ–ಸಂಸ್ಕಾರಗಳ ಮೌಲ್ಯವನ್ನೂ ಮುಖಾಮುಖಿಯಾಗಿಸುವ ‘ಲಿವಿಂಗ್‌ ಟುಗೆದರ್‌’ ಈರಣ್ಣಾ ಬಡಿಗೇರ ಅವರ ಹೊಸ ಕಾದಂಬರಿ.

ಹಾನಗಲ್‌ನಂತಹ ಪುಟ್ಟ ಪಟ್ಟಣದಲ್ಲಿ ಬೇರುಗಳನ್ನು ಚಾಚಿಕೊಂಡು ಅಮೆರಿಕದಲ್ಲಿ ರೆಂಬೆ–ಕೊಂಬೆಗಳನ್ನು ಹರಡಿಕೊಂಡು ನಿಂತಿರುವ ಇಲ್ಲಿನ ಕಥಾವಸ್ತು, ಮುರಿದು ಬೀಳುತ್ತಿರುವ ದಾಂಪತ್ಯದ ಬಂಧವನ್ನು ಮತ್ತೆ ಕೂಡಿಸುವ ಉಮೇದಿನಿಂದ ಕೂಡಿದೆ. ಹಾಗೆ ನೋಡಿದರೆ, ಪರಸ್ಪರ ನಂಬಿಕೆ ಕಳೆದುಕೊಂಡು ಬೇರೆಯಾಗಲು ಹಾತೊರೆಯುತ್ತಿರುವ ದಂಪತಿಗಳ ಕೌನ್ಸೆಲಿಂಗ್‌ಗೆ ಅಗತ್ಯವಾದ ಸಾಹಿತ್ಯ ಎಂದೂ ಈ ಕಾದಂಬರಿಯನ್ನು ನೋಡಬಹುದು.

ಲಿವಿಂಗ್‌ ಟುಗೆದರ್‌ ಎಂಬ ಹೊಸ ಪರಿಕಲ್ಪನೆಯು ಕೌಟುಂಬಿಕ ವ್ಯವಸ್ಥೆಗೆ ಪರ್ಯಾಯವಲ್ಲ ಎನ್ನುವುದು ಕೃತಿಯ ಸ್ಪಷ್ಟ ಸಂದೇಶ. ಮಹಿಳೆಗೆ ಪುರುಷನಿಗಿಂತ ಹೆಚ್ಚು ಸ್ವಾತಂತ್ರ್ಯ ಸಿಗಬೇಕು ಎಂದು ಪ್ರತಿಪಾದಿಸಿದರೂ ಅವಳ ನಡವಳಿಕೆಯಲ್ಲಿ ಸ್ವೇಚ್ಛೆ ಸುಳಿಯಬಾರದು ಎಂದು ಷರತ್ತನ್ನು ವಿಧಿಸಲು ಕೃತಿ ಮರೆಯುವುದಿಲ್ಲ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ಮರುಕಪಡುತ್ತಾ ಹಳೆಯದೇ ಹೊನ್ನು ಎಂದೂ ಪ್ರತಿಪಾದಿಸುತ್ತದೆ.

ಸ್ವಾತಂತ್ರ್ಯ ಸಿಕ್ಕ ಸಂದರ್ಭದ ದಿನಗಳು ಹಾಗೂ ಈಗಿನ ದಿನಗಳು – ಹೀಗೆ ಎರಡು ಕಾಲಘಟ್ಟಗಳಲ್ಲಿ ಚಲಿಸುವ ಇಲ್ಲಿನ ಕಥೆ ಕುಟುಂಬ ಜೀವನದ ಘನತೆಯನ್ನು ಎತ್ತಿ ತೋರಲು ಹವಣಿಸುತ್ತದೆ. ದಾರಿ ತಪ್ಪುವ ಧಾತ್ರಿಯ ಬದುಕಿನ ಚಿತ್ರಣದ ಮೂಲಕ ಸ್ವೇಚ್ಛಾ ಜೀವನದ ಅಪಾಯಕಾರಿ ಪರಿಣಾಮಗಳನ್ನು ಓದುಗರ ಮುಂದಿಡುತ್ತದೆ. ಮಹೇಶನ ಕಥೆಯ ಮೂಲಕ ಸಹನೆಯ ಪಾಠವನ್ನೂ ಮಾಡುತ್ತದೆ. ಹೀಗಾಗಿ ಕೃತಿಯ ಉದ್ದಕ್ಕೂ ವಿರುದ್ಧ ಧ್ರುವಗಳಾಗಿ ನಂತ ದಂಪತಿಗಳ ಮನೋನಿಗ್ರಹಕ್ಕೆ ಬೇಕಾದ ಪರಿಕರಗಳು ಸಿಗುತ್ತಲೇ ಹೋಗುತ್ತವೆ.

ಕೆಲವು ವರ್ಷಗಳ ಹಿಂದೆ ಆಶ್ರಮವೊಂದರಲ್ಲಿ ನಡೆದ ಸಂಸಾರ ಸುಧಾರಣಾ ಕಾರ್ಯಾಗಾರದಲ್ಲಿ ಬೋಧಕರಾಗಿದ್ದ ಲೇಖಕರಿಗೆ, ಅಲ್ಲಿನ ಅನುಭವವೇ ಈ ಕಾದಂಬರಿ ಬರೆಯಲು ಪ್ರೇರಣೆಯಂತೆ. ಅದೇ ಕಾರಣದಿಂದ ಸುಖೀ ದಾಂಪತ್ಯಕ್ಕೆ ಬೇಕಾದ ಉಪದೇಶಗಳ ಮಾಲೆಯೇ ಇದರಲ್ಲಿದೆ. ನಮ್ಮದೆನ್ನುವ ಸಂಸ್ಕೃತಿಯು ಪ್ರತಿಪಾದಿಸುತ್ತಾ ಬಂದಿರುವ ಮೌಲ್ಯಗಳ ಬೋಧನೆಗೆ ಕಾದಂಬರಿಯ ಮಾರ್ಗ ಕಂಡುಕೊಂಡಿದ್ದಾರೆ ಲೇಖಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT