ಬೆಂಗಳೂರು: ಸ್ವಾತಂತ್ರ ಭಾರತದ ಬಜೆಟ್ ಇತಿಹಾಸದಲ್ಲಿ 1999ರ ವರೆಗೂಫೆಬ್ರುವರಿ ಕೊನೆಯ ಕಾರ್ಯಾಚರಣೆ ದಿನದಂದು ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಮಂಡನೆಯಾಗುತ್ತಿತ್ತು. ವಾಜಪೇಯಿ ಅವರ ಆಡಳಿತದಲ್ಲಿ ಬಜೆಟ್ ಮಂಡನೆ ಸಮಯ ಬದಲಿಸಲಾಯಿತು.
ಬ್ರಿಟಿಷ್ ಆಡಳಿತ ಪ್ರಭಾವ ಹಾಗೂ ಬದಲಾಗುತ್ತಿದ್ದ ತೆರಿಗೆಯ ಕಾರಣಗಳಿಂದ ಸಂಜೆ ವೇಳೆ ಬಜೆಟ್ ಮಂಡನೆಯಾಗುತ್ತಿತ್ತು. ಬಜೆಟ್ನಲ್ಲಿ ತೆರಿಗೆ ಬದಲಾವಣೆ ಮಂಡನೆಯಾಗುತ್ತಿದ್ದಂತೆ ತೆರಿಗೆ ಸಂಗ್ರಹಿಸುವ ಸಂಸ್ಥೆಗಳು ಹಾಗೂ ಉತ್ಪಾದಕರು ರಾತ್ರಿಯೇ ವಸ್ತುಗಳು, ತೆರಿಗೆ ದರ ಬದಲಾಯಿಸುವ ಕಾರ್ಯದಲ್ಲಿ ತೊಡಗುತ್ತಿದ್ದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ 1998 ರಿಂದ 2002ರ ವರೆಗೂ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಸಂಜೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಬದಲಾವಣೆ ತಂದರು. 1999ರ ಕೇಂದ್ರ ಬಜೆಟ್ನ್ನು ಬೆಳಿಗ್ಗೆ 11ಕ್ಕೆ ಮಂಡಿಸಿದರು.
ಕೇಂದ್ರ ಬಜೆಟ್ 2020 ಸಂಬಂಧಿಸಿದ ಸುದ್ದಿಗಳಿಗೆ: www.prajavani.net/budget-2020
2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಬದಲಾವಣೆ ತಂದಿತು. ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೊದಲ ಬಾರಿಗೆ ಫೆಬ್ರುವರಿ 1ರಂದು ಬಜೆಟ್ ಮಂಡಿಸುವುದಾಗಿ ಘೋಷಿಸಿದರು.
ಅಂದಿನಿಂದ ಫೆ.1ರಂದು ಬೆಳಿಗ್ಗೆ 11ಕ್ಕೆ ಕೇಂದ್ರ ಬಜೆಟ್ ಮಂಡಿಸಲಾಗುತ್ತಿದೆ.
ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿರುವ ಏಕೈಕ ಮಹಿಳೆ ನಿರ್ಮಲಾ ಸೀತಾರಾಮನ್. 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸಿತು. ಪ್ರಮುಖ ಖಾತೆಯಾದ ಹಣಕಾಸು ಹೊಣೆಯನ್ನು ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಯಿತು. ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ಅವರು ಕೇಂದ್ರ ಬಜೆಟ್ ಮಂಡಿಸಲಾಗಿದ್ದಾರೆ.
ಮಂದಗತಿಯ ಆರ್ಥಿಕತೆಗೆ ಚೇತರಿಕೆ ನೀಡುವುದು, ಆಟೊಮೊಬೈಲ್ ವಲಯದಲ್ಲಿ ಬೇಡಿಕೆ ಹೆಚ್ಚಳಕ್ಕೆ ಕ್ರಮ, ಕೃಷಿ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚಳವಾಗಿರುವ ವಸೂಲಾಗದ ಸಾಲದಪ್ರಮಾಣದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸವಾಲು ನಿರ್ಮಲಾ ಸೀತಾರಾಮನ್ ಅವರ ಮುಂದಿದೆ.