‘ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಸಿಗುವುದಿಲ್ಲ’ ಎನ್ನುವುದು ಬಹುತೇಕ ಎಲ್ಲರ ಆರೋಪ. ಈ ಆರೋಪಕ್ಕೆ ಉತ್ತರರೂಪದಂತೆ ಎಸ್. ಗಿರಿಧರ್ ಅವರ ಈ ಪುಸ್ತಕವನ್ನು ಓದಿಕೊಳ್ಳಬೇಕು. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಗಿರಿಧರ್ ಅವರು ಅಜೀಂ ಪ್ರೇಮ್ಜಿ ಫೌಂಡೇಷನ್ನ ಆರಂಭಿಕ ಸದಸ್ಯರೂ ಹೌದು. ದೇಶದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಸಾಧಾರಣ ಶಿಕ್ಷಕರ ಹಲವು ಮಾದರಿಗಳನ್ನು ನಮ್ಮೆದುರಿಗಿಡುವ ಈ ಪುಸ್ತಕ, ದಂತಗೋಪುರದಲ್ಲಿ ಕೂತು ಬರೆದ ಕೃತಿಯಲ್ಲ. ಬದಲಿಗೆ ಸ್ವತಃ ಆ ಪ್ರದೇಶಕ್ಕೆ ತೆರಳಿ, ಆ ಶಾಲೆಗಳ ಶಿಕ್ಷಕರು, ಮಕ್ಕಳು ಸುತ್ತಲಿನ ಸಮುದಾಯಗಳ ಜೊತೆ ಒಡನಾಡಿ, ಅವರ ಅನುಭವಗಳನ್ನು ಕೇಳಿ, ಪರಿಣಾಮಗಳನ್ನು ಸ್ವತಃ ಅಧ್ಯಯನ ಮಾಡಿ ಬರೆದ ಪುಸ್ತಕ. ಹಾಗಾಗಿ ಇದಕ್ಕೊಂದು ಅಧಿಕೃತ ಛಾಪಿದೆ.