ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದು ಹವ್ಯಾಸ, ಮೊಬೈಲ್ ಚಟ

ಪತ್ರಿಕೆಗಳ ಉಪಯೋಗ ಹಾಗೂ ಅದರ ಮಹತ್ವ ಅರಿಯಲು ಇದು ಸಕಾಲ
Last Updated 27 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಗಂಗಾವತಿ ಪ್ರಾಣೇಶ್ ಅವರು ತಮ್ಮ ಕಾರ್ಯಕ್ರಮದಲ್ಲಿ ಒಂದು ಜೋಕ್ ಹೇಳುತ್ತಾರೆ. ಅದು ಹೀಗಿದೆ. ಒಮ್ಮೆ ಪುಸ್ತಕ ಹೇಳಿತಂತೆ ‘ನೀನು ತಲೆ ತಗ್ಗಿಸಿ ಒಮ್ಮೆ ನನ್ನನ್ನು ನೋಡು, ನೀನು ಜೀವನದಲ್ಲಿ ಎಂದೆಂದೂ ತಲೆ ಎತ್ತಿ ನಡೆಯುವಂತೆ ಮಾಡುತ್ತೇನೆ’ ಎಂದು. ಇದನ್ನು ಕೇಳಿಸಿಕೊಂಡ ಮೊಬೈಲ್ ಕೂಡಾ ಹೇಳಿತಂತೆ ‘ಒಮ್ಮೆ ನೀನು ತಲೆ ತಗ್ಗಿಸಿ ನನ್ನ ನೋಡು. ಮುಂದೆಂದೂ ನೀನು ತಲೆ ಎತ್ತದಂತೆ ಮಾಡುತ್ತೇನೆ’ ಎಂದು. ಇದೊಂದು ಹಾಸ್ಯದ ತುಣುಕು ಅನ್ನಿಸಬಹುದು. ಪ್ರಾಣೇಶ್ ಇದನ್ನು ಹೇಳಿದಾಗ ಎಲ್ಲರೂ ನಕ್ಕು ಚಪ್ಪಾಳೆ ತಟ್ಟಿರಬಹುದು. ಆದರೆ ಇದರಲ್ಲಿ ವಿಚಾರ ಮಾಡಬೇಕಾದ ವಿಷಯ ಇದೆ. ಈ ಮಾತು ಕೇವಲ ಪುಸ್ತಕಕ್ಕೆ ಅನ್ವಯವಾಗುವುದಿಲ್ಲ, ಪತ್ರಿಕೆಗಳಿಗೂ ಅನ್ವಯವಾಗುತ್ತದೆ. ಪತ್ರಿಕೆಗಳನ್ನು ಓದಿದರೆ ನೀವು ಜೀವನದಲ್ಲಿ ತಲೆ ಎತ್ತಿ ನಡೆಯಬಹುದು. ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗಿದ್ದರೆ ತಲೆ ಎತ್ತುವುದು ಕಷ್ಟವಾಗಬಹುದು.

ವಾಟ್ಸ್ಆ್ಯಪ್‌ನಲ್ಲಿ ಇತ್ತೀಚೆಗೆ ಒಂದು ಸಂದೇಶ ಬಂದಿತ್ತು. ಕೊರೊನಾ ಕಾಲದಲ್ಲಿ ಟಿ.ವಿಗಳು ದಿನಪೂರ್ತಿ ಒಂದೇ ಸುದ್ದಿಯನ್ನು ಬಿತ್ತರ ಮಾಡುವುದರಿಂದ ರೋಸಿ ಹೋಗಿ ಬಂದ ಸಂದೇಶ ಅದು. ‘ಟಿ.ವಿಗಳು ಯಾವುದೇ ಒಂದು ವಿಷಯವನ್ನು ದಿನದ 24 ಗಂಟೆಯೂ ಪ್ರಸಾರ ಮಾಡಬಹುದು. ಆದರೆ ಪತ್ರಿಕೆಗಳು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. 10 ಅಥವಾ 12 ಪುಟಗಳ ಪತ್ರಿಕೆಗಳು ಒಂದೇ ವಿಷಯವನ್ನು ಎಲ್ಲ ಪುಟಗಳಲ್ಲಿಯೂ ತುಂಬುವುದು ಕಷ್ಟ’ ಎಂಬ ಸಂದೇಶ ಎಷ್ಟು ನಿಜವನ್ನು ಹೇಳುತ್ತದೆ ನೋಡಿ. ಪತ್ರಿಕೆಗಳಲ್ಲಿ ವೈವಿಧ್ಯ ಇರುತ್ತದೆ ಎನ್ನುವುದಕ್ಕೆ ಇದು ಉದಾಹರಣೆ.

ರವೀಂದ್ರ ಭಟ್ಟ

ಕಾದಂಬರಿಕಾರ ಚೇತನ್ ಭಗತ್ ಅವರು ಸ್ಮಾರ್ಟ್‌ ಫೋನ್ ಅನ್ನು ಚಾಟ್‌ ಮಾಡುವುದಕ್ಕೆ‌ ಮತ್ತು ವಿಡಿಯೊ ಗೇಮ್‌ ಆಡುವುದಕ್ಕೆ ಮಾತ್ರ ಬಳಸುವುದನ್ನುಚಟಕ್ಕೆ ಹೋಲಿಸುತ್ತಾರೆ. ನಮ್ಮ ಯುವಜನ ಮೊಬೈಲ್ ಫೋನ್‌ ಚಟಕ್ಕೆ ಬಿದ್ದರೆ, ಸಮಾಜವು ಆ ತಲೆಮಾರನ್ನೇ ಮರೆತುಬಿಡುತ್ತದೆ ಎಂದೂ ಅವರು ಎಚ್ಚರಿಸುತ್ತಾರೆ. ತಲೆ ತಗ್ಗಿಸಿ ನೀವು ಮೊಬೈಲ್ ನೋಡುತ್ತಲೇ ಇದ್ದರೆ ನಿಮ್ಮ ಮಿದುಳಿನ ಕಾರ್ಯಕ್ಷಮತೆ ಕೂಡ ಕಡಿಮೆಯಾಗುತ್ತದೆ. ನೀವು ಯಂತ್ರಮಾನವ ಆಗಬಹುದೇ ವಿನಾ ಜ್ಞಾನಿಯಾಗಲು, ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಿಲ್ಲ ಎಂಬ ಮಾತನ್ನೂ ಅವರು ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳನ್ನು ಮತ್ತು ಮೊಬೈಲ್ ಫೋನ್ ಹೆಚ್ಚು ಬಳಸುವುದರಿಂದ ಏನೇನು ಅನಾಹುತಗಳಾಗುತ್ತವೆ ಎನ್ನುವುದರ ಬಗ್ಗೆ ಈಗಾಗಲೇ ಅಧ್ಯಯನಗಳು ನಡೆದಿವೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂದು ಅಧ್ಯಯನಗಳು ಹೇಳಿವೆ. ಹಾಗಾದರೆ ಸಾಮಾಜಿಕ ಜಾಲತಾಣ ಮತ್ತು ಸ್ಮಾರ್ಟ್ ಫೋನ್‌ ಬೇಡವೇ ಬೇಡ ಎಂದಲ್ಲ. ಅವನ್ನು ವಿವೇಕದಿಂದ ಬಳಸಬೇಕು ಅಷ್ಟೆ.

ಜನತಾದಳದ ನಾಯಕರು ಎರಡನೇ ಬಾರಿಗೆ ಒಂದಾದಾಗ ದಾವಣಗೆರೆಯಲ್ಲಿ ಒಂದು ಸಮಾವೇಶ. ಆ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಮಾತನಾಡುತ್ತಾ, ದೇಶದಲ್ಲಿರುವ ಪಕ್ಷಗಳನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದರು. ಅದನ್ನು ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಿಗೂ ಹೋಲಿಸಬಹುದು. ಆಗ ದೇಶದಲ್ಲಿ ಇನ್ನೂ ಕಾಂಗ್ರೆಸ್ ಪಕ್ಷ ಪ್ರಬಲವಾಗಿತ್ತು. ಬಿಜೆಪಿ ಆಗಷ್ಟೇ ಚಿಗುರುತ್ತಿದ್ದ ಪಕ್ಷವಾಗಿತ್ತು. ಆ ಹಿನ್ನೆಲೆಯಲ್ಲಿಯೇ ಈ ವಿಶ್ಲೇಷಣೆಯನ್ನು ನೋಡಬೇಕು. ಪಟೇಲರ ವಿಶ್ಲೇಷಣೆ ಹೀಗಿತ್ತು. ‘ಕಾಂಗ್ರೆಸ್ ಪಕ್ಷ ಎಂದರೆ ಸಾರಾಯಿ ಇದ್ದ ಹಾಗೆ. ಸಾರಾಯಿ ಕುಡಿಯುವ ಎಲ್ಲರಿಗೂ ಗೊತ್ತು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು. ಆದರೂ ಸಂಜೆಯಾಗುತ್ತಿದ್ದಂತೆ ಅಥವಾ ಸಾರಾಯಿ ಅಂಗಡಿ ಕಾಣುತ್ತಿದ್ದಂತೆ ಕುಡಿಯುವ ಬಯಕೆಯಿಂದ ತಪ್ಪಿಸಿಕೊಳ್ಳಲು ಆಗಲ್ಲ. ಅದೇ ರೀತಿ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತು. ಆದರೂ ಮತಗಟ್ಟೆಗೆ ಹೋದ ಜನ ಚಟದಂತೆ ಕಾಂಗ್ರೆಸ್ ಪಕ್ಷಕ್ಕೇ ಮತ ಹಾಕುತ್ತಾರೆ. ಇನ್ನು ಬಿಜೆಪಿ ಪೆಪ್ಸಿ, ಕೋಕಾಕೋಲಾ ಇದ್ದ ಹಾಗೆ. ಅದನ್ನು ಆಗೊಮ್ಮೆ ಈಗೊಮ್ಮೆ ಫ್ಯಾಷನ್‌ಗೆ ಕುಡಿಯಬಹುದೇ ವಿನಾ ಅದನ್ನೇ ಅಭ್ಯಾಸ ಮಾಡಿಕೊಳ್ಳಲು ಆಗಲ್ಲ. ಅದರಿಂದ ಬಾಯಾರಿಕೆ ಹೋಗುವುದಿಲ್ಲ. ಬಾಯಾರಿಕೆ ಹೋಗಬೇಕು ಎಂದರೆ ಶುದ್ಧ ನೀರನ್ನೇ ಕುಡಿಯಬೇಕು. ಜನತಾದಳ ಎಂದರೆ ಶುದ್ಧ ನೀರು ಇದ್ದ ಹಾಗೆ’ ಎಂದು ಅವರು ಹೇಳಿದ್ದರು.

ಪಟೇಲರ ಮಾತನ್ನು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೋಲಿಸುವುದಾದರೆ, ಇವು ಸಾರಾಯಿ ತರಹವೂ ಹೌದು, ಪೆಪ್ಸಿ, ಕೋಕಾಕೋಲಾ ತರಹವೂ ಹೌದು. ಮೊಬೈಲ್ ಬಳಕೆ ಈಗ ಚಟವೇ ಆಗಿದೆ. ಅದು ಚಟ ಆಗದಂತೆ ಎಚ್ಚರಿಕೆ ವಹಿಸಬೇಕು. ಆಗ ಈಗ ಅದನ್ನು ಫ್ಯಾಷನ್‌ಗೆ ಬಳಸಬಹುದೇ ವಿನಾ ಅದನ್ನೇ ಚಟ ಮಾಡಿಕೊಳ್ಳುವುದು ತರವಲ್ಲ. ನಮ್ಮ ಆರೋಗ್ಯಕ್ಕೂ ಹಾಳು, ಸಮಾಜಕ್ಕೂ ನಷ್ಟ. ನಿಮಗೆ ಶುದ್ಧ ನೀರು ಬೇಕು ಎಂದಾದರೆ ನೀವು ಪತ್ರಿಕೆ ಅಥವಾ ಪುಸ್ತಕಗಳನ್ನೇ ಓದಬೇಕು. ಆಗ ಮಾತ್ರ ನಿಮ್ಮ ಬಾಯಾರಿಕೆಯೂ ತಣಿಯುತ್ತದೆ, ಹಸಿವೂ ಇಂಗುತ್ತದೆ.

ಓದು ಯಾವಾಗಲೂ ಹವ್ಯಾಸ. ಅದನ್ನು ಸಕಾರಾತ್ಮಕ ವಾಗಿಯೇ ನೋಡಲಾಗುತ್ತದೆ. ಪತ್ರಿಕೆ ಮತ್ತು ಪುಸ್ತಕಗಳ ಓದು ಜ್ಞಾನವನ್ನು ಧಾರೆ ಎರೆಯುತ್ತದೆ. ಮೊಬೈಲ್ ಓದನ್ನು ಚಟ ಎನ್ನುತ್ತಾರೆಯೇ ವಿನಾ ಅದನ್ನು ಹವ್ಯಾಸ ಎಂದು ಹೇಳುವುದಿಲ್ಲ. ಮೊಬೈಲ್‌ಗಳಲ್ಲಿ ಕಳೆದುಹೋದರೆ ಸಮಯ ವ್ಯರ್ಥ ಎಂದೇ ಭಾವಿಸಲಾಗುತ್ತದೆ. ಓದನ್ನು ಯಾರೂ ವ್ಯರ್ಥ ಎಂದು ವಿಶ್ಲೇಷಿಸುವುದಿಲ್ಲ. ಸಾಮಾಜಿಕ ಜಾಲತಾಣಗಳನ್ನು ನಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕೇ ವಿನಾ ಅದಕ್ಕೆ ದಾಸರಾಗಬಾರದು.

ನಮ್ಮ ದೇಶದಲ್ಲಿ ಕೊರೊನಾ ಕಾಲದಲ್ಲಿ ಎಲ್ಲ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಜನರಿಗೆ ಅಗತ್ಯಕ್ಕೆ ತಕ್ಕ ಮಾಹಿತಿಯನ್ನು ನೀಡಿವೆ. ಬಹಳ ಮುಖ್ಯವಾಗಿ ಪತ್ರಿಕೆಗಳು ಕೊರೊನಾ ವಿಷಯದಲ್ಲಿ ಜನರನ್ನು ಗಾಬರಿಗೊಳಿಸಿಲ್ಲ. ಪತ್ರಿಕೆಗಳ ಇಂತಹ ಉಪಯೋಗವನ್ನು ಹಾಗೂ ಅದರ ಮಹತ್ವವನ್ನು ತಿಳಿಯಲು ಇದು ಸಕಾಲ.

ಮೊಬೈಲ್ ಫೋನ್‌ ಎನ್ನುವುದು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಎಲ್ಲ ಸೇವೆಗಳೂ ಮೊಬೈಲ್‌ನಲ್ಲಿಯೇ ಸಿಗುವುದರಿಂದ ನಮ್ಮ ಬದುಕನ್ನು ಅದು ಹಗುರಾಗಿಸಿದೆ. ಆ ಮಟ್ಟಿಗೆ ಅದರ ಉಪಯೋಗ ಬಹಳ ದೊಡ್ಡದು. ಆದರೆ ಅದನ್ನು ವಿವೇಚನೆಯಿಂದ ಬಳಸದೇ ಹೋದರೆ ತೊಂದರೆಯೂ ಕಟ್ಟಿಟ್ಟ ಬುತ್ತಿ.

2020ರಲ್ಲಿ ವಿಶ್ವದಲ್ಲಿ ಸ್ಮಾರ್ಟ್ ಫೋನ್ ಬಳಸುವವರ ಸಂಖ್ಯೆ 295 ಕೋಟಿಗೆ ಏರಿದೆ. ಅಂದರೆ ವಿಶ್ವದ ಜನಸಂಖ್ಯೆಯ ಮೂರನೇ ಒಂದರಷ್ಟು ಜನ ಈಗ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಅದರಲ್ಲಿಯೂ ಯುವಸಮೂಹವೇ ಅತಿ ಹೆಚ್ಚು ಮೊಬೈಲ್ ಫೋನ್ ಬಳಸುತ್ತಿರುವುದು ವಿಶ್ವದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊಬೈಲ್ ಬಳಕೆಯು ಭಯ, ಮಾನಸಿಕ ಒತ್ತಡ, ಏಕಾಂಗಿತನ, ಖಾಲಿತನ, ಜೀವನವೇ ಬರಡು ಎಂಬಂತಹ ಭಾವನೆಗಳಿಗೆ ಕಾರಣವಾಗುತ್ತದೆ.

ಒಂದು ಅಧ್ಯಯನದ ಪ್ರಕಾರ, ದಿನವೊಂದಕ್ಕೆ 150ಕ್ಕೂ ಹೆಚ್ಚು ಬಾರಿ ಮೊಬೈಲ್ ಬೀಗ ತೆರೆಯುವವರು ಇದ್ದಾರೆ. ತಲೆಯ ಬಳಿಯೇ ಮೊಬೈಲ್ ಇಟ್ಟುಕೊಂಡು ಮಲಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶೌಚಾಲಯದಲ್ಲಿಯೂ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಮೊಬೈಲ್ ಎನ್ನುವುದು ಈಗ ಅಂಟುರೋಗವಾಗಿದೆ. ನಮಗೆ ಅಂಟಿಕೊಂಡೇ ಇರುತ್ತದೆ. ಮೊಬೈಲ್ ಇರಲಿ. ಅದರ ಬಳಕೆ ವಿವೇಚನಾಯುಕ್ತವಾಗಿರಲಿ. ಪತ್ರಿಕೆ, ಪುಸ್ತಕ ಓದುವ ಕಡೆಗೆ ನಮ್ಮ ಮತ್ತು ನಮ್ಮ ಮಕ್ಕಳ ಗಮನ ಇರಲಿ. ಇಲ್ಲವಾದರೆ ನಾವು ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT