ಮುಂಬೈ: ಕೋವಿಡ್–19 ಪಿಡುಗು ಮತ್ತು ದೇಶದಾದ್ಯಂತ ಜಾರಿಯಲ್ಲಿದ್ದ ದಿಗ್ಬಂಧನ ಸಂದರ್ಭದಲ್ಲಿ ಜನರಲ್ಲಿ ಉಳಿತಾಯ, ಮಿತವ್ಯಯ ಪ್ರವೃತ್ತಿ ಹೆಚ್ಚಳಗೊಂಡಿರುವುದು ಮತ್ತು ರಿಟೇಲ್ ಸಾಲದ ಪ್ರಮಾಣ ಭಾರಿ ಕುಸಿತ ಕಂಡು ಬಂದಿದೆ.
ರಿಟೇಲ್ ಸಾಲದ ಪ್ರಮಾಣವು 2008ರಿಂದೀಚೆಗಿನ ಅತ್ಯಂತ ಕಡಿಮೆ ಮಟ್ಟದಲ್ಲಿ (ಶೇ 2.5) ದಾಖಲಾಗಿದೆ. ಮಹಾರಾಷ್ಟ್ರವು ಲಾಕ್ಡೌನ್ ವಿಸ್ತರಿಸಿರುವುದರಿಂದ ಈ ಕುಸಿತ ಇನ್ನಷ್ಟು ಹೆಚ್ಚಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ತಜ್ಞರು ಹೇಳಿದ್ದಾರೆ.
ಲಾಕ್ಡೌನ್ ವೇಳೆಯಲ್ಲಿ ಜನರ ಉಳಿತಾಯ ಪ್ರವೃತ್ತಿಯಲ್ಲಿ ಏರಿಕೆಯಾಗಿದೆ. ಜನರು ಮಿತವ್ಯಯದತ್ತಲೂ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಮೂರನೇ ಬಾರಿಗೆ ಲಾಕ್ಡೌನ್ ವಿಸ್ತರಣೆ ಆಗುತ್ತಿದ್ದಂತೆ ಜನರು ಅಗತ್ಯ ವಸ್ತುಗಳ ಖರೀದಿಗೆ ಆದ್ಯತೆ ನೀಡಿದ್ದರಿಂದ ಒಟ್ಟಾರೆ ಠೇವಣಿಯಲ್ಲಿ ಕುಸಿತ ಕಂಡು ಬಂದಿದೆ. ಇದನ್ನು ಹೊರತುಪಡಿಸಿದರೆ ಉಳಿದ ಹಂತಗಳಲ್ಲಿ ಬ್ಯಾಂಕ್ ಠೇವಣಿಯಲ್ಲಿ ಹೆಚ್ಚಳವಾಗಿದೆ.
ಪ್ರಸ್ತುತ ಮತ್ತು ಭವಿಷ್ಯದಲ್ಲಿನ ಆರ್ಥಿಕ ಸ್ಥಿತಿಗತಿ ಕುರಿತ ಗ್ರಾಹಕರ ವಿಶ್ವಾಸವು ದೇಶಿ ಆರ್ಥಿಕತೆ ಮುನ್ನಡೆಸುವ ಪ್ರಮುಖ ಚಾಲನಾ ಶಕ್ತಿಯಾಗಿದೆ.
ಗ್ರಾಹಕರ ವಿಶ್ವಾಸ ಪುನಶ್ಚೇತನಗೊಳಿಸುವ ಮತ್ತು ಬೇಡಿಕೆ ಹೆಚ್ಚಿಸುವ ಬಗ್ಗೆ ಲಾಕ್ಡೌನ್ ಸಂದರ್ಭದಲ್ಲಿ ಒತ್ತು ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.