ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಪಾಠ ಕಲಿಯುವುದೆಂದು?

Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. ಅತ್ಯಲ್ಪ ಅವಧಿಯಲ್ಲಿ ಅತಿ ಹೆಚ್ಚು ಲಾಭ ಕೊಡುವ ಆಮಿಷ ಒಡ್ಡಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಈ ವಂಚನೆಯ ಸ್ವರೂಪವು ಕೆಲವರಿಗೆ ಗೊತ್ತಿದ್ದ ವಿಚಾರವಾದರೂ, ಅಷ್ಟಾಗಿ ವ್ಯವಹಾರ ಜ್ಞಾನ ಇಲ್ಲದ ಬಡವರ್ಗದ ಜನರು ಮತ್ತು ಸುಶಿಕ್ಷಿತರೂ ಸುಲಭವಾಗಿ ಮೋಸ ಹೋಗುತ್ತಿದ್ದಾರೆ. ಕಷ್ಟಪಟ್ಟು ಕೂಡಿಟ್ಟ ಹಣವನ್ನು ನಯ ವಂಚಕರು ಒಡ್ಡುವ ಪೊಳ್ಳು ಭರವಸೆಗಳಿಗೆ ನಂಬಿ ಬಲಿಪಶುಗಳಾಗುತ್ತಿದ್ದಾರೆ.

ಕಳೆದ ವಾರ ಬೆಳಕಿಗೆ ಬಂದ ಬೆಂಗಳೂರಿನ ’ಐ ಮಾನಿಟರಿ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್ ಕಂಪನಿ’ಯ ಕೋಟ್ಯಂತರ ರೂಪಾಯಿಗಳ ವಂಚನೆ ಪ್ರಕರಣವು (Ponzi scheme) ಮತ್ತು ತುಮಕೂರಿನಲ್ಲಿ ನಡೆದಿರುವ ‘ಈಝೀ ಮೈಂಡ್’ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಕಂಪನಿಯ ವಂಚನೆ ಪ್ರಕರಣಗಳು ಜನರು ಸುಲಭವಾಗಿ ಮೋಸ ಹೋಗುತ್ತಿರುವುದಕ್ಕೆ ತಾಜಾ ನಿದರ್ಶನಗಳಾಗಿವೆ.

ಈ ಎರಡೂ ಪ್ರಕರಣಗಳಲ್ಲಿ ವಂಚಕರು ಜನರಿಂದ ಅನಧಿಕೃತವಾಗಿ ಠೇವಣಿ ಸಂಗ್ರಹಿಸಿ ಮರುಪಾವತಿ ಹಾಗೂ ಲಾಭಾಂಶದ ಪೊಳ್ಳು ಭರವಸೆ ನೀಡಿದ್ದಾರೆ. ಕಾನೂನಿಗೆ ವಿರುದ್ಧವಾಗಿ ನೂರಾರು ಕೋಟಿ ರೂಪಾಯಿಗಳನ್ನು ವೈಯಕ್ತಿಕ ಅಥವಾ ಸಮೂಹ ಸಂಸ್ಥೆಯ ಅನ್ಯ ವ್ಯವಹಾರಗಳಿಗೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಮೂಲಕ ಠೇವಣಿದಾರರನ್ನು ವಂಚಿಸಿದ್ದಾರೆ. ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ ವಿನಿವಿಂಕ್ ಹಗರಣ ’ವಿನಿವಿಂಕ್ ಶಾಸ್ತ್ರಿ’ ಹುಟ್ಟುಹಾಕಿದ ಸೌಹಾರ್ದ ಸಂಘದ ಮೂಲಕ ನಡೆದಿತ್ತು. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಬಯಲಿಗೆ ಬಂದ ಶಾರದಾ ಚಿಟ್ ಫಂಡ್ ಹಗರಣವು ಇನ್ನೂ ಜನರ ಮನಸ್ಸಿನಿಂದ ದೂರವಾಗಿಲ್ಲ. ಇಷ್ಟೇ ಏಕೆ, ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ಮೊತ್ತದ ಸಾಲಪಡೆದು ಮರುಪಾವತಿಸಲು ವಿಫಲರಾಗಿ ದೇಶದಿಂದ ಪಲಾಯನಗೊಂಡ ನೀರವ್ ಮೋದಿ, ವಿಜಯ್ ಮಲ್ಯ, ಇಂಥವರ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

ಏನಿದು ’ಪೋಂಝಿ ಸ್ಕೀಂ’

ಆಕರ್ಷಕ ಬಡ್ಡಿ ಅಥವಾ ಗರಿಷ್ಠ ಲಾಭಾಂಶದ ಆಮಿಷವೊಡ್ಡಿ ಕೊನೆಗೆ ಠೇವಣಿದಾರರಿಂದ ಅಸಲು ಮೊತ್ತವನ್ನೇ ವ್ಯವಸ್ಥಿತ ರೂಪದಲ್ಲಿ ’ನುಂಗುವ’ ವ್ಯವಹಾರವನ್ನೇ 'ಪೋಂಝಿ ಸ್ಕೀಂ' ಎನ್ನುತ್ತಾರೆ.

ದೇಶದಲ್ಲಿ ಹಣಕಾಸು ವಹಿವಾಟಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಿಯಂತ್ರಿಸಲು ಅನೇಕ ಸ್ವಾಯತ್ತ ಸಂಸ್ಥೆಗಳಿವೆ. ಉದಾಹರಣೆಗೆ, ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಆರ್‌ಬಿಐ, ಷೇರುಪೇಟೆ ವ್ಯವಹಾರವನ್ನು ಸೆಬಿ, ವಿಮಾ ಕ್ಷೇತ್ರವನ್ನು ಐಆರ್‌ಡಿಎ, ಗೃಹ ನಿರ್ಮಾಣಕ್ಕೆ ಸಂಬಂಧಪಟ್ಟ ವ್ಯವಹಾರಗಳನ್ನು ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್ ನೋಡಿಕೊಳ್ಳುತ್ತದೆ. ಕಂಪನಿ ಮತ್ತು ಎಲ್‌ಎಲ್‌ಪಿ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನು ಕ್ರಮ ಕಂಪನಿ ಕಾಯಿದೆಯಡಿ ಒಳಪಡುತ್ತದೆ.

ಸಹಕಾರಿ ಸಂಘಗಳು ಹಾಗೂ ಪತ್ತಿನ ಸಹಕಾರಿ ಸಂಘಗಳು, ಕೇಂದ್ರ ಅಥವಾ ರಾಜ್ಯ ಸಹಕಾರಿ ಸಂಘಗಳ ಕಾನೂನಿನ ವ್ಯಾಪ್ತಿಗೆ ಬರುತ್ತವೆ. ಚಿಟ್ ಫಂಡ್‍ಗಳು ರಾಜ್ಯದ ಕಾನೂನು ವ್ಯಾಪ್ತಿಗೆ ಒಳಗೊಳ್ಳುತ್ತವೆ. ಇವೆಲ್ಲ ಸಂಘಟಿತ ವಲಯದಲ್ಲಿ ವ್ಯವಹರಿಸುವ ಕಾರ್ಯಕ್ಷೇತ್ರಗಳು. ದೇಶದಲ್ಲಿನ ಎಲ್ಲ ನಿಯಂತ್ರಣ ಸಂಸ್ಥೆಗಳು ಎಲ್ಲ ಹಂತಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದೇ ಹೇಳಬಹುದು. ಆದರೆ, ವಂಚನೆಯ ಉದ್ದೇಶದಿಂದ ವ್ಯವಹರಿಸುವವರಿಗೆ ಇವು ಲೆಕ್ಕಕ್ಕೆ ಇಲ್ಲ. ಹೀಗಾಗಿ ಯಾವುದೇ ವ್ಯಕ್ತಿಗಳು, ಸಂಸ್ಥೆಗಳು ಮೇಲಿನ ಯಾವುದೇ ವ್ಯಾಪ್ತಿಗೆ ಒಳಪಡದಿದ್ದಾಗ ನೆರವಾಗುವ ಕಾನೂನು ಠೇವಣಿದಾರರ ಹಿತ ಸಂರಕ್ಷಣಾ ಕಾಯಿದೆ. ಕರ್ನಾಟಕವೂ ಸೇರಿದಂತೆ ಪ್ರತಿ ರಾಜ್ಯಗಳಲ್ಲೂ ಇದನ್ನು ಕೆಲವು ವರ್ಷಗಳ ಹಿಂದೆ ಜಾರಿಗೊಳಿಸಲಾಗಿದೆ. ಅಕ್ರಮವಾಗಿ ಠೇವಣಿ ಸಂಗ್ರಹಿಸುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ’ಅನಿಯಂತ್ರಿತ ಠೇವಣಿ ಸಂಗ್ರಹ ತಡೆ ಮಸೂದೆ’ ಜಾರಿಗೊಳಿಸಲಾಗಿದೆ.

ನಮ್ಮಲ್ಲಿ ವಿಚಕ್ಷಣಾ ದಳಗಳು, ನಿಯಂತ್ರಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಹೀಗಿದ್ದರೂ ಕೋಟ್ಯಂತರ ರೂಪಾಯಿಗಳ ವಂಚನೆ ಪ್ರಕರಣಗಳನ್ನು ತಡೆಗಟ್ಟುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಐಎಂಎ ಹಗರಣದ ವಿಚಾರವನ್ನೇ ನೋಡುವುದಾದರೆ, ಕಾನೂನು ಪ್ರಕಾರವಾಗಿ ಪ್ರಶ್ನಿಸುವ ಅಧಿಕಾರವುಳ್ಳ ಸೆಬಿ, ಆದಾಯ ತೆರಿಗೆ ಇಲಾಖೆ, ಕಂಪನಿ ವ್ಯವಹಾರ ನಿರ್ದೇಶನಾಲಯ ಹೀಗೆ ವಿವಿಧ ಸಂಸ್ಥೆಗಳಿಗೆ ಲಿಖಿತ ರೂಪದಲ್ಲಿ ಕಂಪನಿಯ ಅವ್ಯವಹಾರದ ಬಗೆಗಿನ ತನ್ನ ಸಂದೇಹಗಳನ್ನು ಆರ್‌ಬಿಐ ಮೊದಲೇ ರವಾನಿಸಿತ್ತು. ಇಷ್ಟು ಮಾಹಿತಿ ಒದಗಿಸಿದ್ದರೂ ವಂಚನೆಯ ಸ್ವರೂಪ ಊಹಿಸಿ ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾದದ್ದು, ಕಾನೂನಾತ್ಮಕ ಒಳಸುಳಿಗಳಿಂದ ಹೊರಬರದಿದ್ದುದು ಈ ಸಂಸ್ಥೆಗಳ ಬಗೆಗಿನ ವಿಶ್ವಾಸಾರ್ಹತೆಯನ್ನು, ಕಾರ್ಯದಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವನಿಂದ ಒಂದು ರೂಪಾಯಿ ತೆರಿಗೆ ಬಾಕಿ ಇದ್ದರೂ ಮರುದಿನವೇ ನೋಟಿಸ್ ಜಾರಿ ಮಾಡುವ ಸಂಸ್ಥೆಗಳು, ಆರ್ಥಿಕ ವಂಚನೆ ಪ್ರಕರಣಗಳಲ್ಲಿ ಯಾವ ಮಾನದಂಡದಲ್ಲಿ ಕೆಲಸ ಮಾಡುತ್ತಿವೆ ಎನ್ನುವುದೇ ನಾಗರಿಕರ ಎದುರಿಗಿರುವ ದೊಡ್ಡ ಪ್ರಶ್ನೆಯಾಗಿದೆ.

ಜನರು ತಮ್ಮ ಎಲ್ಲ ಜವಾಬ್ದಾರಿಗಳನ್ನು ಕೇವಲ ಸರ್ಕಾರ, ತನಿಖಾ ಸಂಸ್ಥೆಗಳು ಅಥವಾ ಪೋಲಿಸ್ ಇಲಾಖೆಯ ಮೇಲೆ ಹೇರದೆ, ಯಾವುದೇ ವಂಚನೆ ಪ್ರಕರಣದ ಸುಳಿವು ಲಭ್ಯವಾಗುತ್ತಿದಂತೆ ತಪ್ಪಿತಸ್ಥರ ವಿರುದ್ದ ಮೊಕದ್ದಮೆ ದಾಖಲಿಸಲು ಮುಂದಾಗಬೇಕು. ಇದರಿಂದ ವಂಚಕರ ವಿರುದ್ದ ತ್ವರಿತ ಕ್ರಮ ಕೈಗೊಳ್ಳುವುದಕ್ಕೆ ನಿಯಂತ್ರಣ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಇದರಿಂದ ಮೋಸ ಹೋದವರಿಗೆ ನ್ಯಾಯ ಸಿಗುವುದರ ಜತೆಗೆ, ವಂಚಕರು ತೋಡಿದ ಹಳ್ಳಕ್ಕೆ ಇತರ ಅಮಾಯಕರು ಬೀಳದಂತೆ ತಡೆಯಲು ಸಾಧ್ಯವಾಗಲಿದೆ. ಹಣಕಾಸು ವಂಚನೆಗಳು ಮರುಕಳಿಸದಂತೆ ತಡೆಯುವಲ್ಲಿ ಹೂಡಿಕೆದಾರರು, ನಿಯಂತ್ರಣ ಸಂಸ್ಥೆಗಳು ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ ಇಲಾಖೆಗಳು ಸಮಾನ ಹೊಣೆಗಾರರು ಎನ್ನುವುದನ್ನು ಮರೆಯಬಾರದು.

ನಾವು ಎಡವಿದ್ದೆಲ್ಲಿ?

1 ಕೇವಲ ಬಾಯಿ ಮಾತಿಗೆ ಮರುಳಾಗುವ ನಮ್ಮ ಜನ, ಸಕಾಲದಲ್ಲಿ ಇಂತಹ ಅವಾಂತರಗಳ ಜಾಡು ಕಂಡುಹಿಡಿಯುವಲ್ಲಿ ವಿಫಲರಾಗುತ್ತಾರೆ.

2 ಹಣ ಹೂಡುವ ಮೊದಲು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಅತ್ಯಧಿಕ ಲಾಭದ ಏಕೈಕ ದೃಷ್ಟಿ ಇರಿಸಿ ಮೂಲಧನದ ಸಂರಕ್ಷಣೆಯ ಬಗ್ಗೆ ಆದ್ಯತೆ ಕೊಡುವುದಿಲ್ಲ. ಹಿಂದೆ ನಡೆದ ವಂಚನೆ ಪ್ರಕರಣಗಳಿಂದ ಪಾಠ ಕಲಿಯಲು ಮರೆತಿರುವುದು.

3 ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಮೋಸ, ವಂಚನೆಯ ಬಗ್ಗೆ ಜನಸಾಮಾನ್ಯರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಾಗಿದೆ. 'ಹೂಡಿಕೆದಾರರ ಜಾಗೃತಿ'ಗೆ ಸಂಬಂಧಪಟ್ಟ ಮಾಹಿತಿ, ಕಾರ್ಯಕ್ರಮಗಳನ್ನು ಟಿವಿ, ಪತ್ರಿಕಾ ಜಾಹೀರಾತು, ರೇಡಿಯೊ ಮೂಲಕ ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಲ್ಲಿ ಆಗಾಗ ಪ್ರಚಾರ ಮಾಡದಿರುವುದು.

4 ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಕೊಡುವ ಯಾವುದೇ ‘ಸ್ಕೀಮ್’ಗಳ
ಬಗ್ಗೆ ಜನರು ಪೂರ್ವಾಪರ ಮಾಹಿತಿ ಸಂಗ್ರಹಿಸದೆ, ಸದ್ದಿಲ್ಲದೆ ವ್ಯವಹರಿಸಿ ವಂಚನೆಗೆ ಒಳಗಾದಾಗ ಕೊನೆಯ ಹಂತದಲ್ಲಿ ಎಚ್ಚೆತ್ತುಕೊಳ್ಳುವುದು.

5 ಹಳ್ಳಿ ಹಳ್ಳಿಗಳಲ್ಲೂ ಅಗತ್ಯವಾಗಿ ಬೇಕಾದ ಬ್ಯಾಂಕಿಂಗ್ ಸೌಲಭ್ಯವನ್ನು ವ್ಯವಸ್ಥಿತವಾಗಿ ವಿಸ್ತರಿಸುವಲ್ಲಿ ನಾವು ವಿಫಲರಾದದ್ದು. ಖಾಸಗಿ ಕ್ಷೇತ್ರದ ಸಂಸ್ಥೆಗಳಲ್ಲಿ ಹಣ ತೊಡಗಿಸುವುದು ವ್ಯವಹಾರ ಹಾಗೂ ದಾಖಲೆಗಳ ವಿಚಾರದಲ್ಲಿ ಸರಳವಾದರೂ, ಅದಕ್ಕಿಂತ ಬ್ಯಾಂಕಿಂಗ್ ಕ್ಷೇತ್ರಗಳೇ ಹೆಚ್ಚು ವಿಶ್ವಾಸಾರ್ಹ ಎಂಬುದನ್ನು ಮನನ ಮಾಡಲು ವಿಫಲವಾಗಿರುವುದು.

6 ಕೆಲವೊಮ್ಮೆ ಇಂತಹ ಹಗರಣಗಳು ಸರ್ಕಾರಕ್ಕೆ ಗೊತ್ತಿದ್ದೂ ನಡೆಯುತ್ತಿದ್ದರೂ, ಆಡಳಿತ
ಯಂತ್ರ ಹಾಗೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಮುಂದುವರೆದಿರುತ್ತವೆ. ಸ್ವಂತ ಲಾಭಕ್ಕಾಗಿ ಅಮಾಯಕರ ಹಿತದೃಷ್ಟಿಯನ್ನು ಗಾಳಿಗೆ ತೂರಿ ಸಮಯೋಚಿತ ಕಾನೂನು ಕ್ರಮ ಕೈಗೊಳ್ಳಲು
ಅಧಿಕಾರಸ್ಥರು ವಿಳಂಬ ನೀತಿ ಅನುಸರಿಸಲಾಗುತ್ತಿದೆ.

7 ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಹರಡಿರುವ ಕಪ್ಪು ಹಣದ ಬಳಕೆಗೆ ಕಡಿವಾಣ ಹಾಕದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT