<p><em><strong>ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |</strong></em><br /><em><strong>ಸಂದಿಹುದು ಚಿರನವತೆಯಶ್ವತ್ಥಮರಕೆ ||</strong></em><br /><em><strong>ಎಂದೆಂದುಮಂತಿರುವುದೀ ವಿಶ್ವವೃಕ್ಷವದ |</strong></em><br /><em><strong>ರೊಂದು ರೆಂಬೆಯೊ ನೀನು – ಮಂಕುತಿಮ್ಮ </strong></em><strong>|| 252 ||</strong></p>.<p><strong>ಪದ-ಅರ್ಥ:</strong> ಬಾಡಲಿನ್ನೊಂದು=ಬಾಡಲು+ಇನ್ನೊಂದು, ಸಂದಿಹುದು=ದೊರೆತಿಹುದು, ಚಿರನವತೆಯಶ್ವತ್ಥಮರಕೆ=ಚಿರ(ಶಾಶ್ವತವಾದ)+ನವತೆ(ಹೊಸತು)+ಅಶ್ವತ್ಥ ಮರಕೆ, ಎಂದೆಂದುಮಂತಿರುವುದೀ=ಎಂದೆಂದು+ಅಂತು+ಇರುವುದು+ಈ,</p>.<p><strong>ವಾಚ್ಯಾರ್ಥ:</strong> ಒಂದು ಕೊಂಬೆ ಬಾಡುವಾಗ ಮತ್ತೊಂದು ಕೊಂಬೆ ಚಿಗುರುತ್ತದೆ. ಹೀಗೆ ಈ ಅಶ್ವತ್ಥಮರಕ್ಕೆ ಹೊಸತನ ಬಂದಿದ್ದು, ಶಾಶ್ವತವಾಗಿದೆ. ಎಂದೆಂದೂ ಹೀಗೆಯೇ ಇರುವ ವಿಶ್ವವೆಂಬ ಅಶ್ವತ್ಥಮರದ ಒಂದು ಕೊಂಬೆ ನೀನು.</p>.<p><strong>ವಿವರಣೆ:</strong> ಅಶ್ವತ್ಥವೃಕ್ಷದ ಬಗ್ಗೆ ಕಠೋಪನಿಷತ್ತಿನಲ್ಲಿ ಸುಂದರವಾದ ಮಾತಿದೆ. ಯಮ ಈ ಪ್ರಪಂಚವನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುತ್ತಾನೆ. ಈ ಮರಕ್ಕೆ ಮುಖ್ಯವಾಗಿ ನಾಲ್ಕು ಗುಣಗಳು. ಇವು ಪ್ರಪಂಚಕ್ಕೂ, ಅಶ್ವತ್ಥಕ್ಕೂ ಸಮಾನವಾಗಿರುವುವು.</p>.<p><strong>ಬಹುಕಾಲಿತ್ವ:</strong> ಮರವಾಗಲಿ, ಪ್ರಪಂಚವಾಗಲಿ, ಬಹುದೀರ್ಘಕಾಲ ಇರುವಂಥವು. ಒಂದು ಕಡೆ ಬಾಡಿದರೆ ಮತ್ತೊಂದೆಡೆ ಚಿಗುರುತ್ತದೆ. ಎಲ್ಲೊ ಒಂದು ವೈರಸ್ ಬಂದೋ, ಯಾವುದೋ ನಿಸರ್ಗದ ಪ್ರಕೋಪದಿಂದಲೇ ಸಹಸ್ರಾರು ಜನ ಸಾಯುವುದನ್ನು ಕೇಳಿದ್ದೇವೆ. ಇದು ಈ ವಿಶ್ವವೆಂಬ ಅಶ್ವತ್ಥವೃಕ್ಷದ ಒಂದು ಕೊಂಬೆ ಬಾಡಿದಂತೆ. ಆದರೆ ವಿಶ್ವ ಕೊನೆಯಾಗಲಿಲ್ಲ, ಮತ್ತೆಲ್ಲೋ ಅದು ಚಿಗುರುತ್ತಲೇ ಇದೆ. ಮನುಷ್ಯ ಜೀವನ, ಸಂತಾನ ಪರಂಪರೆಯಲ್ಲಿ ದೀರ್ಘಜೀವಿ.</p>.<p><strong>ಬಹುಗ್ರಂಥಿಲತ್ವ:</strong> ಈ ಮರದ ಕೊಂಬೆಗಳೂ, ಬಿಳಲುಗಳೂ ಗಂಟುಗಂಟಾಗಿ, ಜಡೆಜಡೆಯಾಗಿ, ಸೊಟ್ಟಸೊಟ್ಟಗಾಗಿ ಎಲ್ಲೆಲ್ಲಿಯೋ ಸಿಕ್ಕಿಕೊಂಡಂತಿವೆ. ಅಂತೆಯೇ ಪ್ರಪಂಚದ ತೊಡಕುಗಳು, ಸಿಕ್ಕುಗಳು ಬಿಡಿಸಲಾರದಂತೆ ಹೆಣೆದುಕೊಂಡಿವೆ. ಇವೆಲ್ಲ ಋಣಾನುಬಂಧದ ಎಳೆತಗಳು.</p>.<p><strong>ಬಹುವಿಸ್ತ್ರತತ್ವ:</strong> ಮರದ ಕೊಂಬೆ, ಕವಲುಗಳು, ಬಿಳಲುಗಳು, ಬೇರುಗಳು ಬಹುದೂರ ಹರಡಿರುತ್ತವೆ. ಅದರಂತೆಯೇ ಸಂಸಾರದ ಶಾಖೆಗಳು, ಮನುಷ್ಯನ ಬದುಕು ಎಲ್ಲೆಡೆಗೆ ವಿಸ್ತಾರವಾಗಿ ಹರಡಿಕೊಂಡಿದೆ.</p>.<p><strong>ಬಹುಪೋಷಕತ್ವ</strong>: ಈ ಬೃಹತ್ ಮರ ಅನೇಕ ಪಕ್ಷಿ, ಕ್ರಿಮಿ, ಕೀಟಗಳಿಗೆ ಆಶ್ರಯವಾಗಿದೆ. ಅಂತೆಯೇ ಈ ಪ್ರಪಂಚ ಕೂಡ ಮನುಷ್ಯರನ್ನು ಒಳಗೊಂಡಂತೆ ಲಕ್ಷಾಂತರ ಜೀವರಾಶಿಗಳಿಗೆ ನೆಲೆಯಾಗಿದೆ, ಪೋಷಕವಾಗಿದೆ.</p>.<p>ಹೀಗೆ ಅಶ್ವತ್ಥವೃಕ್ಷ ಸದಾ ಕಾಲ ನವ, ನವೀನತೆಯಿಂದ ಕೂಡಿರುವುದಲ್ಲದೆ ಚಿರಾಯುವೂ ಆಗಿದೆ. ಅದರಂತೆಯೇ ಈ ವಿಶ್ವವೃಕ್ಷವೂ ಸದಾಕಾಲ ಹೊಸದಾಗುತ್ತ, ಬದಲಾಯಿಸುತ್ತ ಇದ್ದರೂ ಕೋಟಿ ವರ್ಷಗಳಿಂದ ಬದುಕಿ ಚಿರಂಜೀವಿಯಾಗಿದೆ. ಈ ಕಗ್ಗ ನಮಗೆ ಎರಡು ವಿಷಯಗಳನ್ನು ತಿಳಿಸುತ್ತದೆ.</p>.<p>ನೀನು ಒಬ್ಬ ಮನುಷ್ಯ ಈ ವಿಶ್ವ ವೃಕ್ಷದ ಒಂದು ಕೊಂಬೆ ಇದ್ದ ಹಾಗೆ. ಅಂದರೆ ಈ ಅಪರಂಪಾರವಾದ ವಿಶ್ವದಲ್ಲಿ ನಿನಗೂ ಒಂದು ಪ್ರಮುಖವಾದ ಸ್ಥಾನವಿದೆ. ನಿನ್ನ ಬದುಕು ವ್ಯರ್ಥವಲ್ಲ, ಅಪ್ರಯೋಜಕವಲ್ಲ. ಇಲ್ಲಿ ಎಚ್ಚರಿಕೆಯೂ ಇದೆ. ನೀನೇ ವಿಶ್ವದ ಕೇಂದ್ರವೆಂಬಂತೆ, ನೀನಿಲ್ಲದೆ ಪ್ರಪಂಚ ನಡೆಯದೆಂಬ ಜಂಬ ಬೇಡ. ಈ ವಿಶ್ವವೃಕ್ಷದಲ್ಲಿ ನೀನು ಒಂದು ಕೊಂಬೆ ಮಾತ್ರ. ಈ ವಿಶ್ವದಲ್ಲಿ ನನ್ನ ಅಲ್ಪತೆಯನ್ನೂ, ನನ್ನ ಪ್ರಾಮುಖ್ಯತೆಯನ್ನು ಏಕಕಾಲದಲ್ಲಿ ತೋರಿ ಧೈರ್ಯನೀಡುವ, ಎಚ್ಚರಿಸುವ ಈ ಕಗ್ಗ ತುಂಬ ಮನೋಜ್ಞವಾದದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |</strong></em><br /><em><strong>ಸಂದಿಹುದು ಚಿರನವತೆಯಶ್ವತ್ಥಮರಕೆ ||</strong></em><br /><em><strong>ಎಂದೆಂದುಮಂತಿರುವುದೀ ವಿಶ್ವವೃಕ್ಷವದ |</strong></em><br /><em><strong>ರೊಂದು ರೆಂಬೆಯೊ ನೀನು – ಮಂಕುತಿಮ್ಮ </strong></em><strong>|| 252 ||</strong></p>.<p><strong>ಪದ-ಅರ್ಥ:</strong> ಬಾಡಲಿನ್ನೊಂದು=ಬಾಡಲು+ಇನ್ನೊಂದು, ಸಂದಿಹುದು=ದೊರೆತಿಹುದು, ಚಿರನವತೆಯಶ್ವತ್ಥಮರಕೆ=ಚಿರ(ಶಾಶ್ವತವಾದ)+ನವತೆ(ಹೊಸತು)+ಅಶ್ವತ್ಥ ಮರಕೆ, ಎಂದೆಂದುಮಂತಿರುವುದೀ=ಎಂದೆಂದು+ಅಂತು+ಇರುವುದು+ಈ,</p>.<p><strong>ವಾಚ್ಯಾರ್ಥ:</strong> ಒಂದು ಕೊಂಬೆ ಬಾಡುವಾಗ ಮತ್ತೊಂದು ಕೊಂಬೆ ಚಿಗುರುತ್ತದೆ. ಹೀಗೆ ಈ ಅಶ್ವತ್ಥಮರಕ್ಕೆ ಹೊಸತನ ಬಂದಿದ್ದು, ಶಾಶ್ವತವಾಗಿದೆ. ಎಂದೆಂದೂ ಹೀಗೆಯೇ ಇರುವ ವಿಶ್ವವೆಂಬ ಅಶ್ವತ್ಥಮರದ ಒಂದು ಕೊಂಬೆ ನೀನು.</p>.<p><strong>ವಿವರಣೆ:</strong> ಅಶ್ವತ್ಥವೃಕ್ಷದ ಬಗ್ಗೆ ಕಠೋಪನಿಷತ್ತಿನಲ್ಲಿ ಸುಂದರವಾದ ಮಾತಿದೆ. ಯಮ ಈ ಪ್ರಪಂಚವನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುತ್ತಾನೆ. ಈ ಮರಕ್ಕೆ ಮುಖ್ಯವಾಗಿ ನಾಲ್ಕು ಗುಣಗಳು. ಇವು ಪ್ರಪಂಚಕ್ಕೂ, ಅಶ್ವತ್ಥಕ್ಕೂ ಸಮಾನವಾಗಿರುವುವು.</p>.<p><strong>ಬಹುಕಾಲಿತ್ವ:</strong> ಮರವಾಗಲಿ, ಪ್ರಪಂಚವಾಗಲಿ, ಬಹುದೀರ್ಘಕಾಲ ಇರುವಂಥವು. ಒಂದು ಕಡೆ ಬಾಡಿದರೆ ಮತ್ತೊಂದೆಡೆ ಚಿಗುರುತ್ತದೆ. ಎಲ್ಲೊ ಒಂದು ವೈರಸ್ ಬಂದೋ, ಯಾವುದೋ ನಿಸರ್ಗದ ಪ್ರಕೋಪದಿಂದಲೇ ಸಹಸ್ರಾರು ಜನ ಸಾಯುವುದನ್ನು ಕೇಳಿದ್ದೇವೆ. ಇದು ಈ ವಿಶ್ವವೆಂಬ ಅಶ್ವತ್ಥವೃಕ್ಷದ ಒಂದು ಕೊಂಬೆ ಬಾಡಿದಂತೆ. ಆದರೆ ವಿಶ್ವ ಕೊನೆಯಾಗಲಿಲ್ಲ, ಮತ್ತೆಲ್ಲೋ ಅದು ಚಿಗುರುತ್ತಲೇ ಇದೆ. ಮನುಷ್ಯ ಜೀವನ, ಸಂತಾನ ಪರಂಪರೆಯಲ್ಲಿ ದೀರ್ಘಜೀವಿ.</p>.<p><strong>ಬಹುಗ್ರಂಥಿಲತ್ವ:</strong> ಈ ಮರದ ಕೊಂಬೆಗಳೂ, ಬಿಳಲುಗಳೂ ಗಂಟುಗಂಟಾಗಿ, ಜಡೆಜಡೆಯಾಗಿ, ಸೊಟ್ಟಸೊಟ್ಟಗಾಗಿ ಎಲ್ಲೆಲ್ಲಿಯೋ ಸಿಕ್ಕಿಕೊಂಡಂತಿವೆ. ಅಂತೆಯೇ ಪ್ರಪಂಚದ ತೊಡಕುಗಳು, ಸಿಕ್ಕುಗಳು ಬಿಡಿಸಲಾರದಂತೆ ಹೆಣೆದುಕೊಂಡಿವೆ. ಇವೆಲ್ಲ ಋಣಾನುಬಂಧದ ಎಳೆತಗಳು.</p>.<p><strong>ಬಹುವಿಸ್ತ್ರತತ್ವ:</strong> ಮರದ ಕೊಂಬೆ, ಕವಲುಗಳು, ಬಿಳಲುಗಳು, ಬೇರುಗಳು ಬಹುದೂರ ಹರಡಿರುತ್ತವೆ. ಅದರಂತೆಯೇ ಸಂಸಾರದ ಶಾಖೆಗಳು, ಮನುಷ್ಯನ ಬದುಕು ಎಲ್ಲೆಡೆಗೆ ವಿಸ್ತಾರವಾಗಿ ಹರಡಿಕೊಂಡಿದೆ.</p>.<p><strong>ಬಹುಪೋಷಕತ್ವ</strong>: ಈ ಬೃಹತ್ ಮರ ಅನೇಕ ಪಕ್ಷಿ, ಕ್ರಿಮಿ, ಕೀಟಗಳಿಗೆ ಆಶ್ರಯವಾಗಿದೆ. ಅಂತೆಯೇ ಈ ಪ್ರಪಂಚ ಕೂಡ ಮನುಷ್ಯರನ್ನು ಒಳಗೊಂಡಂತೆ ಲಕ್ಷಾಂತರ ಜೀವರಾಶಿಗಳಿಗೆ ನೆಲೆಯಾಗಿದೆ, ಪೋಷಕವಾಗಿದೆ.</p>.<p>ಹೀಗೆ ಅಶ್ವತ್ಥವೃಕ್ಷ ಸದಾ ಕಾಲ ನವ, ನವೀನತೆಯಿಂದ ಕೂಡಿರುವುದಲ್ಲದೆ ಚಿರಾಯುವೂ ಆಗಿದೆ. ಅದರಂತೆಯೇ ಈ ವಿಶ್ವವೃಕ್ಷವೂ ಸದಾಕಾಲ ಹೊಸದಾಗುತ್ತ, ಬದಲಾಯಿಸುತ್ತ ಇದ್ದರೂ ಕೋಟಿ ವರ್ಷಗಳಿಂದ ಬದುಕಿ ಚಿರಂಜೀವಿಯಾಗಿದೆ. ಈ ಕಗ್ಗ ನಮಗೆ ಎರಡು ವಿಷಯಗಳನ್ನು ತಿಳಿಸುತ್ತದೆ.</p>.<p>ನೀನು ಒಬ್ಬ ಮನುಷ್ಯ ಈ ವಿಶ್ವ ವೃಕ್ಷದ ಒಂದು ಕೊಂಬೆ ಇದ್ದ ಹಾಗೆ. ಅಂದರೆ ಈ ಅಪರಂಪಾರವಾದ ವಿಶ್ವದಲ್ಲಿ ನಿನಗೂ ಒಂದು ಪ್ರಮುಖವಾದ ಸ್ಥಾನವಿದೆ. ನಿನ್ನ ಬದುಕು ವ್ಯರ್ಥವಲ್ಲ, ಅಪ್ರಯೋಜಕವಲ್ಲ. ಇಲ್ಲಿ ಎಚ್ಚರಿಕೆಯೂ ಇದೆ. ನೀನೇ ವಿಶ್ವದ ಕೇಂದ್ರವೆಂಬಂತೆ, ನೀನಿಲ್ಲದೆ ಪ್ರಪಂಚ ನಡೆಯದೆಂಬ ಜಂಬ ಬೇಡ. ಈ ವಿಶ್ವವೃಕ್ಷದಲ್ಲಿ ನೀನು ಒಂದು ಕೊಂಬೆ ಮಾತ್ರ. ಈ ವಿಶ್ವದಲ್ಲಿ ನನ್ನ ಅಲ್ಪತೆಯನ್ನೂ, ನನ್ನ ಪ್ರಾಮುಖ್ಯತೆಯನ್ನು ಏಕಕಾಲದಲ್ಲಿ ತೋರಿ ಧೈರ್ಯನೀಡುವ, ಎಚ್ಚರಿಸುವ ಈ ಕಗ್ಗ ತುಂಬ ಮನೋಜ್ಞವಾದದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>