ಮಾಲತಿ ಅವರ ಒಡನಾಡಿಗಳು, ಅಭಿಮಾನಿಗಳು, ರಂಗತಂಡದ ಸದಸ್ಯರು ಬರೆದಿರುವ ಇಲ್ಲಿನ ಬರಹಗಳು, ಅವರು ಎಂತಹ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದನ್ನು ಅನಾವರಣ ಮಾಡುತ್ತವೆ. ಅವರ ಬದುಕಿನ ಹಲವು ಆಪ್ತ ಘಟನೆಗಳನ್ನೂ ಮೆಲುಕು ಹಾಕುತ್ತವೆ. ಛಲವಾದಿ, ಸ್ತ್ರೀವಾದಿ, ರಂಗತಜ್ಞೆ, ಕಲಾವಿದೆ... ಹೀಗೆ ಬಹುರೂಪದಲ್ಲಿ ಮಾಲತಿಯವರು ನಮಗಿಲ್ಲಿ ಗೋಚರಿಸುತ್ತಾರೆ. ನಾ.ಡಿಸೋಜ, ವಿವೇಕ ರೈ ಅವರಂತಹ ಹಿರಿಯರು, ಕೆ. ಷರೀಫಾ, ಎನ್. ಗಾಯತ್ರಿ ಅವರಂತಹ ಒಡನಾಡಿಗಳ ನೆನಪುಗಳು ಬಲು ಆಪ್ತವಾಗಿವೆ. ಕೃತಿಯ ಮೊದಲ ಭಾಗದಲ್ಲಿ ಹಲವು ಒಡನಾಡಿಗಳ ನೆನಪುಗಳು ಹರಡಿಕೊಂಡಿದ್ದರೆ, ಎರಡನೇ ಭಾಗದಲ್ಲಿ ಮಾಲತಿ ಅವರು ಮಾಡಿದ ಭಾಷಣಗಳು, ನೀಡಿದ ಸಂದರ್ಶನಗಳು ಹಾಗೂ ಬ್ರೆಕ್ಟ್ ಕುರಿತು ಅವರು ಬರೆದ ಲೇಖನವನ್ನು ಸಂಗ್ರಹಿಸಿ ಕೊಡಲಾಗಿದೆ. ಕೃತಿಯ ಕೊನೆಯ ಭಾಗದಲ್ಲಿ ಮಾಲತಿ ಅವರ ಜೀವನ, ಸಾಹಿತ್ಯ, ರಂಗ ಚಟುವಟಿಕೆಗಳ ಪರಿಚಯವಿದೆ.