ತಲೆಮಾರುಗಳ ಅಂತರ
ಲೇ: ಎಂ.ವೆಂಕಟಸ್ವಾಮಿ
ಪ್ರ: ಪಾಂಚಜನ್ಯ ಪಬ್ಲಿಕೇಷನ್ಸ್
ಮೊ: 9480317732
ಪುಟಗಳು: 244, ಬೆಲೆ: 250
ಎಂ.ವೆಂಕಟಸ್ವಾಮಿ ಎಂದೊಡನೆ ಮೊದಲು ನೆನಪಾಗುವುದು ಕೋಲಾರದ ಚಿನ್ನದ ಗಣಿ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಲ್ಲಿ (ಜಿಎಸ್ಐ) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅವರು, ಕೆಜಿಎಫ್ನ ಚರಿತ್ರೆಯ ಮೇಲೆ ಅಧಿಕಾರಯುತವಾಗಿ ಮಾತನಾಡಬಲ್ಲವರು. ಗಣಿ ಕಾರ್ಮಿಕರ ಬದುಕು ಬವಣೆಗಳನ್ನೂ ಹತ್ತಿರದಿಂದ ಬಲ್ಲವರು. ‘ಕೋಲಾರದ ಚಿನ್ನದ ಗಣಿಗಳು’ ಪ್ರಬಂಧಕ್ಕಾಗಿಯೇ ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನೂ ಪಡೆದವರು. ಸಾಹಿತ್ಯ ಕೃಷಿಯಲ್ಲಿ ಸಹ ಅವರು ತೊಡಗಿಸಿಕೊಂಡಿದ್ದು, ಅವರ ಎಂಟನೆಯ ಕಾದಂಬರಿಯೇ ‘ತಲೆಮಾರುಗಳ ಅಂತರ’.
‘ಸುಧಾ’ ಓದುಗರಿಗೆ ಈ ಹೆಸರು ಚಿರಪರಿಚಿತ. ಏಕೆಂದರೆ, ಈ ಕಾದಂಬರಿಯು ಮೊದಲು ಧಾರಾವಾಹಿಯಾಗಿ ಪ್ರಕಟವಾಗಿದ್ದು ಆ ಪತ್ರಿಕೆಯಲ್ಲೇ. ಓದುಗರಿಂದ ಅಪಾರ ಮನ್ನಣೆಯನ್ನೂ ಅದು ಗಳಿಸಿತ್ತು. ಕಾದಂಬರಿಯ ಕೇಂದ್ರಬಿಂದು ಕೃಷ್ಣನ ಸಾವಿನೊಂದಿಗೆ ಆರಂಭವಾಗಿ ಆತನ ಸಮಾಧಿಯಲ್ಲಿ ಅಂತ್ಯಗೊಳ್ಳುವುದು ಇಲ್ಲಿನ ಕಥಾವಸ್ತು.
ಕೃಷ್ಣನ ಆತ್ಮವೇ ಇಲ್ಲಿ ಕಥೆ ಹೇಳುತ್ತಾ ಹೋಗುತ್ತದೆ. ವ್ಯಕ್ತಿಯೊಬ್ಬ ದಶಕಗಳ ಕಾಲ ಬಾಳಿ, ಬದುಕಿ ಸಮೃದ್ಧ ಅನುಭವಗಳನ್ನೂ ಕಟ್ಟಿಕೊಂಡು ಅಸುನೀಗಿದ ಬಳಿಕ, ಆತನ ಆತ್ಮವು ಅದೇ ಬದುಕಿನ ಹಿಂಪುಟಗಳ ಮೇಲೆ ನಡೆಸುವ ‘ಸರ್ವೇಕ್ಷಣೆ’ ಶೈಲಿಯಲ್ಲಿ ಸಾಗುವ ಇಲ್ಲಿನ ಕಥನದ ತಂತ್ರಗಾರಿಕೆ ತುಂಬಾ ವಿಶಿಷ್ಟವಾಗಿದೆ.
ಜಿಎಸ್ಐನ ಭಾಷೆಯಲ್ಲೇ ಹೇಳುವುದಾದರೆ ಸರ್ವೇಕ್ಷಕರು ಟೇಪ್ ಹಿಡಿದು, ಅಳತೆ ಮಾಡಿ, ಸೈಟ್ನ ಗುಣಲಕ್ಷಣಗಳ ನಿಖರ ವರದಿ ನೀಡುವಂತೆ, ಕಾದಂಬರಿಯ ಪಾತ್ರಗಳ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಮಧ್ಯೆ ಬಂದು ಸೇರಿಕೊಳ್ಳುವ ರೋಚಕ ತಿರುವುಗಳು ಕಥನ ಕುತೂಹಲವನ್ನು ಹೆಚ್ಚಿಸುತ್ತವೆ.
ಹಾಗೆ ನೋಡಿದರೆ, ಇಲ್ಲಿನ ತಂತ್ರಗಾರಿಕೆ ಬೇರೆಯಾದರೂ ವ್ಯಕ್ತಿಯೊಬ್ಬನ ಸಾವಿನ ಬಿಂದುವಿನಿಂದ ಶುರುವಾಗಿ, ಮೂಲದವರೆಗೆ ಚಲಿಸುವ ಕಥೆಗಳು ಕನ್ನಡದಲ್ಲಿ ಈ ಹಿಂದೆ ಹಲವು ಬಂದಿವೆ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕೃತಿ ಅಂಥವುಗಳಲ್ಲಿ ಕಳಶಪ್ರಾಯವಾಗಿ ನಿಲ್ಲುತ್ತದೆ. ಆ ಕೃತಿಯಂತೆ ಇಲ್ಲಿಯೂ ಬದುಕಿನ ಮೌಲ್ಯಗಳದ್ದೇ ಹುಡುಕಾಟ. ಕಾಲಘಟ್ಟ ಮಾತ್ರ ಬೇರೆ, ಬೇರೆ. ಜಾಗತೀಕರಣದಿಂದ ಕೌಟುಂಬಿಕ ಮೌಲ್ಯಗಳು ಮೂಲೆಗುಂಪಾಗಿರುವ, ಸಂಬಂಧಗಳು ಮುರಿದುಬಿದ್ದಿರುವ ಹಳಹಳಿಕೆ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ. ಸಾಮಾಜಿಕ ದಿವಾಳಿತನ ಹಾಗೂ ತಲೆಮಾರುಗಳ ಅಂತರದಚರ್ಚೆಯೂ ಕಥೆಯುದ್ದಕ್ಕೂ ನೆರಳಿನಂತೆ ಹಿಂಬಾಲಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.