ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ | ಖರ್ಗೆ, ಬಿನ್ನಿಗೆ ಯಾರಿದ್ದಾರೆ ಬೆನ್ನಿಗೆ?

ವಿಧಾನಸಭೆ ಚುನಾವಣೆಯೇ ತಾಲೀಮು, ಜಾತಿ ಸಮೀಕರಣವೇ ತಲೆನೋವು
Last Updated 27 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಕರ್ನಾಟಕದ ಇಬ್ಬರು ವ್ಯಕ್ತಿಗಳು ಕಳೆದ ವಾರ ರಾಷ್ಟ್ರ ಮಟ್ಟದ ಅತ್ಯುನ್ನತ ಹುದ್ದೆಗೆ ಏರಿದರು. ಇಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಅವಿರತ ಸಾಧನೆ ಮಾಡಿದವರು. ಇಬ್ಬರ ಅದೃಷ್ಟವೂ ಹೆಚ್ಚೂಕಮ್ಮಿ ಒಂದೇ ಆಗಿತ್ತು. ರಾಜ್ಯದ ಹಿರಿಯ ಕ್ರಿಕೆಟ್ ಆಟಗಾರ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾದರು. ಅದೇ ರೀತಿ ಕನ್ನಡನಾಡಿನ ಅತ್ಯಂತ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರು.

1983ರಲ್ಲಿ ಭಾರತವು ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಬಿನ್ನಿ, ಎಂದಾದರೊಂದು ದಿನ ಭಾರತ ಕ್ರಿಕೆಟ್ ತಂಡದ ನಾಯಕರಾಗುತ್ತಾರೆ ಎಂಬ ಕನಸು ರಾಜ್ಯದ ಕ್ರೀಡಾಪ್ರಿಯರಿಗೆ ಇತ್ತು. ಆದರೆ ಅವರು ಭಾರತ ತಂಡದ ನಾಯಕ ರಾಗಲಿಲ್ಲ. ಸುಮಾರು 40 ವರ್ಷಗಳ ನಂತರ ಅವರು ಭಾರತದ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅದೇ ರೀತಿ, ಕಳೆದ ಲೋಕಸಭಾ ಚುನಾವಣೆವರೆಗೂ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹಂಬಲಿಸುವ ಜನ ಬೇಕಾದಷ್ಟಿದ್ದಾರೆ.

ಆದರೆ ಅವರು ಮುಖ್ಯಮಂತ್ರಿಯಾಗಲಿಲ್ಲ. ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ನಿರ್ಧರಿಸುವ ಸ್ಥಾನದಲ್ಲಿ ಈಗ ಅವರು ಕುಳಿತಿದ್ದಾರೆ. ಬಿನ್ನಿ ಮತ್ತು ಖರ್ಗೆ ಇಬ್ಬರ ಮುಂದೆಯೂ ಈಗ ಬಹಳಷ್ಟು ಸವಾಲುಗಳಿವೆ. ಜನರ ನಿರೀಕ್ಷೆಯೂ ಹೆಚ್ಚಾಗಿದೆ. ಈ ಇಬ್ಬರಿಗೂ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಇದೆ. ಸಮಸ್ಯೆ ಬಗೆಹರಿಸುವ ಜಾಣ್ಮೆ ಇದೆ. ಅದನ್ನು ಬಳಸಿಕೊಂಡು ಇಬ್ಬರೂ ಯಶಸ್ವಿಯಾಗಲಿ ಎಂದು ಹಾರೈಸೋಣ.

ಕ್ರಿಕೆಟ್‌ನಲ್ಲಿ ಸೋಲು ಗೆಲುವು ಇದ್ದದ್ದೆ. ಅದೇ ರೀತಿ ರಾಜಕಾರಣದಲ್ಲಿಯೂ ಜಯಾಪಜಯ ಸಾಮಾನ್ಯ. ಆದರೆ ಈ ಇಬ್ಬರ ವಿಚಾರದಲ್ಲಿಯೂ ಪರಿಸ್ಥಿತಿಯೇಖಳನಾಯಕನಾಗಿದ್ದು ಮಾತ್ರ ಸೋಜಿಗ. ಬಿನ್ನಿ ವಿಚಾರ ಬದಿಗಿರಲಿ. ಖರ್ಗೆ ವಿಚಾರಕ್ಕೆ ಬಂದರೆ, ಒಂದಿಷ್ಟು ವ್ಯಥೆ ಇನ್ನೊಂದಿಷ್ಟು ಕಥೆ ಮತ್ತೊಂದಿಷ್ಟು ಕನಸುಗಳು ಇವೆ. ವ್ಯಥೆ ಯಾಕೆಂದರೆ, ಇಷ್ಟೊಂದು ರಾಜಕೀಯ ಅನುಭವ ಇರುವ, ಆಡಳಿತದಲ್ಲಿ ಪಳಗಿರುವ, ಮುತ್ಸದ್ದಿಯಾಗಿರುವ ಅವರು ಇಂದಿಗೂ ರಾಜ್ಯದ ಮುಖ್ಯಮಂತ್ರಿಯಾಗಲಿಲ್ಲವಲ್ಲಾ ಎಂದು. ಅದಕ್ಕಿಂತ ಮುಖ್ಯವಾಗಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ನಂತರವೂ ಕರ್ನಾಟಕದಲ್ಲಿ ದಲಿತರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ವಲ್ಲಾ ಎನ್ನುವುದು ಇನ್ನೂ ವ್ಯಥೆಯ ವಿಚಾರ. ಖರ್ಗೆ ಅವರು ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆ
ನೀಡಬೇಕಿರಲಿಲ್ಲ. ಅವರ ದಕ್ಷತೆಗೆ ಅದು ಸಲ್ಲಬೇಕಿತ್ತು.

ತಾವು ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಹಿತ ಯಾವುದೇ ಪದವಿ ನೀಡುವುದು ಬೇಡ ಎಂದು ಅವರು ಬಹಳಷ್ಟು ಬಾರಿ ಹೇಳಿದ್ದಾರೆ. ಆದರೂ ನಮ್ಮ ನಡುವಿನ ಜಾತಿ ವ್ಯವಸ್ಥೆಯು ದಲಿತರೊಬ್ಬರಿಗೆ ಮುಖ್ಯಮಂತ್ರಿ ಯಾಗುವ ಅವಕಾಶವನ್ನು ತಪ್ಪಿಸುತ್ತದಲ್ಲ ಎಂಬ ವ್ಯಥೆ ಸದಾ ಕಾಲ ಇರುತ್ತದೆ. ಇನ್ನು ಕತೆ ಏನಪಾ ಅಂದ್ರೆ, ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಪದೇ ಪದೇ ತಪ್ಪಿಹೋಯಿತು.

1972ರಿಂದ ಸತತವಾಗಿ ಶಕ್ತಿರಾಜಕಾರಣದಲ್ಲಿಯೇ ಇರುವ ಖರ್ಗೆ ಅವರು ಎಂದೂ ತಮ್ಮ ಲಾಭಕ್ಕೆ ರಾಜಕೀಯ ದಾಳ ಉರುಳಿಸಿದವರಲ್ಲ. ನಿಜವಾದ ಅರ್ಥದಲ್ಲಿ ಶಕ್ತಿ ರಾಜಕಾರಣ ಮಾಡಿದವರಲ್ಲ. ಈಗಿನ ರಾಜಕೀಯದಲ್ಲಿ ಮಾಮೂಲಿಯಾಗಿರುವ ತಂತ್ರದಂತೆ ಮತ್ತೊಬ್ಬರನ್ನು ತುಳಿದು ಮೇಲೆ ಬಂದ ನಾಯಕರೂ ಅಲ್ಲ. ಪರಿಸ್ಥಿತಿಯನ್ನುಬಳಸಿಕೊಂಡು ಲಾಭ ಗಿಟ್ಟಿಸಿಕೊಳ್ಳುವ ಆಕ್ರಮಣಕಾರಿ ಜಾಯಮಾನವೂ ಅವರದ್ದಲ್ಲ. 1999ರಲ್ಲಿ ಧರ್ಮ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರನ್ನು ಬದಲಿಸುವ ಬಗ್ಗೆ ಮಾತುಕತೆ ನಡೆದಾಗ ಖರ್ಗೆ ಅವರನ್ನೇ ಅಧ್ಯಕ್ಷ ರನ್ನಾಗಿ ಮಾಡುವ ಯೋಚನೆಯೂ ಹೈಕಮಾಂಡ್‌ಗೆ ಇತ್ತು. ಹಾಗಂತ ಸೂಚನೆಯನ್ನೂ ನೀಡಿತ್ತು. ಆದರೆ ತಮ್ಮ ಬಹುಕಾಲದ ಗೆಳೆಯ ಧರ್ಮ ಸಿಂಗ್ ಅವರ ಮನಸ್ಸಿಗೆ ನೋವಾಗಬಹುದೇನೋ ಎಂದು ಖರ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡಿದರು.

ಅಧ್ಯಕ್ಷತೆಎಸ್.ಎಂ.ಕೃಷ್ಣ ಅವರಿಗೆ ಸಿಕ್ಕಿತು. ಅವರು ಮುಖ್ಯಮಂತ್ರಿಯೂ ಆದರು. ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದರೆ ಖರ್ಗೆ ಆಗಲೇ ಮುಖ್ಯಮಂತ್ರಿಯೂ ಆಗಬಹುದಿತ್ತು. 2004ರಲ್ಲಿಯೂ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ಅವರು ಪಟ್ಟು ಹಾಕಲಿಲ್ಲ. ಪರಿಸ್ಥಿತಿ ಸಹಕರಿಸಲಿಲ್ಲ.

2009ರಲ್ಲಿ ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಲೋಕಸಭೆಗೆ ಸ್ಪರ್ಧಿಸಿದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರು. 2013ರಲ್ಲಿ ಅವರು ಮುಖ್ಯಮಂತ್ರಿಯೂ ಆದರು. ಹೀಗೆ ಬಹಳ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆದರೆ ಸಮಚಿತ್ತದ ರಾಜಕಾರಣಿಯಾಗಿರುವ ಖರ್ಗೆ ತಮ್ಮ ಅಸಮಾಧಾನ ವನ್ನು ಎಂದೂ ಭಿನ್ನಮತವಾಗಿ ಪರಿವರ್ತಿಸಿದವರಲ್ಲ. ನೋವು ನುಂಗಿ ಹದವಾಗಿ ಬದುಕಿದ ಅವರಿಗೆ ಈಗ ರಾಜಕೀಯದ ಅತ್ಯುನ್ನತ ಸ್ಥಾನ ದೊರಕಿದೆ.

2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಈಗಲೇ ಹೇಳಲಾಗದು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಅನುಕೂಲಗಳು ಇವೆ. ಜಾತಿ ಸಮೀಕರಣ ಕೂಡ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಬಹುದು. ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿಯನ್ನು ಖರ್ಗೆ ತಡೆಯಬಹುದು. ಈ ಇಬ್ಬರು ಮುಖಂಡರ ಪೈಪೋಟಿಯಿಂದ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿಯೇ ಬಹಳಷ್ಟು ಗೊಂದಲವಾಗಬಹುದು ಎಂಬ ಮಾತುಗಳು ‍ರಾಜಕೀಯ ವಲಯದಲ್ಲಿ ಇವೆ. ಆದರೆ ಈಗ ಖರ್ಗೆಯವರೇ ಹೈಕಮಾಂಡ್ ಆಗಿರುವುದರಿಂದ ಅವರ ಕಣ್ತಪ್ಪಿಸಿ ತಮಗೆ ಬೇಕಾದವರಿಗೆ ಟಿಕೆಟ್‌ ಕೊಡಿಸುವುದು ಕಷ್ಟ.

ರಾಜ್ಯದ ಎಲ್ಲ ಕ್ಷೇತ್ರಗಳ ಬಗ್ಗೆ ಅವರಿಗೆ ತಿಳಿವಳಿಕೆ ಇರುವುದರಿಂದ ಟಿಕೆಟ್ ಹಂಚಿಕೆಯ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ತಮ್ಮ ರಾಜಕೀಯ ಜೀವನದುದ್ದಕ್ಕೂ ಪಕ್ಷನಿಷ್ಠೆಯನ್ನು ಕಾಯ್ದುಕೊಂಡು ಬಂದಿರುವ ಖರ್ಗೆ ಇಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಇನ್ನಿಲ್ಲದ ಪ್ರಯತ್ನವನ್ನಂತೂ ಮಾಡುತ್ತಾರೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಹೊರಡಿಸಿರುವ ಸುಗ್ರೀವಾಜ್ಞೆ ಎಂಬ ದಾಳವನ್ನು ಖರ್ಗೆ ಹೇಗೆ ನಿಭಾಯಿಸುತ್ತಾರೆ ಎನ್ನುವುದೂ ಅತ್ಯಂತ ಪ್ರಮುಖ ವಿಚಾರ. ರಾಮಮಂದಿರ, ಹಿಂದುತ್ವ, ವಾಜಪೇಯಿ, ಅಡ್ವಾಣಿ, ಮೋದಿ ಮುಂತಾದ ಎಲ್ಲ ಅಸ್ತ್ರಗಳನ್ನು ಬಳಸಿಯೂ ಬಿಜೆಪಿ ಇನ್ನೂ ಇಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಅದು ಗೊತ್ತಾಗಿಯೇ ಬಿಜೆಪಿ ಈಗ ಜಾತಿ ಸಮೀಕರಣದತ್ತ ವಾಲಿದೆ. ಲಿಂಗಾಯತರು–ಎಡಗೈ ದಲಿತರು, ಸ್ಪರ್ಶ ದಲಿತರು ಮತ್ತು ವಾಲ್ಮೀಕಿ ಜನಾಂಗದ ಸಮೀಕರಣವನ್ನು ಮಾಡಿಕೊಂಡು ರಾಜ್ಯದಲ್ಲಿ ಗಣನೀಯ ಶಕ್ತಿಯಾಗಿ ಬೆಳೆದುನಿಂತಿರುವ ಬಿಜೆಪಿಗೆ ಅದರ ಬಾಣವನ್ನೇ ಅದಕ್ಕೆ ತಿರುಗಿಸುವುದು ಕಷ್ಟದ ಕೆಲಸ. ಬಲಗೈ ದಲಿತರು–ಮುಸ್ಲಿಂ ಮತ್ತು ಹಿಂದುಳಿದ ಜಾತಿಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜಾತಿ ಸಮೀಕರಣದ ಸವಾಲು ದೊಡ್ಡದಿದೆ.

ಇದನ್ನು ಸರಿಯಾಗಿ ಎದುರಿಸಿದರೆ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಒಂದಿಷ್ಟು ಅವಕಾಶ ಸಿಗುತ್ತದೆ. ಇದರ ನಡುವೆ ಒಕ್ಕಲಿಗರ ರಾಜಕೀಯವೂ ಕಡಿಮೆ ಏನಿಲ್ಲ. ‘ಒಕ್ಕಲಿಗರೇ ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸಿಕೊಳ್ಳುವ ಯತ್ನ, ಆ ಜಾತಿಯ ಮಠಾಧೀಶರ ಬೆಂಬಲ ಮತ್ತು ಇದಕ್ಕಾಗಿ ‘ಪ್ರತಿಮಾ ರಾಜಕಾರಣ’ ಎಲ್ಲವೂ ನಡೆಯುತ್ತಿದೆ. 2024ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಖರ್ಗೆ ಅವರಿಗೆ ಕರ್ನಾಟಕದ ಅಗ್ನಿಪರೀಕ್ಷೆ ಮುಖ್ಯವಾಗಿದೆ.

ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಹಿಂದೆ ಜಯ್‌ ಶಾ ಇದ್ದಾರೆ. ಖರ್ಗೆ ಅವರ ಹಿಂದೆ ಯಾರಿದ್ದಾರೆ? ಛೇ ಎಲ್ಲಾ ನಿಮಗೆ ಗೊತ್ತು, ಮತ್ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT